ಲೈಂಗಿಕ ಕಿರುಕುಳ ಆರೋಪಕ್ಕೆ ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ಸ್ಪಷ್ಟನೆ: ಮತ್ತೊಂದೆಡೆ ಸುಮೋಟೋ ಕೇಸ್ ದಾಖಲಿಸಿದ ಮಹಿಳಾ ಆಯೋಗ
ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜೆ. ತಮ್ಮ ಮೇಲಿನ ಲೈಂಗಿಕ ಕಿರುಕುಳ, ಹಲ್ಲೆ ಹಾಗೂ ಹಣ ಕೇಳಿದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಹಿರಿಯ ಅಧಿಕಾರಿಗಳು ಈಗಾಗಲೇ ತನಿಖೆ ನಡೆಸಿದ್ದು, ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ಟಿವಿ9ಗೆ ತಿಳಿಸಿದ್ದಾರೆ. ಕಾಂಪೌಂಡ್ ಹಾರಿದ ಘಟನೆ ಆತ್ಮಹತ್ಯೆ ತಡೆಯುವ ಉದ್ದೇಶದಿಂದ ನಡೆದಿತ್ತು ಎಂದು ವಿವರಿಸಿದ್ದಾರೆ.
ಮಂಗಳೂರು, ಮಾರ್ಚ್ 17: ತಮ್ಮ ವಿರುದ್ಧದ ಲೈಂಗಿಕ ಕಿರುಕುಳ, ಹಲ್ಲೆ ಹಾಗೂ ಹಣ ಕೇಳಿದ ಆರೋಪಗಳನ್ನು ಮೂಡಬಿದ್ರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜೆ. ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಟಿವಿ9 ಜೊತೆ ಮಾತನಾಡಿರುವ ಅವರು, ಈ ಎಲ್ಲಾ ಆರೋಪಗಳು ಸುಳ್ಳು. ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಅವರ ಪತಿ ಹೇಳಿದ್ರು. ಹೀಗಾಗಿ ಆಕೆಯನ್ನು ರಕ್ಷಿಸಲು ನಾನು ಕಾಂಪೌಂಡ್ ಹಾರಿದ್ದು ನಿಜ ಎಂದಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿ ಸಂದೇಶ್ ಪಿ.ಜಿ. ವಿರುದ್ಧ ತನಿಖೆಗೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸೂಚನೆ ನೀಡಿದ್ದಾರೆ. ಉತ್ತರ ACP ಶ್ರೀಕಾಂತ್ಗೆ ತನಿಖೆಯ ಹೊಣೆ ನೀಡಲಾಗಿದೆ. ಲೈಂಗಿಕ ಕಿರುಕುಳದ ಬಗ್ಗೆ ಈವರೆಗೂ ಯಾವೊಬ್ಬ ಮಹಿಳೆ ಕೂಡ ದೂರು ನೀಡಿಲ್ಲ. ಯಾರಾದರೂ ಸಂತ್ರಸ್ತೆಯರು ಇದ್ದರೆ ಈಗಲೂ ದೂರು ನೀಡಬಹುದು ಎಂದು ಕಮಿಷನರ್ ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ, ಈ ವಿಚಾರದ ಬಗ್ಗೆ ನಾನು ಈಗಾಗಲೇ ಕಮಿಷನರ್ ಜೊತೆ ಮಾತನಾಡಿದ್ದೇನೆ. ಸಂತ್ರಸ್ತೆಯರು ಯಾರೂ ಮುಂದೆ ಬಂದು ನಮಗೆ ದೂರು ನೀಡಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ. ಆದರೆ ದೂರು ನೀಡಿರುವ ಅಕ್ನಾಲೆಜ್ಮೆಂಟ್ ಇರೋದಾಗಿ ಕೆಲವರು ತಿಳಿಸಿದ್ದು, ನಾವು ನಿನ್ನೆಯೇ ಸುಮೋಟೋ ಕೇಸ್ ದಾಖಲು ಮಾಡಿದ್ದೇವೆ. ಇದು ಬಹಳ ಸೂಕ್ಷ್ಮ ವಿಚಾರವಾಗಿದ್ದು, ಹಲವಾರು ಸಂತ್ರಸ್ತರು ಇದರಲ್ಲಿ ಇದ್ದಾರೆ. ಕೆಲ ಮಹಿಳೆಯರು ಕುಟುಂಬ ಮತ್ತು ಮಕ್ಕಳ ಕಾರಣಕ್ಕೆ ದೂರು ನೀಡಲು ಮುಂದೆ ಬರುತ್ತಿಲ್ಲ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
