ದೆಹಲಿಗೆ ಡಿಕೆ ಶಿವಕುಮಾರ್ ಬೆಂಬಲಿಗರ ದೌಡು: ಕೆಎನ್ ರಾಜಣ್ಣ ಅಚ್ಚರಿ ಮಾತು! ಹೇಳಿದ್ದೇನು ನೋಡಿ

Updated on: Nov 21, 2025 | 10:08 AM

ರಾಜಕಾರಣ ನಿಂತ ನೀರಲ್ಲ, ಚಲನಶೀಲ ಪ್ರಕ್ರಿಯೆ ಎಂದು ಕೆಎನ್ ರಾಜಣ್ಣ ಬಣ್ಣಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿ.ಕೆ. ಶಿವಕುಮಾರ್ ಏಕೈಕ ಉಪಮುಖ್ಯಮಂತ್ರಿಯಾಗಿ ಮುಂದುವರಿಯುವ ಕುರಿತು ಎಐಸಿಸಿ ನಿರ್ಧಾರ ಆಗಿತ್ತು ಎಂದಿ ಅವರು ಹೇಳಿದ್ದಾರೆ. ನವೆಂಬರ್ ಕ್ರಾಂತಿ ಮತ್ತು ಪಕ್ಷದೊಳಗೆ ನಡೆಯುವ ಅಧಿಕಾರದ ಹೋರಾಟಗಳು ರಾಜಕಾರಣದ ಸಹಜ ಭಾಗ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು, ನವೆಂಬರ್ 21: ಕರ್ನಾಟಕ ಕಾಂಗ್ರೆಸ್​​ನಲ್ಲಿ ಅಧಿಕಾರ ಹಂಚಿಕೆಯ ಗುಸುಗುಸು ಜೋರಾಗಿರುವಂತೆಯೇ ಸಿಎಂ ಸಿದ್ದರಾಮಯ್ಯ ಬಣದ ಆಪ್ತ ಕೆಎನ್ ರಾಜಣ್ಣ ಆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜಕಾರಣ ಎಂದರೆ ನಿಂತ ನೀರಲ್ಲ, ಅದು ನಿರಂತರವಾಗಿ ಚಲನಶೀಲವಾಗಿರುವ ಪ್ರಕ್ರಿಯೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಪಕ್ಷದೊಳಗಿನ ಭಿನ್ನಮತಗಳ ಕುರಿತು ಮಾತನಾಡಿದ ಅವರು, ಅಧಿಕಾರದಲ್ಲಿರುವವರು ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೆ, ಅಧಿಕಾರವಿಲ್ಲದವರು ಅದನ್ನು ಪಡೆಯಲು ಹೋರಾಡುತ್ತಾರೆ ಎಂದಿದ್ದಾರೆ.

ಎಐಸಿಸಿ ನೀಡಿದ್ದ ಪ್ರೆಸ್ ಸ್ಟೇಟ್‌ಮೆಂಟ್ ಉಲ್ಲೇಖಿಸಿದ ರಾಜಣ್ಣ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮತ್ತು ಡಿಕೆ ಶಿವಕುಮಾರ್ ಅವರು ಏಕೈಕ ಉಪಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಅದರಲ್ಲಿ ಲಿಖಿತವಾಗಿ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ನಿರ್ಧಾರವನ್ನು ಎಲ್ಲರೂ ಅನುಸರಿಸಬೇಕು ಎಂದರು. ನವೆಂಬರ್ ಕ್ರಾಂತಿ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದ ರಾಜಣ್ಣ, ರಾಜಕಾರಣ ಸದಾ ಬದಲಾಗುತ್ತಲೇ ಇರುತ್ತದೆ. ವಿರೋಧ ಪಕ್ಷಗಳಲ್ಲೂ ಆಂತರಿಕ ಹೋರಾಟಗಳು ನಡೆಯುತ್ತಿದ್ದು, ಇದು ರಾಜಕೀಯದ ಸಾಮಾನ್ಯ ಸಂಗತಿ ಎಂದರು. ಡಿಸಿಎಂ ಬಣ ದೆಹಲಿಗೆ ತೆರಳಿದ್ದಕ್ಕೂ ಸಿದ್ದರಾಮಯ್ಯ ಬಣದ ಸಭೆಗಳಿಗೂ ಸಂಬಂಧವಿಲ್ಲ. ಇದು ಪೂರ್ವನಿಗದಿತವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More