ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ಅಕ್ರಮ ನೇಮಕಾತಿ: ಟಾಪರ್ಸ್ ಲಿಸ್ಟ್ ನೋಡಿ ಪೊಲೀಸರೇ ಶಾಕ್!
ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದ ಭಾರೀ ಹಗರಣವನ್ನು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದು, ಟಾಪರ್ಸ್ ಪಟ್ಟಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಓಎಂಆರ್ ತಿದ್ದುಪಡಿ, ನಕಲಿ ಪ್ರಮಾಣಪತ್ರಗಳು ಹಾಗೂ ಲಕ್ಷಾಂತರ ರೂಪಾಯಿಗಳ ವಿನಿಮಯದ ಮೂಲಕ ಅನರ್ಹರಿಗೆ ಹುದ್ದೆಗಳನ್ನು ನೀಡಲಾಗಿದೆ. ಬಸವರಾಜ್ ಕನ್ನಾಳೆಯ ಡೈರಿಯಲ್ಲಿ ಕೆಪಿಎಸ್ಸಿ ಹಗರಣದ ಹಲವು ಮಹತ್ವದ ಮಾಹಿತಿ ದೊರೆತಿದೆ.
ಬೆಂಗಳೂರು, ಸೆಪ್ಟೆಂಬರ್ 5: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ದೊಡ್ಡಮಟ್ಟದ ಅಕ್ರಮ ನಡೆದಿರುವುದು ಸಿಐಡಿ ತನಿಖೆಯಿಂದ ಬಯಲಾಗಿದೆ. ಈ ಹಗರಣದ ತನಿಖೆ ನಡೆಸುತ್ತಿರುವ ಪೊಲೀಸರು, ಆಯ್ಕೆಯಾದ ಟಾಪರ್ಸ್ ಪಟ್ಟಿಯನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಪರೀಕ್ಷೆಯು ಅತ್ಯಂತ ಕಠಿಣವಾಗಿತ್ತು. ಆದಾಗ್ಯೂ, ಡಿಗ್ರಿಯಲ್ಲಿ ಕಳಪೆ ಅಂಕಗಳನ್ನು ಗಳಿಸಿ, ಹಲವು ಬಾರಿ ಪಾಸಾಗಲು ಪ್ರಯತ್ನಿಸಿ ಕೊನೆಗೆ ಪಾಸಾಗಿದ್ದವರು ಪಶುವೈದ್ಯಾಧಿಕಾರಿಗಳ ನೇಮಕಾತಿ ಪಟ್ಟಿಯಲ್ಲಿ ಟಾಪರ್ಸ್ ಪಟ್ಟಿಯಲ್ಲಿರುವುದು ಕಂಡುಬಂದಿದೆ. ಓಎಂಆರ್ ಶೀಟ್ಗಳಲ್ಲಿ ತಿದ್ದುಪಡಿ, ನಕಲಿ ಜಾತಿ ಪ್ರಮಾಣಪತ್ರಗಳ ಸೃಷ್ಟಿ, ಮತ್ತು ಹಣದ ವಿನಿಮಯದ ಮೂಲಕ ಅಕ್ರಮ ನೇಮಕಾತಿ ನಡೆದಿರುವುದನ್ನು ಸಿಐಡಿ ಪತ್ತೆ ಮಾಡಿದೆ. ಪ್ರತಿ ಹುದ್ದೆಗೆ 80 ಲಕ್ಷದಿಂದ 1 ಕೋಟಿ ರೂಪಾಯಿ ವರೆಗೂ ಹಣದ ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಈ ಹಗರಣದಲ್ಲಿ ಕೆಪಿಎಸ್ಸಿ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಹಾಗೂ ಪರೀಕ್ಷಾ ಕಸ್ಟೋಡಿಯನ್ಗಳು ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಬಸವರಾಜ್ ಕನ್ನಾಳೆಯ ಮನೆಯಲ್ಲಿ ದೊರೆತ ಡೈರಿಯು ಈ ಅಕ್ರಮಗಳ ಬಗ್ಗೆ ಮತ್ತಷ್ಟು ಸುಳಿವುಗಳನ್ನು ನೀಡಿದೆ. ಈ ಹಗರಣದಲ್ಲಿ ಭಾಗಿಯಾದ 29 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮತ್ತೊಂದೆಡೆ, ಅರ್ಹ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

