6 ತಿಂಗಳಿಂದ ಪಾವತಿಯಾಗಿಲ್ಲ ಸಂಬಳ! ಗುತ್ತಿಗೆ ವೈದ್ಯಾಧಿಕಾರಿ ರಾಜೀನಾಮೆ
ದಕ್ಷಿಣ ಕನ್ನಡ ಜಿಲ್ಲೆಯ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದ ಗುತ್ತಿಗೆ ವೈದ್ಯಾಧಿಕಾರಿ ಡಾ. ಕುಲದೀಪ್ ಎಂ.ಡಿ. ಆರು ತಿಂಗಳ ಸಂಬಳ ದೊರೆಯದ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ಎರಡೂವರೆ ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಅವರಿಗೆ ಜೀವನ ನಿರ್ವಹಣೆ ಕಷ್ಟಕರವಾಗಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಮಂಗಳೂರು, ಡಿಸೆಂಬರ್ 22: ದಕ್ಷಿಣ ಕನ್ನಡ ಜಿಲ್ಲೆಯ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಕುಲದೀಪ್ ಎಂ.ಡಿ. ಅವರು ಕಳೆದ ಆರು ತಿಂಗಳಿಂದ ಸಂಬಳ ದೊರೆಯದ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಈ ನಿರ್ಧಾರ, ಸರ್ಕಾರವು ಗುತ್ತಿಗೆ ವೈದ್ಯಾಧಿಕಾರಿಗಳ ಸಂಬಳವನ್ನು ಬಾಕಿ ಉಳಿಸಿಕೊಂಡಿರುವ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದೆ. ಕಳೆದ ಎರಡೂವರೆ ವರ್ಷಗಳಿಂದ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಕುಲದೀಪ್ ಅವರಿಗೆ ಆರು ತಿಂಗಳ ಕಾಲ ವೇತನ ಲಭಿಸದಿರುವುದು ವೈಯಕ್ತಿಕ ಜೀವನ ನಿರ್ವಹಣೆಗೆ ಅತೀವ ಕಷ್ಟಕರವಾಗಿ ಪರಿಣಮಿಸಿತ್ತು. ಒಂದು ಅಥವಾ ಎರಡು ತಿಂಗಳು ಸಂಬಳದಲ್ಲಿ ವ್ಯತ್ಯಾಸವಾದರೂ ಜೀವನ ನಡೆಸಲು ಕಷ್ಟವಾಗುವ ಈ ಪ್ರಸ್ಕತ ಕಾಲಘಟ್ಟದಲ್ಲಿ, ಸತತ ಆರು ತಿಂಗಳ ವೇತನವಿಲ್ಲದೆ ಅವರು ಮಾನಸಿಕವಾಗಿ ನೊಂದಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿರುವ ಡಾ. ಕುಲದೀಪ್ ಅವರ ಪ್ರಕರಣ, ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ವೃತ್ತಿಪರರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ಎತ್ತಿ ತೋರಿಸಿದೆ.
