‘ಜಗದೊದ್ಧಾರನ ಆಡಿಸಿದಳೆಶೋದಾ…’ ಕೀರ್ತನೆ ಹುಟ್ಟಿದ ತಾಣದಲ್ಲಿ ಜನ್ಮಾಷ್ಟಮಿ ಸಂಭ್ರಮ: ದೊಡ್ಡಮಳೂರಿಗೆ ಹರಿದುಬಂದ ಭಕ್ತಸಾಗರ!

Edited By:

Updated on: Sep 04, 2026 | 5:04 PM

ಕೃಷ್ಣ ಜನ್ಮಾಷ್ಟಮಿಯಂದು ರಾಮನಗರದ ದೊಡ್ಡಮಳೂರಿನ ಶ್ರೀ ಅಪ್ರಮೇಯ ಸ್ವಾಮಿ ದೇವಸ್ಥಾನದಲ್ಲಿರುವ ದೇಶದ ಏಕೈಕ ಅಂಬೆಗಾಲು ಕೃಷ್ಣನಿಗೆ ಬೆಣ್ಣೆಯ ವಿಶೇಷ ಅಲಂಕಾರ ಮಾಡಲಾಗಿತ್ತು. ಚೋಳರ ಕಾಲದ ಈ ದೇವಾಲಯದಲ್ಲಿ ವ್ಯಾಸರಾಯರು ಪ್ರತಿಷ್ಠಾಪಿಸಿದ ಕೃಷ್ಣನನ್ನು ಪುರಂದರದಾಸರು ಹಾಡಿಸಿದಳು ಯಶೋದೆ ಕೀರ್ತನೆಯಲ್ಲಿ ಸ್ತುತಿಸಿದ್ದಾರೆ. ಸಂತಾನ ಭಾಗ್ಯ ಕರುಣಿಸುವ ನಂಬಿಕೆಯೊಂದಿಗೆ ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರು ಗ್ರಾಮದ ಬಳಿ ಇರುವ ಶ್ರೀ ಅಪ್ರಮೇಯ ಸ್ವಾಮಿ ದೇವಸ್ಥಾನವು ಕೃಷ್ಣ ಜನ್ಮಾಷ್ಟಮಿಯಂದು ಭಕ್ತಿ ಮತ್ತು ಸಂಭ್ರಮದಿಂದ ಕಂಗೊಳಿಸಿತು. ದೇಶದಲ್ಲಿಯೇ ಏಕೈಕವಾಗಿರುವ ಅಂಬೆಗಾಲು ಕೃಷ್ಣನ ಮೂರ್ತಿ ಇರುವ ಈ ದೇವಾಲಯವು ಭಕ್ತರ ಪಾಲಿಗೆ ಪುಣ್ಯಕ್ಷೇತ್ರವಾಗಿದೆ. ಜನ್ಮಾಷ್ಟಮಿ ನಿಮಿತ್ತ ಅಂಬೆಗಾಲು ಕೃಷ್ಣನಿಗೆ ಸಂಪೂರ್ಣವಾಗಿ ಬೆಣ್ಣೆಯಿಂದ ಅಲಂಕಾರ ಮಾಡಲಾಗಿತ್ತು. ಬೆಂಗಳೂರು, ಇತರೆ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದಲೂ ಸಹಸ್ರಾರು ಭಕ್ತರು ಆಗಮಿಸಿ ಬೆಳಗ್ಗೆ 6 ಗಂಟೆಯಿಂದಲೇ ನಡೆದ ವಿಶೇಷ ಪೂಜೆ ಪುನಸ್ಕಾರಗಳಲ್ಲಿ ಪಾಲ್ಗೊಂಡು ಕೃಷ್ಣನ ದರ್ಶನ ಪಡೆದರು. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯವನ್ನು ಚೋಳರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ವ್ಯಾಸರಾಯರು ಇಲ್ಲಿ ಅಂಬೆಗಾಲು ಕೃಷ್ಣನನ್ನು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ. ಪುರಂದರದಾಸರು ಇಲ್ಲಿಗೆ ಭೇಟಿ ನೀಡಿ ಅಂಬೆಗಾಲು ಕೃಷ್ಣನನ್ನು ನೋಡಿ ” ಜಗದೋದ್ಧಾರನ ಆಡಿಸಿದಳು ಯಶೋದೆ” ಎಂಬ ಪ್ರಸಿದ್ಧ ಕೀರ್ತನೆಯನ್ನು ರಚಿಸಿದ್ದಾರೆ. ಸಂತಾನ ಭಾಗ್ಯವಿಲ್ಲದ ದಂಪತಿಗಳು ಅಂಬೆಗಾಲು ಕೃಷ್ಣನಿಗೆ ಹರಿಕೆ ಹೊತ್ತರೆ ಮಕ್ಕಳಾಗುತ್ತವೆ ಎಂಬುದು ಇಲ್ಲಿನ ಪ್ರಬಲ ನಂಬಿಕೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Sep 04, 2026 05:00 PM
Loading...
Unable to load recommendations.
Follow Us