ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು: ಹಬ್ಬಕ್ಕೂ 14 ದಿನ ಮುಂಚಿತವಾಗಿಯೇ ತಪಾಸಣೆ ಶುರು
ಹಬ್ಬಗಳ ಹಿನ್ನೆಲೆಯಲ್ಲಿ ಸಿಹಿ ತಿನಿಸುಗಳ ಬೇಡಿಕೆ ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆ (ಎಫ್ಡಿಎ) ಸಿಹಿ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿದೆ. ಎಫ್ಎಸ್ಎಸ್ಎಐ ನಿಯಮಗಳ ಉಲ್ಲಂಘನೆ, ಕಳಪೆ ನೈರ್ಮಲ್ಯ ಮತ್ತು ಕೃತಕ ಬಣ್ಣಗಳ ಬಳಕೆ ಕುರಿತು ಗ್ರಾಹಕ ದೂರುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಅವಧಿ ಮೀರಿದ ಉತ್ಪನ್ನಗಳು ಮತ್ತು ಕೀಟಗಳ ಸಮಸ್ಯೆಗಳನ್ನು ಪರಿಶೀಲಿಸಲಾಗುತ್ತಿದೆ.
ಬೆಂಗಳೂರು, ಆ,31: ಹಬ್ಬಗಳ ಸರಣಿ ಸಮೀಪಿಸುತ್ತಿದ್ದಂತೆ ಸಿಹಿ ತಿನಿಸುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಆಹಾರ ಸುರಕ್ಷತಾ ಇಲಾಖೆ (ಎಫ್ಡಿಎ) ಸಿಹಿ ತಯಾರಿಕಾ ಘಟಕಗಳ ಮೇಲೆ ದಿಢೀರ್ ದಾಳಿ ನಡೆಸಿದೆ. ಎಫ್ಎಸ್ಎಸ್ಎಐ ನಿಯಮಗಳನ್ನು ಗಾಳಿಗೆ ತೂರಿ, ಕಳಪೆ ಗುಣಮಟ್ಟದ ಹಾಗೂ ಅಶುಚಿಯಾದ ವಾತಾವರಣದಲ್ಲಿ ಸಿಹಿ ತಯಾರಿಸುತ್ತಿರುವ ಘಟಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಗ್ರಾಹಕರಿಂದ ಬಂದ ದೂರುಗಳ ಆಧಾರದ ಮೇಲೆ ಈ ತಪಾಸಣೆಗಳನ್ನು ಕೈಗೊಳ್ಳಲಾಗುತ್ತಿದೆ. ಅವಧಿ ಮೀರಿದ ಸಿಹಿ ಪದಾರ್ಥಗಳು, ನೊಣಗಳು ಮತ್ತು ಜಿರಳೆಗಳ ಹಾವಳಿ ಹಾಗೂ ಸ್ವಚ್ಛತೆಯ ಕೊರತೆಗಳ ಬಗ್ಗೆ ವ್ಯಾಪಕ ದೂರುಗಳು ಬಂದಿದ್ದವು. ಅಸುರಕ್ಷಿತ ಕೃತಕ ಬಣ್ಣಗಳ ಬಳಕೆ, ವಿಶೇಷವಾಗಿ ಬೃಹತ್ ಪ್ರಮಾಣದಲ್ಲಿ ಸಿಹಿ ತಯಾರಿಸುವಾಗ, ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಆತಂಕ ವ್ಯಕ್ತವಾಗಿದೆ. ಕೃತಕ ಬಣ್ಣಗಳು ಕ್ಯಾನ್ಸರ್ ಕಾರಕವಾಗಿರುವ ಸಾಧ್ಯತೆಯನ್ನೂ ತಜ್ಞರು ಸೂಚಿಸಿದ್ದಾರೆ. ಎಫ್ಡಿಎ ಅಧಿಕಾರಿಗಳು ಸ್ವಚ್ಛತೆ ಕಾಪಾಡಿಕೊಳ್ಳದ ಮತ್ತು ನಿಯಮಗಳನ್ನು ಪಾಲಿಸದ ಅಂಗಡಿಗಳಿಗೆ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಹಬ್ಬಕ್ಕೂ ಸುಮಾರು 14 ದಿನಗಳ ಮುಂಚಿತವಾಗಿಯೇ ಈ ತಪಾಸಣೆಗಳನ್ನು ಆರಂಭಿಸುವ ಮೂಲಕ, ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಇಲಾಖೆ ಬದ್ಧವಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
