‘ಇದು ದರೋಡೆ ಪ್ಲ್ಯಾನ್​’: ಬೆಂಗಳೂರಿನಲ್ಲಿ ನಡೆದ ಹಲ್ಲೆ ಬಗ್ಗೆ ವಿವರ ನೀಡಿದ ಹರ್ಷಿಕಾ

| Updated By: ಮದನ್​ ಕುಮಾರ್​

Updated on: Apr 19, 2024 | 8:27 PM

‘ಅಲ್ಲಿ ಇದ್ದವರು ಯಾರು ಅಂತ ನಮಗೆ ಗೊತ್ತಿಲ್ಲ. ಚೈನ್​ ಎಳೆಯಲು ಬಂದಾಗ ಅವರು ಕಳ್ಳರು ಎಂಬುದು ಗೊತ್ತಾಯಿತು. ಪ್ಲ್ಯಾನ್​ ಮಾಡಿ ಈ ಕೆಲಸ ಮಾಡ್ತಾರೆ. ಗುಂಪಲ್ಲಿ ಬಂದು, ಕಳ್ಳತನ ಮಾಡಿ ಹಾಗೇ ಹೋಗಿಬಿಡುತ್ತಾರೆ. ಆ ಪರಿಸ್ಥಿತಿಯಲ್ಲಿ ಯಾರಿಗೂ ಏನೂ ಗೊತ್ತಾಗುವುದಿಲ್ಲ’ ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಮೇಲೆ ನಡೆದ ಹಲ್ಲೆ ಬಗ್ಗೆ ಅವರು ವಿವರ ನೀಡಿದ್ದಾರೆ.

ನಟಿ ಹರ್ಷಿಕಾ ಪೂಣಚ್ಚ (Harshika Poonacha) ಮತ್ತು ನಟ ಭುವನ್ ಪೊನ್ನಣ್ಣ ಅವರು ತಮ್ಮ ಕುಟುಂಬದವರ ಜೊತೆ ಬೆಂಗಳೂರಿನ ರೆಸ್ಟೋರೆಂಟ್​ವೊಂದಕ್ಕೆ ತೆರಳಿದ್ದಾಗ ಅವರ ಮೇಲೆ ಹಲ್ಲೆ (Assault) ಮಾಡಲಾಗಿದೆ. ಆ ಘಟನೆಯ ಬಗ್ಗೆ ಹರ್ಷಿಕಾ ಪೂಣಚ್ಚ ಅವರು ಸೋಶಿಯಲ್​ ಮೀಡಿಯಾದಲ್ಲಿ ದೀರ್ಘ ಪೋಸ್ಟ್​ ಮಾಡಿದ್ದಾರೆ. ಅಲ್ಲದೇ ‘ಟಿವಿ9 ಕನ್ನಡ’ಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದು, ಘಟನೆಯ ಬಗ್ಗೆ ಎಳೆಎಳೆಯಾಗಿ ಮಾಹಿತಿ ನೀಡಿದ್ದಾರೆ. ಏಪ್ರಿಲ್​ 2ರಂದು ಈ ಘಟನೆ ನಡೆದಿತ್ತು. ಅದರ ಬಗ್ಗೆ ಹರ್ಷಿಕಾ ಈಗ ಮಾತನಾಡಿದ್ದಾರೆ. ‘ನಮಗೆ ಆ ರೆಸ್ಟೋರೆಂಟ್​ ಇಷ್ಟ. ಹಾಗಾಗಿ ಅಲ್ಲಿಗೆ ಹೋಗಿದ್ವಿ. ಕಾರು ತೆಗೆಯುವಾಗ ಕೆಲವರು ಜಗಳ ಶುರು ಮಾಡಿದರು. ಕಾಲರ್​ ಹಿಡಿದುಕೊಂಡು ಹಲ್ಲೆಗೆ ಮುಂದಾದರು. ಭುವನ್ ಧರಿಸಿದ ಚೈನ್​ ಕಟ್​ ಆಯಿತು. ಆ ಶಾಕ್​ನಲ್ಲಿ ನಮಗೆ ಗೊತ್ತಾಗುತ್ತಿರಲಿಲ್ಲ. ಪ್ಲ್ಯಾನ್​ ಮಾಡಿಕೊಂಡು ನಡೆಸಿದ ದರೋಡೆ ಇದು. ಒಂದು ಗುಂಪಿನಲ್ಲಿ ಏನಾಗುತ್ತದೆ ಅಂತ ಊಹಿಸೋಕೆ ಆಗಲ್ಲ. ನಮಗೆ ಈ ರೀತಿ ಆಗುತ್ತಿರುವಾಗ ಸಾಮಾನ್ಯ ಜನರಿಗೆ, ಬಡವರಿಗೆ ಏನೆಲ್ಲ ತೊಂದರೆ ಆಗಿರಬಹುದು? ಜನರಲ್ಲಿ ಜಾಗೃತಿ ಮೂಡಲಿ ಎಂಬ ಉದ್ದೇಶದಿಂದ ನಾನು ಸೋಶಿಯಲ್​ ಮೀಡಿಯಾದಲ್ಲಿ ಇದನ್ನು ಪೋಸ್ಟ್​ ಮಾಡಿದ್ದೇನೆ. ಕಾನೂನಿನ ಹೋರಾಟದ ಬಗ್ಗೆ ಭುವನ್(Bhuvan Ponnanna) ಜೊತೆ ಮಾತನಾಡುತ್ತೇನೆ. ಒಂದು ನಿರ್ಧಾರಕ್ಕೆ ಬರುತ್ತೇವೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on