ಮುಡಾ ಹಗರಣದ ತನಿಖೆ ಚುರುಕು: ವಿಧಾನಸೌಧ ತಲುಪಿದ ಇಡಿ ತನಿಖೆ!
ಮುಡಾ ಹಗರಣದ ತನಿಖೆಯನ್ನು ಇಡಿ ಚುರುಕುಗೊಳಿಸಿದ್ದು, ಇದೀಗ ಇಡಿ ತನಿಖೆ ವಿಧಾನಸೌಧ ತಲುಪಿದೆ. ಹೌದು.. ಬೈರತಿ ಸುರೇಶ್ ಅವರ ಸಚಿವಾಲಯದ ಸಿಬ್ಬಂದಿಗೂ ಇಡಿ ನೋಟಿಸ್ ನೀಡಿದ್ದು, ವಿಚಾರಣೆಗೆ ಬರುವಂತೆ ಸೂಚಿಸಿದೆ.
ಬೆಂಗಳೂರು.ಮೈಸೂರು, (ಡಿಸೆಂಬರ್ 02): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟ್ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ತನಿಖೆ ಚುರುಕುಗೊಂಡಿದ್ದು, ಈಗ ವಿಧಾನಸೌಧಕ್ಕೆ ತಲುಪಿದೆ. ಹೌದು…ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬೈರತಿ ಸುರೇಶ್ (Byrathi Suresh) ಅವರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಇಡಿ ನೋಟಿಸ್ ಜಾರಿ ಮಾಡಿದ್ದು, ನಾಳೆ (ಡಿಸೆಂಬರ್ 3) ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚಿಸಿದೆ.
ಇಡಿ ಅಧಿಕಾರಿಗಳು ಈಗ ಹಂತ ಹಂತವಾಗಿ ತನಿಖೆ ಮುಂದುವರಿಸಿದ್ದು, ಈಗಾಗಲೇ ಮುಡಾ ಹಾಲಿ ಮತ್ತು ಮಾಜಿ ಅಧಿಕಾರಿಗಳನ್ನು ವಿಚಾರಣೆ ನಡೆಸಿದೆ. ಇದೀಗ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳತ್ತ ಇಡಿ ಅಧಿಕಾರಿಗಳ ಚಿತ್ತ ನೆಟ್ಟಿದೆ.
ಇನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಇಡಿ ನೋಟಿಸ್ ಎನ್ನುವ ಸುದ್ದಿ ಹರಿದಾಡಿದ್ದು, ಅದು ಸುಳ್ಳು ಎಂದು ಗೊತ್ತಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುರೇಶ್, ನನಗೆ ಇದುವರೆಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.