ಫೀಲ್ಡಿಗಿಳಿದ ಸಚಿವ ಕೃಷ್ಣ ಬೈರೇಗೌಡ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್ಲೈನ್ ಫಿಕ್ಸ್
ಬೆಂಗಳೂರು ಮೆಟ್ರೋ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಪಿಂಕ್ ಲೈನ್ನ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ. ವಿಭಾಗವನ್ನು ಆಗಸ್ಟ್ 15ರೊಳಗೆ ಪೂರ್ಣಗೊಳಿಸಲು ಗಡುವು ನೀಡಿದ್ದಾರೆ. ಅಲ್ಲದೆ, ಅಂಡರ್ಗ್ರೌಂಡ್ ತಾವರೆಕೆರೆಯಿಂದ ನಾಗವಾರ ವಿಭಾಗವನ್ನು ಮಾರ್ಚ್ 2027ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.
ಬೆಂಗಳೂರು, ಜೂನ್ 19: ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಬಿಎಂಆರ್ಸಿಎಲ್ ಅಧಿಕಾರಿಗಳೊಂದಿಗೆ ಮೆಟ್ರೋ ಯೋಜನೆಗಳ ಪ್ರಗತಿ ಕುರಿತು ಸಭೆ ನಡೆಸಿದರು. ಈ ಸಭೆಯಲ್ಲಿ ಪ್ರಮುಖವಾಗಿ ಮೆಟ್ರೋ ಕಾಮಗಾರಿಗಳಿಂದ ಉಂಟಾಗುತ್ತಿರುವ ಸಂಚಾರ ದಟ್ಟಣೆ ಮತ್ತು ಕಾರ್ಯಸ್ಥಳಗಳ ಕಳಪೆ ನಿರ್ವಹಣೆ ಬಗ್ಗೆ ಚರ್ಚಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ಮೆಟ್ರೋ ಜಾಲ 96 ಕಿ.ಮೀ ಇದೆ. ಮುಂದಿನ ದಿನಗಳಲ್ಲಿ ಪಿಂಕ್ ಮತ್ತು ಬ್ಲೂ ಲೈನ್ ಓಪನ್ ಆದರೆ 175 ಕಿಮೀ ಮೆಟ್ರೋ ಜಾಲ ವಿಸ್ತೀರ್ಣ ಆಗಲಿದೆ. ಪಿಂಕ್ ಲೈನ್ ಕಾಳೇನ ಅಗ್ರಹಾರ ಟು ತಾವರೆಕೆರೆ 6 ಮೆಟ್ರೋ ಸ್ಟೇಷನ್ಗಳನ್ನು ಆಗಸ್ಟ್ 15ರೊಳಗೆ ಓಪನ್ ಮಾಡಲು ಸೂಚನೆ ಕೊಟ್ಟಿದ್ದೇನೆ. ಉಳಿದ 12 ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್ ಮಾಡಲು ಮಾರ್ಚ್ 2027ರೊಳಗೆ ಓಪನ್ ಮಾಡುತ್ತೇವೆ ಅಂತ ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ ಎಂದರು. ಬ್ಲೂ ಲೈನ್ ಆಕ್ಟೋಬರ್ನಲ್ಲಿ ಮಾರತಹಳ್ಳಿ ಭಾಗದಲ್ಲಿ ಟ್ರಯಲ್ ರನ್ ಮಾಡಲು ಸೂಚನೆ ನೀಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
