ಲೋಕಾಯುಕ್ತ ದಾಳಿ ವೇಳೆ ಸಿಕ್ತು ಕಂತೆ ಕಂತೆ ನೋಟಿನ ಖಜಾನೆ!
ಲೋಕಾಯುಕ್ತ ಅಧಿಕಾರಿಗಳು ಕರ್ನಾಟಕದಲ್ಲಿ ನಾಲ್ವರು ಸರ್ಕಾರಿ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ವಸತಿ ಶಿಕ್ಷಣ ಸಂಸ್ಥೆಗಳ ಎಂಜಿನಿಯರ್ ಎಚ್.ಎಂ. ಜನಾರ್ಧನ್ ಮತ್ತು PWD ಮುಖ್ಯ ಎಂಜಿನಿಯರ್ ಪುರುಷೋತ್ತಮ್ ಸೇರಿದಂತೆ ಹಲವರ ಅಕ್ರಮ ಆಸ್ತಿಗಳು ಪತ್ತೆಯಾಗಿವೆ. ದಾವಣಗೆರೆ ಬೆಸ್ಕಾಂ ಎಂಜಿನಿಯರ್ ಆರ್.ಎಚ್. ಅರ್ಜುನ್ ಹಾಗೂ ಧಾರವಾಡ ಸರ್ವೆ ಇಲಾಖೆ ಸೂಪರ್ವೈಸರ್ ಸೋಮಲಿಂಗಪ್ಪ ಮನೆಗಳ ಮೇಲೂ ರೇಡ್ ನಡೆದಿದೆ.
ಬೆಂಗಳೂರು, ಫೆಬ್ರವರಿ 13: ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ನಾಲ್ವರು ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಹಲವು ಅಕ್ರಮಗಳನ್ನು ಪತ್ತೆ ಮಾಡಿದ್ದಾರೆ. ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷಕ ಎಂಜಿನಿಯರ್ ಎಚ್.ಎಂ. ಜನಾರ್ಧನ್ ಅವರಿಗೆ ಸೇರಿದ ಆರು ಸ್ಥಳಗಳಲ್ಲಿ ರೇಡ್ ಮಾಡಲಾಗಿದೆ. ಅಲ್ಲಿ ಆದಾಯ ಮೀರಿದ ಶೇಕಡ 216ರಷ್ಟು ಆಸ್ತಿ, ಅಂದರೆ 4.42 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.
PWD ಮುಖ್ಯ ಎಂಜಿನಿಯರ್ ಪುರುಷೋತ್ತಮ್ ಅವರ ಪದ್ಮನಾಭನಗರದ ಐಷಾರಾಮಿ ಮನೆ ಸೇರಿದಂತೆ ಬೆಂಗಳೂರಿನಲ್ಲಿ ಎರಡು ಕಡೆ ಹಾಗೂ ಮೈಸೂರಿನಲ್ಲಿ ಐದು ಕಡೆ ದಾಳಿ ನಡೆಸಲಾಗಿದೆ. ಇಲ್ಲಿ ಲಕ್ಷಾಂತರ ರೂಪಾಯಿ ನಗದು, ಚಿನ್ನಾಭರಣ, ಬೆಲೆಬಾಳುವ ವಸ್ತುಗಳು ಮತ್ತು ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ. ಪುರುಷೋತ್ತಮ್ ಅವರು ಎರಡು ಶಾಲೆಗಳನ್ನು ಸಹ ನಡೆಸುತ್ತಿದ್ದಾರೆ.
ದಾವಣಗೆರೆ ಬೆಸ್ಕಾಂ ಸಿವಿಲ್ ಎಂಜಿನಿಯರ್ ಆರ್.ಎಚ್. ಅರ್ಜುನ್ ಅವರ ಶಿವಮೊಗ್ಗದ ಗೋಪಾಳದಲ್ಲಿರುವ ಮನೆಯ ಮೇಲೆ ದಾಳಿ ಮಾಡಲಾಗಿದ್ದು, ಎರಡು ನಿವೇಶನ, ಮೂರು ಮನೆ ಮತ್ತು ಎರಡು ಎಕರೆ ಕೃಷಿ ಭೂಮಿಯ ದಾಖಲೆಗಳು ಪತ್ತೆಯಾಗಿವೆ. ಇದೇ ರೀತಿ ಧಾರವಾಡ ಸರ್ವೆ ಇಲಾಖೆ ಸೂಪರ್ವೈಸರ್ ಸೋಮಲಿಂಗಪ್ಪ ಅವರಿಗೆ ಸೇರಿದ ಭಾರತಿ ನಗರ ಬಡಾವಣೆ ಮನೆ, ಐಸ್ ಗೇಟ್ ಬಳಿಯ ಸರ್ವೆ ಕಚೇರಿ, ಹಾಗೂ ಬೆಳಗಾವಿಯ ಮುರಗೋಡದ ಮನೆ ಸೇರಿದಂತೆ ಒಟ್ಟು ನಾಲ್ಕು ಕಡೆ ರೇಡ್ ಮಾಡಲಾಗಿದೆ.

