ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಕೆಆರ್ ಮಾರ್ಕೆಟ್ನಲ್ಲಿ ಜನಸಾಗರ: ಬೆಳ್ಳಂಬೆಳಗ್ಗೆಯೇ ಟ್ರಾಫಿಕ್ ಜಾಮ್
Bangalore traffic jam: ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಬೆಂಗಳೂರಿನ ಕೆ.ಆರ್. ಮಾರ್ಕೆಟ್ನಲ್ಲಿ ಜನಸಾಗರವೇ ಹರಿದುಬಂದಿದೆ. ವಿವಿಧ ಊರುಗಳಿಂದ ರೈತರು ಕೂಡ ಬೆಳೆದ ವಸ್ತುಗಳ ಮಾರಾಟಕ್ಕೆ ಬಂದಿದ್ದಾರೆ. ಮತ್ತೊಂದೆಡೆ, ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಮುಗಿಬಿದ್ದಿದ್ದು, ಟೌನ್ ಹಾಲ್ನಿಂದ ಕೆ.ಆರ್. ಮಾರ್ಕೆಟ್ವರೆಗೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಬೆಂಗಳೂರು, ಆಗಸ್ಟ್ 20: ನಾಳೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ.ಆರ್. ಮಾರ್ಕೆಟ್ನಲ್ಲಿ ಹಬ್ಬದ ಖರೀದಿ ಭರಾಟೆ ಜೋರಾಗಿದೆ. ಇಂದು ಬೆಳಗ್ಗೆಯಿಂದಲೇ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಮಾರ್ಕೆಟ್ ಸುತ್ತಮುತ್ತ ಜನದಟ್ಟಣೆ ಹಾಗೂ ಸಂಚಾರ ದಟ್ಟಣೆ ಹೆಚ್ಚಾಗಿದೆ. ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಿಂದ ರೈತರು ಹಾಗೂ ವ್ಯಾಪಾರಿಗಳು ಹೂವು-ಹಣ್ಣುಗಳೊಂದಿಗೆ ಮಾರ್ಕೆಟ್ಗೆ ಆಗಮಿಸಿದ್ದಾರೆ. ಟೌನ್ ಹಾಲ್ನಿಂದ ಕೆ.ಆರ್. ಮಾರ್ಕೆಟ್ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಮಾರ್ಕೆಟ್ಗೆ ಬಂದಿರುವ ವಾಹನಗಳಿಂದಾಗಿ ರಸ್ತೆಯಲ್ಲಿ ಸಂಚಾರ ನಿಧಾನಗೊಂಡಿದೆ. ಟ್ರಾಫಿಕ್ನಲ್ಲಿ ಸಿಲುಕಿದ ವಾಹನ ಸವಾರರು ಪರದಾಡುವಂತಾಗಿದೆ.
ಆಷಾಢ ಮಾಸ ಮುಗಿದು ಶ್ರಾವಣ ಆರಂಭವಾಗಿದ್ದು, ಇನ್ನು ಸಾಲು ಸಾಲು ಹಬ್ಬಗಳು ಎದುರಾಗಲಿವೆ. ಕಳೆದ ಎರಡು ದಿನಗಳಿಂದಲೇ ಕೆ.ಆರ್. ಮಾರ್ಕೆಟ್ನಲ್ಲಿ ವ್ಯಾಪಾರ ಚಟುವಟಿಕೆಗಳು ಚುರುಕುಗೊಂಡಿದ್ದು, ಇದೀಗ ವರಮಹಾಲಕ್ಷ್ಮೀ ಹಬ್ಬದ ಮುನ್ನಾದಿನ ಜನಸಾಗರವೇ ಕಂಡುಬಂದಿದೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

