ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಭಕ್ತರ ಪುಣ್ಯಸ್ನಾನಕ್ಕೂ ಪರದಾಟ
ಬೇಸಿಗೆ ಆರಂಭಕ್ಕೂ ಮುನ್ನವೇ ಮಂತ್ರಾಲಯದಲ್ಲಿ ತೀವ್ರ ನೀರಿನ ಸಮಸ್ಯೆ ಎದುರಾಗಿದೆ. ತುಂಗಭದ್ರಾ ನದಿಯಲ್ಲಿ ನೀರಿಲ್ಲದೆ ರಾಯರ ಭಕ್ತರು ಪುಣ್ಯಸ್ನಾನಕ್ಕೆ ಪರದಾಡುತ್ತಿದ್ದಾರೆ. ಈ ನಡುವೆ ಮಂತ್ರಾಲಯ ಮಠವು ಭಕ್ತರಿಗಾಗಿ ಬೋರ್ವೆಲ್, ಶುದ್ಧೀಕರಿಸಿದ ನೀರು ಹಾಗೂ ಶವರ್ ವ್ಯವಸ್ಥೆ ಮಾಡಿದೆ ಎಂದು ಸುಭುದೇಂದ್ರ ತೀರ್ಥರು ತಿಳಿಸಿದ್ದಾರೆ.
ರಾಯಚೂರು, ಫೆಬ್ರವರಿ 20: ಮಂತ್ರಾಲಯದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ತೀವ್ರ ನೀರಿನ ಸಮಸ್ಯೆ ತಲೆದೋರಿದೆ. ಪುಣ್ಯಸ್ನಾನ ಮಾಡಲು ಬರುವ ರಾಯರ ಭಕ್ತರು ತುಂಗಭದ್ರಾ ನದಿಯಲ್ಲಿ ನೀರಿಲ್ಲದೆ ಪರದಾಡುತ್ತಿದ್ದಾರೆ. ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಕುಸಿದಿದ್ದು, ಜಲಾಶಯದಲ್ಲಿ ಸ್ವಲ್ಪ ಪ್ರಮಾಣದ ನೀರು ಮಾತ್ರ ಲಭ್ಯವಿದೆ. ನದಿಯ ಗೇಟುಗಳನ್ನು ಈಗಾಗಲೇ ಮುಚ್ಚಲಾಗಿದೆ. ಈ ಸಮಸ್ಯೆಯನ್ನು ನಿವಾರಿಸಲು ಮತ್ತು ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ ನೋಡಿಕೊಳ್ಳಲು ಮಂತ್ರಾಲಯ ಮಠವು ಪರ್ಯಾಯ ವ್ಯವಸ್ಥೆಗಳನ್ನು ಮಾಡಿದೆ. ಮಠದ ವತಿಯಿಂದ ಬೋರ್ವೆಲ್ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ, ನದಿಯ ಮೇಲ್ಭಾಗದಲ್ಲಿ ಹರಿಯುವ ಅಲ್ಪ ಪ್ರಮಾಣದ ನೀರನ್ನು ಪಂಪ್ ಮಾಡಿ, ಶುದ್ಧೀಕರಿಸಿ ಕುಡಿಯಲು ಮತ್ತು ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭವಿಷ್ಯದಲ್ಲಿ ಶವರ್ಗಳನ್ನೂ ಅಳವಡಿಸಿ, ಭಕ್ತರಿಗೆ ಇನ್ನಷ್ಟು ಸೌಕರ್ಯ ಒದಗಿಸಲು ಮಠವು ಯೋಜಿಸಿದೆ. ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಸುಭುದೇಂದ್ರ ತೀರ್ಥರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
