ಕೈದಿಗಳಿಗೆ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕರ್ನಾಟಕದ ಜೈಲುಗಳಲ್ಲಿ ಡಿಜಿಪಿ ಅಲೋಕ್ ಕುಮಾರ್ ಭಾರಿ ಸುಧಾರಣೆಗಳನ್ನು ತಂದಿದ್ದಾರೆ. ಹತ್ತು-ಇಪ್ಪತ್ತು ವರ್ಷಗಳಿಂದ ಒಂದೇ ಬ್ಯಾರಕ್ನಲ್ಲಿದ್ದ ಕೈದಿಗಳಿಗೆ ಆಲ್ಫಾಬೆಟಿಕ್ ಪ್ರಕಾರ ಬ್ಯಾರಕ್ ಬದಲಾವಣೆ ಮಾಡಲಾಗುತ್ತಿದೆ. ಇದು ಭ್ರಷ್ಟಾಚಾರ, ಮೊಬೈಲ್ ಅಕ್ರಮ ಬಳಕೆ ಮತ್ತು ಹಿರಿಯ ಕೈದಿಗಳ ಪ್ರಭಾವವನ್ನು ತಡೆಯುವ ಗುರಿಯನ್ನು ಹೊಂದಿದೆ. ಈ ಹೊಸ ಕ್ರಮಗಳಿಂದ ಖೈದಿಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.
ಬೆಂಗಳೂರು, ಮೇ 21: ಕರ್ನಾಟಕ ರಾಜ್ಯದ ಜೈಲುಗಳಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ತಡೆಯಲು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿದ್ದಾರೆ. ಜೈಲುಗಳಲ್ಲಿ ದೀರ್ಘಕಾಲದಿಂದ ಒಂದೇ ಸ್ಥಳದಲ್ಲಿ ನೆಲೆಸಿದ್ದ ಕೈದಿಗಳಿಗೆ ಬಿಗ್ ಶಾಕ್ ನೀಡಲಾಗಿದ್ದು, ಅವರ ಬ್ಯಾರಕ್ಗಳನ್ನು ಬದಲಾಯಿಸಲು ಸೂಚನೆ ನೀಡಲಾಗಿದೆ. ಸುಮಾರು 10, 15, 20 ವರ್ಷಗಳಿಂದ ಒಂದೇ ಬ್ಯಾರಕ್ನಲ್ಲಿ ಇರುತ್ತಿದ್ದ ಕೈದಿಗಳಿಗೆ ಇನ್ನು ಮುಂದೆ ಆಲ್ಫಾಬೆಟಿಕ್ ಆಧಾರದ ಮೇಲೆ ಬ್ಯಾರಕ್ಗಳನ್ನು ಹಂಚಿಕೆ ಮಾಡಲಾಗುತ್ತದೆ. ಈ ಕ್ರಮವು ಕೈದಿಗಳ ಆಯ್ಕೆಯ ಬ್ಯಾರಕ್ಗಳಿಗೆ ಕಡಿವಾಣ ಹಾಕುತ್ತದೆ. ಅಲ್ಲದೆ, ಮೊಬೈಲ್ ಫೋನ್ಗಳ ಅಕ್ರಮ ಬಳಕೆ ಮತ್ತು ಜೈಲಾಧಿಕಾರಿಗಳ ಮೂಲಕ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೂ ಈ ವ್ಯವಸ್ಥೆ ಬ್ರೇಕ್ ಹಾಕಲಿದೆ. ಹಿರಿಯ ಕೈದಿಗಳು ತಮ್ಮ ಪ್ರಭಾವ ಬಳಸಿಕೊಂಡು ತಮ್ಮಿಷ್ಟದ ಸೆಲ್ಗಳನ್ನು ಪಡೆಯುವುದನ್ನು ಮತ್ತು ಇತರ ಕೈದಿಗಳೊಂದಿಗೆ ಡೀಲ್ ಮಾಡುವುದನ್ನು ಈ ಹೊಸ ನಿಯಮಗಳು ತಡೆಯಲಿವೆ. ರಾಜ್ಯದ ಎಲ್ಲಾ ಜೈಲುಗಳಲ್ಲಿ ಈ ಹೊಸ ನಿಯಮ ಜಾರಿಯಾಗಿದ್ದು, ಬೆಂಗಳೂರು ಪರಪ್ಪನ ಅಗ್ರಹಾರ ಜೈಲು ಸಹ ಇದಕ್ಕೆ ಒಳಪಟ್ಟಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

