ಉತ್ತರಕಾಶಿ ಸುರಂಗ ಮಾರ್ಗದಲ್ಲಿ 17-ದಿನ ಸಿಲುಕಿ ಸಾವು ಗೆದ್ದು ಬಂದ ಕಾರ್ಮಿಕರೊಂದಿಗೆ ಮಾತಾಡಿ ಅಭಿನಂದಿಸಿದ ಪ್ರಧಾನಿ ಮೋದಿ

ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ದಣಿವರಿಯದೆ ಕಾರ್ಯಾಚರಣೆ ನಡೆಸಿದ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಆಫ್ ತಂಡಗಳ ಅಧಿಕಾರಿಗಳೊಂದಿಗೂ ಮಾತಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ರಕ್ಷಣಾ ಕಾರ್ಯವನ್ನು ಯಶಸ್ವೀಯಾಗಿ ಪೂರೈಸಿದ ಅವರಿಗೆ ಮತ್ತು ನೆರವಾದ ಎಲ್ಲರಿಗೆ ಅಭಿನಂದನೆ ಮತ್ತು ಧನ್ಯವಾದ ಸಲ್ಲಿಸಿದರು.

ಉತ್ತರಕಾಶಿ ಸುರಂಗ ಮಾರ್ಗದಲ್ಲಿ 17-ದಿನ ಸಿಲುಕಿ ಸಾವು ಗೆದ್ದು ಬಂದ ಕಾರ್ಮಿಕರೊಂದಿಗೆ ಮಾತಾಡಿ ಅಭಿನಂದಿಸಿದ ಪ್ರಧಾನಿ ಮೋದಿ
|

Updated on: Nov 29, 2023 | 12:06 PM

ದೆಹಲಿ: ಉತ್ತರಾಖಂಡ್ ರಾಜ್ಯದ ಉತ್ತರಕಾಶಿ (Uttarkashi) ಬಳಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಮಾರ್ಗವೊಂದು (tunnel)ಕುಸಿದ ಕಾರಣ ಹದಿನೇಳು ದಿನಗಳ ಕಾಲ ಅವಶೇಷಗಳ ನಡುವೆ ಸಿಲುಕಿ ಸಾವು ಬದುಕಿನೊಂದಿಗೆ ಹೋರಾಡಿ ಒಂದು ಭಾರೀ ಕಾರ್ಯಾಚರಣೆಯ ಬಳಿಕ ನಿನ್ನೆ ತಡರಾತ್ರಿ ಹೊರಬಂದ 41 ಕಾರ್ಮಿಕರ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಮಾತಾಡಿ ಅವರನ್ನು ಅಭಿನಂದಿಸರಲ್ಲದೆ, ದೈರ್ಯ ಸಾಹಸಗಳನ್ನು ಕೊಂಡಾಡಿದರು. ಸಾವನ್ನು ಗೆದ್ದು ಬಂದ ಕಾರ್ಮಿಕರ ಪರವಾಗಿ ಮಾತಾಡಿದ ಬಿಹಾರದ ಛಾಪ್ರಾ ಜಿಲ್ಲೆಯ ಸೋನು ಕುಮಾರ್ ಸಹಾ ತಮ್ಮನ್ನು ಕಾಪಾಡಿದ ಎಲ್ಲರಿಗೆ ಧನ್ಯವಾದ ಹೇಳಿ, ಭೂಮಿಯ ಗರ್ಭದಲ್ಲಿ ಹೇಗೆ 17 ದಿನಗಳನ್ನು ಹೇಗೆ ಕಳೆದರು ಅನ್ನೋದನ್ನು ಪ್ರಧಾನಿ ಮೋದಿಯವರಿಗೆ ವಿವರಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಮೋದಿಯವರು, ನಿಮ್ಮ ಧೈರ್ಯ, ಸಾಹಸಗಳನ್ನು ಕೊಂಡಾಡುತ್ತೇನೆ, ನೀವು ತೋರಿದ ಶೌರ್ಯ ಅಪ್ರತಿಮವಾದದ್ದು, ಸಂಕಟ ಸಮಯದಲ್ಲಿ ಎದೆಗುಂದದೆ ಪರಿಸ್ಥಿತಿಯನ್ನ ಹೇಗೆ ನಿಭಾಯಿಸಬೇಕೆನ್ನುವುದಕ್ಕೆ ಒಂದ ದೊಡ್ಡ ನಿದರ್ಶನವನ್ನು ದೇಶಕ್ಕೆ ನೀಡಿದ್ದೀರಿ. ದೇಶದ ಪ್ರತಿಯೊಬ್ಬ ವ್ಯಕ್ತಿ ನಿಮ್ಮ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದ. ನಿಮ್ಮ ಪರಿವಾರಗಳ ಪ್ರಾರ್ಥನೆ, ಪರಮಾತ್ಮನ ಕೃಪೆ ಮತ್ತು ದಯೆ ಹಾಗೂ 140 ಕೋಟಿ ಭಾರತೀಯರ ಶುಭಹಾರೈಕೆಗಳಿಂದ ನೀವು ಕ್ಷೇಮವಾಗಿ ಹೊರಬಂದಿದ್ದೀರಿ ಎಂದು ಹೇಳಿದರು. ಕಾರ್ಮಿಕರೊಂದಿಗೆ ಮಾತು ಮುಗಿದ ಬಳಿಕ ಎಲ್ಲರೂ ಭಾರತ್ ಮಾತಾ ಕೀ ಜೈ ಎಂದು ಒಕ್ಕೊರಲಿನಿಂದ ಕೂಗಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us