‘ಡಿಕೆ ಶಿವಕುಮಾರ್ ಸಿಎಂ ಹುದ್ದೆಗೆ ಅರ್ಹರು’: ಸಾಮಾಜಿಕ ಜಾಲತಾಣದಲ್ಲಿ ಶುರುವಾಯ್ತು ಪೋಸ್ಟರ್ ಅಭಿಯಾನ!
ಕರ್ನಾಟಕ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತ ಸಚಿವರೊಂದಿಗೆ ತಡರಾತ್ರಿ ಸಭೆ ನಡೆಸಿದ್ದಾರೆ. ರಾಜೀನಾಮೆ ಊಹಾಪೋಹಗಳಿಂದ ಆತಂಕಗೊಂಡಿರುವ ಆಪ್ತರು ತಮ್ಮ ರಾಜಕೀಯ ಭವಿಷ್ಯದ ಕುರಿತು ಚರ್ಚಿಸಿದ್ದಾರೆ. ಇದರ ಜೊತೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಿಎಂ ಆಗಲು ಅರ್ಹರು ಎಂದು ಬಿಂಬಿಸುವ ಪೋಸ್ಟರ್ ಅಭಿಯಾನ ಜಾಲತಾಣಗಳಲ್ಲಿ ಪ್ರಾರಂಭವಾಗಿದೆ.
ಬೆಂಗಳೂರು, ಮೇ 27: ಕರ್ನಾಟಕ ರಾಜಕೀಯದಲ್ಲಿ ಕ್ಷಣಕ್ಕೊಂದು ಬೆಳವಣಿಗೆಯಾಗುತ್ತಿದ್ದು, ಅಧಿಕಾರ ಹಂಚಿಕೆ ಬಹುತೇಕ ಫೈನಲ್ ಆದಂತಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಪ್ತ ಸಚಿವರೊಂದಿಗೆ ಮಂಗಳವಾರ ತಡರಾತ್ರಿವರೆಗೂ ಸಭೆ ನಡೆಸಿದ್ದಾರೆ. ಮಧ್ಯರಾತ್ರಿ 2 ಗಂಟೆಯವರೆಗೂ ನಡೆದ ಈ ಸಭೆಯಲ್ಲಿ ಮುಂದಿನ ರಾಜಕೀಯ ನಡೆಗಳು ಹಾಗೂ ಹೈಕಮಾಂಡ್ನೊಂದಿಗಿನ ಮಾತುಕತೆಗಳ ಬಗ್ಗೆ ಚರ್ಚಿಸಲಾಗಿದೆ. ಸಿಎಂ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಆಪ್ತರ ಬಳಗದಲ್ಲಿ ಆತಂಕ ಮೂಡಿಸಿದ್ದು, ರಾಜಕೀಯ ಭವಿಷ್ಯದ ಕುರಿತು ಸಿಎಂ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ.
ಅನಿರೀಕ್ಷಿತ ಬೆಳವಣಿಗೆಯಾಗಿ ಸಚಿವ ಹೆಚ್.ಕೆ. ಪಾಟೀಲ್ ಗದಗದಲ್ಲಿ ನಿಗದಿಯಾಗಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ದಿಢೀರನೆ ಬೆಂಗಳೂರಿಗೆ ಆಗಮಿಸಿದ್ದಾರೆ. ಇತ್ತೀಚಿನ ಈ ಬದಲಾವಣೆಗಳಿಂದ ಸಿಎಂ ಆಪ್ತ ಬಳಗದಲ್ಲಿ ಆಘಾತ ಮೂಡಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಇದರ ಜೊತೆಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರೆಂದು ಬಿಂಬಿಸುವ ಪೋಸ್ಟರ್ ಅಭಿಯಾನವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರಂಭವಾಗಿದೆ. ‘ಟೀಮ್ ಡಿಕೆ’ ಹೆಸರಿನಲ್ಲಿ ಫೇಸ್ಬುಕ್ನಲ್ಲಿ ಈ ಅಭಿಯಾನ ನಡೆಯುತ್ತಿದ್ದು, ಡಿ.ಕೆ. ಶಿವಕುಮಾರ್ ಅವರ 45 ವರ್ಷಗಳ ರಾಜಕೀಯ ಅನುಭವ ಮತ್ತು ತಳಮಟ್ಟದಿಂದ ಬೆಳೆದು ಬಂದ ಹಾದಿಯನ್ನು ಉಲ್ಲೇಖಿಸಿ, ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತರೆಂದು ಪ್ರಚಾರ ಮಾಡಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
