ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇವತ್ತು ಮಂಡಿಸಿದ ಕರ್ನಾಟಕ ಬಜೆಟ್ 2024 ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ನೀವು ನೋಡಿರಬಹುದು, ಬಜೆಟ್ ಮಂಡನೆಯಾಗುತ್ತಿರುವಾಗಲೇ ಜೆಡಿಎಸ್ ಮತ್ತು ಬಿಜೆಪಿ ಶಾಸಕರು ಸಭಾತ್ಯಾಗ (walkout) ಮಾಡಿದರು, ಆದರೆ ಆಡಳಿತ ಪಕ್ಷದ ನಾಯಕರಿಗೆ ಬಜೆಟ್ ಸಹಜವಾಗೇ ಸಂತೋಷ ನೀಡಿದೆ. ವಿಧಾನ ಸಭೆಯ ಆವರಣದಲ್ಲಿ ಟಿವಿ9 ಕನ್ನಡ ಪ್ರತಿನಿಧಿಯೊಂದಿಗೆ ಮಾತಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಸಿದ್ದರಾಮಯ್ಯನವರ ಬಜೆಟ್ ಖುಷಿ ನೀಡಿದೆ, ತೃಪ್ತಿ ತಂದಿದೆ ಎಂದು ಹೇಳಿದರು. ಕೇಂದ್ರ ಸರ್ಕಾರದಿಂದ ಯಾವುದೇ ನೆರವಿಲ್ಲದಿದ್ದರೂ, ಎಲ್ಲ ವರ್ಗಗಳನ್ನು ಸರಿದೂಗಿಸಿಕೊಂಡು ಹೋಗುವ ಅತ್ಯುತ್ತಮ ಬಜೆಟ್ ಅನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದು ಅವರು ಹೇಳಿದರು. ವಿರೋಧ ಪಕ್ಷದ ನಾಯಕರು ಸಭಾತ್ಯಾಗ ಮಾಡಿದ್ದನ್ನು ಗೇಲಿ ಮಾಡಿದ ಹೆಬ್ಬಾಳ್ಕರ್, ಯಾವುದೇ ರಾಜ್ಯದಲ್ಲಿ ಅಥವಾ ಕೇಂದ್ರದಲ್ಲಿ ಬಜೆಟ್ ಮಂಡಿಸುವಾಗ ಯಾರೂ ಸಭಾತ್ಯಾಗ ಮಾಡಲ್ಲ, ಆದರೆ ರಾಜ್ಯದ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಒಂದು ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ, ಅವರು ಏನಾದರೂ ಮಾಡಿಕೊಳ್ಳಲಿ, ಜನರಂತೂ ಅವರ ವರ್ತನೆಗಳನ್ನು ಗಮನಿಸುತ್ತಿದ್ದಾರೆ ಎಂದು ಹೇಳಿದರು. ತಮ್ಮ ಇಲಾಖೆಗೆ ಸಿಕ್ಕಿರುವ ಅನುದಾನಗಳಿಗೆ ಸಚಿವೆ ಸಂತಸ ವ್ಯಕ್ತಪಡಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ