ಪೆಟ್ರೋಲ್ ಡೀಸೆಲ್ ಬೆಲೆ ಇನ್ನೂ ಏರಿಕೆಯಾಗುತ್ತಾ? ಇಂಧನ ದರದಲ್ಲಿ ಕೇಂದ್ರ, ರಾಜ್ಯಕ್ಕೆಷ್ಟು ಪಾಲು ಎಂಬ ಮಾಹಿತಿ ಇಲ್ಲಿದೆ
ಕೇವಲ 11 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ನಾಲ್ಕನೇ ಬಾರಿಗೆ ಏರಿಕೆಯಾಗಿದೆ. ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆ, ರೂಪಾಯಿ ಅಪಮೌಲ್ಯ ಮತ್ತು ಕೇಂದ್ರ-ರಾಜ್ಯ ಸರ್ಕಾರಗಳ ತೆರಿಗೆ ಪಾಲು ಈ ಹೆಚ್ಚಳಕ್ಕೆ ಪ್ರಮುಖ ಕಾರಣ. ತೆರಿಗೆ ಕಡಿತಗೊಳಿಸುವುದು ತಕ್ಷಣದ ಪರಿಹಾರವಾಗಿದ್ದು, ಇಲ್ಲದಿದ್ದರೆ ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.
ಬೆಂಗಳೂರು, ಮೇ 25: ಕಳೆದ 11 ದಿನಗಳಲ್ಲಿ ನಾಲ್ಕನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 2.83 ರೂಪಾಯಿ ಮತ್ತು ಡೀಸೆಲ್ ಪ್ರತಿ ಲೀಟರ್ಗೆ 2.82 ರೂಪಾಯಿ ಹೆಚ್ಚಳವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್ ದರ 110.44 ರೂಪಾಯಿ ಮತ್ತು ಡೀಸೆಲ್ ದರ 98.39 ರೂಪಾಯಿಗೆ ತಲುಪಿದೆ. ಭಾರತವು ತನ್ನ ಕಚ್ಚಾ ತೈಲದ ಶೇ 85ಕ್ಕೂ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಪಶ್ಚಿಮ ಏಷ್ಯಾದಲ್ಲಿ ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ, ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಣೆಯ ಅಡಚಣೆ, ಹಾಗೂ ರೂಪಾಯಿ ಅಪಮೌಲ್ಯವು ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಗೆ ಕಾರಣವಾಗಿದೆ. ಅಲ್ಲದೆ, ತೈಲ ಕಂಪನಿಗಳು 76 ದಿನಗಳ ಕಾಲ ನಷ್ಟವನ್ನು ಭರಿಸಿದ್ದು, ಈಗ ಅದನ್ನು ಗ್ರಾಹಕರಿಗೆ ವರ್ಗಾಯಿಸುತ್ತಿವೆ.
ಪೆಟ್ರೋಲ್ ಡೀಸೆಲ್ ದರದಲ್ಲಿ ರಾಜ್ಯ, ಕೇಂದ್ರದ ಪಾಲು
ಪೆಟ್ರೋಲ್, ಡೀಸೆಲ್ ಬೆಲೆಯ ಅರ್ಧದಷ್ಟು ಭಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆ ಹಾಗೂ ಸೆಸ್ ರೂಪದಲ್ಲಿರುತ್ತದೆ. ಉದಾಹರಣೆಗೆ, 100 ರೂಪಾಯಿ ಪೆಟ್ರೋಲ್ನಲ್ಲಿ ತೈಲ ಕಂಪನಿಗಳು ಕಚ್ಚಾ ಮತ್ತು ಸಂಸ್ಕರಣಾ ವೆಚ್ಚ, ಲಾಜಿಸ್ಟಿಕ್ಸ್ಗಾಗಿ 50-55 ರೂಪಾಯಿ ಪಡೆಯುತ್ತವೆ. ಪಂಪ್ ಡೀಲರ್ಗಳಿಗೆ ಮಾರಾಟ ಕಮಿಷನ್ ರೂಪದಲ್ಲಿ 3-4 ರೂಪಾಯಿ ಸಿಗುತ್ತದೆ. ಕೇಂದ್ರ ಸರ್ಕಾರ ಅಬಕಾರಿ ಸುಂಕ ಮತ್ತು ಸೆಸ್ ರೂಪದಲ್ಲಿ 11-15 ರೂಪಾಯಿ ಸಂಗ್ರಹಿಸಿದರೆ, ರಾಜ್ಯ ಸರ್ಕಾರಗಳು ವ್ಯಾಟ್ ಮತ್ತು ಲೇವಿಗಳ ಮೂಲಕ 25-30 ರೂಪಾಯಿ ಪಡೆಯುತ್ತವೆ.
ಸದ್ಯದ ಪರಿಸ್ಥಿತಿಯಲ್ಲಿ ತಕ್ಷಣದ ಪರಿಹಾರ ಬೇಕಿದ್ದರೆ ಸರ್ಕಾರಗಳು ಅಬಕಾರಿ ಸುಂಕ ಮತ್ತು ವ್ಯಾಟ್ ಕಡಿತಗೊಳಿಸುವುದು ಅನಿವಾರ್ಯ. ಇಲ್ಲದಿದ್ದರೆ ಸಾರಿಗೆ ವೆಚ್ಚ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಮತ್ತಷ್ಟು ಆರ್ಥಿಕ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
