KPSC ಅಧ್ಯಕ್ಷರಿಗೆ ಬಿಗ್ ಶಾಕ್: ಶಿವಶಂಕರಪ್ಪ ಸಾಹುಕಾರ್ ಅಮಾನತು ಶಿಫಾರಸ್ಸಿಗೆ ಬಿತ್ತು ಸಹಿ
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿ ವಿವಾದಗಳ ಬೆನ್ನಲ್ಲೇ ಇದೀಗ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಹುದ್ದೆಯಿಂದ ಎರಡನೇ ಬಾರಿ ಅಮಾನತುಗೊಳಿಸಲಾಗಿದೆ. ಈ ಹಿಂದೆ ಉಂಟಾಗಿದ್ದ ಆಡಳಿತಾತ್ಮಕ ಮತ್ತು ಕಾನೂನು ತೊಡಕುಗಳನ್ನು ನಿವಾರಿಸಿಕೊಂಡಿರುವ ರಾಜ್ಯ ಸರ್ಕಾರವು, ನಿಯಮಾನುಸಾರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ರಾಜ್ಯಪಾಲರು ಈ ಕ್ರಮ ಕೈಗೊಂಡಿದ್ದಾರೆ.
ಬೆಂಗಳೂರು, (ಆಗಸ್ಟ್ 25): ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿ ವಿವಾದಗಳ ಬೆನ್ನಲ್ಲೇ ಇದೀಗ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರನ್ನು ಹುದ್ದೆಯಿಂದ ಎರಡನೇ ಬಾರಿ ಅಮಾನತುಗೊಳಿಸಲಾಗಿದೆ. ಈ ಹಿಂದೆ ಉಂಟಾಗಿದ್ದ ಆಡಳಿತಾತ್ಮಕ ಮತ್ತು ಕಾನೂನು ತೊಡಕುಗಳನ್ನು ನಿವಾರಿಸಿಕೊಂಡಿರುವ ರಾಜ್ಯ ಸರ್ಕಾರವು, ನಿಯಮಾನುಸಾರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ರಾಜ್ಯಪಾಲರು ಈ ಕ್ರಮ ಕೈಗೊಂಡಿದ್ದಾರೆ.
ಶಿವಶಂಕರಪ್ಪರನ್ನು ಅಮಾನತುಗೊಳಿಸಿರುವುದು ಇದು ಎರಡನೇ ಬಾರಿ. ಜುಲೈ 13ರಂದು ರಾಜ್ಯಪಾಲರು ಸಾಹುಕರ್ ಅವರನ್ನು ಅಮಾನತುಗೊಳಿಸಿದ್ದರು. ಆದರೆ ಕರ್ನಾಟಕ ಹೈಕೋರ್ಟ್ ಈ ಕ್ರಮದಲ್ಲಿ ‘ರಾಜ್ಯ ಸಚಿವ ಸಂಪುಟದ ಸಲಹೆ’ ಇಲ್ಲ ಎಂಬ ಕಾರಣಕ್ಕೆ ಆದೇಶವನ್ನು ರದ್ದುಗೊಳಿಸಿತು. ಇದರ ಬೆನ್ನಲ್ಲೇ ಆಗಸ್ಟ್ 21ರಂದು ರಾಜ್ಯ ಸಚಿವ ಸಂಪುಟವು ಶಿವಶಂಕರಪ್ಪರನ್ನು ಅಮಾನತುಗೊಳಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಇದೀಗ ಈ ಶಿಫಾರಸ್ಸಿಗೆ ರಾಜ್ಯಪಾಲರು ಸಹಿ ಹಾಕಿದ್ದು, ಅಧುಕೃತವಾಗಿ ಅಮಾನತು ಆದೇಶ ಹೊರಬೀಳುವುದು ಬಾಕಿ ಇದೆ.

