ಪೊಲೀಸರ ಮೇಲೆ ಹಲ್ಲೆ ಮಾಡಿ ನಟೋರಿಯಸ್ ಕ್ರಿಮಿನಲ್ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಮಂಗಳೂರಿನಲ್ಲಿ ಬಂಧಿತನಾಗಿದ್ದ ಕುಖ್ಯಾತ ಕ್ರಿಮಿನಲ್ ಅಲ್ತಾಫ್ ಹುಸೇನ್ ಪೊಲೀಸರ ಮೇಲೆ ಹಲ್ಲೆ ನಡೆಸಿ ಹ್ಯಾಂಡ್ಕಫ್ ಸಹಿತ ಪರಾರಿಯಾಗಿದ್ದಾನೆ. ವಾಹನ ಕಳ್ಳತನ, ಸರಗಳ್ಳತನ, ಸುಲಿಗೆ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈ ಆರೋಪಿಯನ್ನು ಪಾಂಡೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದರು. ಅವನ ಇಬ್ಬರು ಸಹಚರರು ಸೆರೆ ಸಿಕ್ಕಿದ್ದು, ಅಲ್ತಾಫ್ ಹುಸೇನ್ ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಲಾಗಿದೆ. ನಗರದಲ್ಲಿ ಶೋಧ ಕಾರ್ಯ ತೀವ್ರಗೊಂಡಿದೆ.
ಮುಖ್ಯಾಂಶಗಳು
- ಕುಖ್ಯಾತ ಆರೋಪಿ ಅಲ್ತಾಫ್ ಹುಸೇನ್ ಪೊಲೀಸ್ ವಶದಿಂದ ಪರಾರಿ
- ಮಂಗಳೂರು ನಗರದ ರೋಜಾರಿಯೋ ಚರ್ಚ್ ರಸ್ತೆಯಲ್ಲಿ ಘಟನೆ
- ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು
ಮಂಗಳೂರು, ಜೂನ್ 27: ಪೊಲೀಸರ ಮೇಲೆ ಹಲ್ಲೆ ಮಾಡಿ ನಟೋರಿಯಸ್ ಕ್ರಿಮಿನಲ್ ಕೈಕೋಳದೊಂದಿಗೆ ಪರಾರಿ ಆಗಿರುವಂತಹ ಘಟನೆ ಮಂಗಳೂರು ನಗರದ ರೋಜಾರಿಯೋ ಚರ್ಚ್ ರಸ್ತೆಯಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಅಲ್ತಾಫ್ ಹುಸೇನ್ ಪರಾರಿಯಾದ ಕ್ರಿಮಿನಲ್. ಇತ ಪರಾರಿ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ವಾಹನ ಕಳ್ಳತನ, ಸರಗಳ್ಳತನ, ಸುಲಿಗೆ ಕೃತ್ಯದಲ್ಲಿ ಅಲ್ತಾಫ್ ಹುಸೇನ್ ತೊಡಗಿಸಿಕೊಂಡಿದ್ದ. ಉತ್ತರ ಪ್ರದೇಶ ಮೂಲದ ಮಹಮ್ಮದ್ ಸಿದ್ದಿಕ್, ರವಿ ಬೌರ ಎಂಬ ಇಬ್ಬರು ಸಹಚರರ ಜೊತೆ ಸೇರಿ ಕೃತ್ಯವೆಸಗುತ್ತಿದ್ದ. ನಗರದ ಜಪ್ಪಿನಮೊಗರಿನಲ್ಲಿ ನಡೆದ ಸರಗಳ್ಳತನವನ್ನು ಅಲ್ತಾಫ್ ಹುಸೇನ್ ಗ್ಯಾಂಗ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೆಲ ದಿನಗಳ ಹಿಂದೆ ನಗರದ ಮೀನುಗಾರಿಕಾ ಬಂದರು ಪ್ರದೇಶಕ್ಕೆ ಗ್ಯಾಂಗ್ ವಾಪಸ್ ಬಂದ ಖಚಿತ ಮಾಹಿತಿ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಿ ಪಾಂಡೇಶ್ವರ ಠಾಣೆಗೆ ಪೊಲೀಸರು ಕರೆತರುತ್ತಿದ್ದರು. ಈ ವೇಳೆ ಪೊಲೀಸರನ್ನು ತಳ್ಳಿ ಹಲ್ಲೆ ಮಾಡಿ ಪರಾರಿ ಆಗಿದ್ದಾನೆ. ಸದ್ಯ ಆರೋಪಿ ಪತ್ತೆಯಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
