ತುಮಕೂರು: ಸರ್ಕಾರಿ ಆಸ್ಪತ್ರೆಯ ಮಾತ್ರೆಗಳು ಸ್ಮಶಾನ, ಗೋಮಾಳದಲ್ಲಿ ಪತ್ತೆ
ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಸರ್ಕಾರಿ ಆಸ್ಪತ್ರೆಯ ಸಾವಿರಾರು ಮಧುಮೇಹ ಮಾತ್ರೆಗಳು ಸ್ಮಶಾನದಲ್ಲಿ ಪತ್ತೆಯಾಗಿವೆ. 2026ರವರೆಗೆ ಬಳಸಬಹುದಾದ ಈ ಮಾತ್ರೆಗಳು ಬಡ ರೋಗಿಗಳಿಗೆ ಉಚಿತವಾಗಿ ಸಿಗಬೇಕಿದ್ದವು. ಮಾತ್ರೆ ಎಸೆದಿದ್ದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ, ಅಲ್ಲದೆ ಕೆರೆಗೆ ವಿಷ ಬೆರೆಯುವ ಭೀತಿಯೂ ಎದುರಾಗಿದೆ. ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.
ಕೊರಟಗೆರೆ, ಜು.15: ಬಡ ರೋಗಿಗಳಿಗೆ ಉಚಿತವಾಗಿ ಸಿಗಬೇಕಾದ ಸರ್ಕಾರಿ ಆಸ್ಪತ್ರೆಯ ಮಾತ್ರೆಗಳು ಸ್ಮಶಾನ ಹಾಗೂ ಜಾನುವಾರುಗಳು ಮೇಯುವ ಗೋಮಾಳದಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹುಲಿಕುಂಟೆ ಸಮೀಪದ ಕಾಮೇನಹಳ್ಳಿಯಲ್ಲಿ ನಡೆದಿದೆ. ಇನ್ನೂ ಬಳಸಲು ಯೋಗ್ಯವಾಗಿದ್ದ ಸಾವಿರಾರು ಮಾತ್ರೆಗಳನ್ನು ಯಾರಿಗೂ ತಿಳಿಯದಂತೆ ನಿರ್ಜನ ಪ್ರದೇಶದಲ್ಲಿ ಎಸೆದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಾತ್ರೆಗಳು ಸಿಕ್ಕ ಜಾಗದ ಸಮೀಪದಲ್ಲೇ ಪ್ರಮುಖ ಕೆರೆಯೊಂದಿದ್ದು, ಮಳೆ ಬಂದರೆ ಈ ಮಾತ್ರೆಗಳ ರಾಸಾಯನಿಕ ನೀರು ಕೆರೆ ಸೇರಿ ಇಡೀ ಗ್ರಾಮದ ಜಲಮೂಲ ಕಲುಷಿತಗೊಳ್ಳುವ ಭೀತಿ ಎದುರಾಗಿದೆ. ಪತ್ತೆಯಾದ ಮಾತ್ರೆಗಳಲ್ಲಿ ಬಹುತೇಕವು ಸಕ್ಕರೆ ಕಾಯಿಲೆ ಅಥವಾ ಮಧುಮೇಹ (Diabetes) ನಿಯಂತ್ರಣಕ್ಕೆ ನೀಡುವ ಮಾತ್ರೆಗಳಾಗಿದ್ದು, ಇವೆಲ್ಲವೂ ಸ್ಮಶಾನದ ಜಾಗದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸಾಮಾನ್ಯವಾಗಿ ಹಳೇ ಸ್ಟಾಕ್ ಅಥವಾ ಅವಧಿ ಮುಗಿದ (Expired) ಮಾತ್ರೆಗಳನ್ನು ಹೀಗೆ ಎಸೆಯಲಾಗುತ್ತದೆ. ಆದರೆ, ಇಲ್ಲಿ ಪತ್ತೆಯಾದ ಮಾತ್ರೆಗಳ ಮೇಲೆ ಆಗಸ್ಟ್ ಮತ್ತು ಸೆಪ್ಟೆಂಬರ್ 2026ರವರೆಗೆ ಬಳಸಲು ಕಾಲಾವಕಾಶ ಇರುವುದು ಕಂಡುಬಂದಿದೆ.ಈ ಎಲ್ಲಾ ಮಾತ್ರೆಗಳ ಸ್ಟ್ರಿಪ್ ಮೇಲೆ ಸ್ಪಷ್ಟವಾಗಿ ಇವು “ಸರ್ಕಾರಿ ಆಸ್ಪತ್ರೆಯ ಸರಬರಾಜು” ಎಂದು ಮುದ್ರಿಸಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
