ಅಮ್ಮ ಮತ್ತು ಹುಟ್ಟಿದ ಭೂಮಿಯ ಋಣ ತೀರಿಸಲು ಸಾಧ್ಯವೇ ಇಲ್ಲ ಅನ್ನೋ ಮಾತಿದೆ. ಹಾಗಂತ ಋಣಭಾರ ಹೊರುವುದಕ್ಕೂ ಅಸಾಧ್ಯ. ಪ್ರೀತಿಯಲ್ಲಿ ಕಿಂಚಿತ್ತು ಕಡಿಮೆಯಾದರೂ ಕೋಟಿ ರೂಪದಲ್ಲಿ ಹರಸುವ ಸಹೃದಯ ಜೀವ ಎಂದರೆ ಅದು ತಾಯಿ. ಮಾತೃ ಸಂಸ್ಕೃತಿಗೆ ಶರಣಾಗುವ ಅಪೂರ್ವ ವಿದ್ಯಮಾನವೊಂದು ಉಡುಪಿಯ ಕಾಪುವಿನಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಕಾಪು ಮೂಲದ ಗೀತಾ ಯಾದವ್, ಮುಂಬೈ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಆಗಿದ್ದರು. ಮುಂಬೈಗೆ ಕೊರೊನಾ ಅಪ್ಪಳಿಸಿದಾಗ ಸೇನಾನಿಯಂತೆ ಮುಂದೆ ನಿಂತು ದುಡಿದಿದ್ದರು. ಜೀವನವಿಡೀ ತನ್ನ ಕ್ಷೇತ್ರದ ಜನತೆಗಾಗಿ ದುಡಿದವರಿಗೆ ಇದ್ದದ್ದು ಒಂದೇ ಆಸೆ! ತನ್ನ ಕೊನೆಗಾಲದಲ್ಲಿ ಊರಲ್ಲಿ ನೆಲೆಸಬೇಕು. ಕರಾವಳಿಯ ಬಂಧುಗಳ ಒಡನಾಟದಲ್ಲಿ ಉಳಿದ ಜೀವನ ಕಳೆಯಬೇಕೆಂದು ಬಯಸಿದ್ದರು. ಆದರೆ ವಿಧಿಯಾಟ, ವರ್ಷದ ಹಿಂದೆ ಇಹಲೋಕ ತ್ಯಜಿಸಿದರು. ಅವರ ಈ ಆಸೆ ಸತ್ತ ಮೇಲೆ ಈಡೇರಿದೆ. ಅಮ್ಮನ ನೆನಪಲ್ಲಿ ಮಕ್ಕಳು ಸಮಾಜಕ್ಕೆ ಭಾವನಾತ್ಮಕ ಸಂದೇಶ ನೀಡಿದ್ದಾರೆ.