ತಾಂತ್ರಿಕ ದೋಷದಿಂದ ತಡವಾದರೂ ಪರೀಕ್ಷಾರ್ಥಿಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸಿದ ಯಶವಂತಪುರ ಎಕ್ಸ್ಪ್ರೆಸ್!
ವಿಜಯಪುರದಿಂದ ಬೆಂಗಳೂರು CAR/DAR ಪೊಲೀಸ್ ಪರೀಕ್ಷೆಗೆ ಹೊರಟ ಯಶವಂತಪುರ ಎಕ್ಸ್ಪ್ರೆಸ್ ಇಂಜಿನ್ ವೈಫಲ್ಯದಿಂದ 4 ಗಂಟೆ ಸ್ಥಗಿತಗೊಂಡಿತ್ತು. 500ಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರತಿಭಟಿಸಿದರು. ರೈಲ್ವೆ ಇಲಾಖೆ ತಕ್ಷಣ ಪರ್ಯಾಯ ಇಂಜಿನ್ ಜೋಡಿಸಿ, 'ಗ್ರೀನ್ ಕಾರಿಡಾರ್' ಮೂಲಕ ರೈಲನ್ನು ಓಡಿಸಿ, ನಿಗದಿತ ಸಮಯಕ್ಕಿಂತ 2 ಗಂಟೆ ಮುಂಚಿತವಾಗಿ ಬೆಂಗಳೂರು ತಲುಪಿಸಿತು. ಪರೀಕ್ಷಾರ್ಥಿಗಳು ನಿರಾಳರಾಗಿ ಪರೀಕ್ಷೆಗೆ ಹಾಜರಾದರು.
ವಿಜಯಪುರದಿಂದ ಹೊರಟಿದ್ದ ಯಶವಂತಪುರ ಎಕ್ಸ್ಪ್ರೆಸ್ ರೈಲು, ಹೊರಟ ಕೆಲವೇ ಕಿಲೋಮೀಟರ್ಗಳಲ್ಲಿ ಇಂಜಿನ್ ತಾಂತ್ರಿಕ ವೈಫಲ್ಯದಿಂದ ಸುಮಾರು ನಾಲ್ಕು ಗಂಟೆಗಳ ಕಾಲ ಮಾರ್ಗ ಮಧ್ಯದಲ್ಲೇ ಕೆಟ್ಟು ನಿಂತಿತ್ತು. ಇದು ಸಿಆರ್ ಮತ್ತು ಡಿಆರ್ ಪರೀಕ್ಷೆಗಳಿಗೆ ಹಾಜರಾಗಲು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಯಿತು. ಆಕ್ರೋಶಗೊಂಡ 500ಕ್ಕೂ ಹೆಚ್ಚು ಅಭ್ಯರ್ಥಿಗಳು ರೈಲ್ವೆ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಿ, ಪಕ್ಕದ ಹಳಿಯಲ್ಲಿ ಬಂದ ‘ಬಸವ ಎಕ್ಸ್ಪ್ರೆಸ್’ ತಡೆದು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಧಾವಿಸಿದ ರೈಲ್ವೆ ಪೊಲೀಸರು ಅಭ್ಯರ್ಥಿಗಳನ್ನು ಸಮಾಧಾನಪಡಿಸಿ, ತಕ್ಷಣವೇ ಪರ್ಯಾಯ ಇಂಜಿನ್ ಜೋಡಿಸಿ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಭ್ಯರ್ಥಿಗಳ ಭವಿಷ್ಯ ಮತ್ತು ಬೆಳಿಗ್ಗೆ 9:30ಕ್ಕೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕಾಗಿರುವುದನ್ನು ಪರಿಗಣಿಸಿದ ರೈಲ್ವೇ ಇಲಾಖೆಯು ತಕ್ಷಣವೇ ಕಾರ್ಯಪ್ರವೃತ್ತವಾಗಿ, ಮಾರ್ಗದುದ್ದಕ್ಕೂ ಎಲ್ಲಾ ಜಂಕ್ಷನ್ಗಳನ್ನು ಫ್ರೀ ಮಾಡಿ (ಗ್ರೀನ್ ಕಾರಿಡಾರ್) ಆದ್ಯತೆಯ ಮೇಲೆ ರೈಲನ್ನು ಓಡಿಸಿತು. ಪರಿಣಾಮವಾಗಿ, ನಿಗದಿತ ಸಮಯಕ್ಕಿಂತ ಎರಡು ಗಂಟೆ ಮುಂಚಿತವಾಗಿ ಅಂದರೆ ಬೆಳಿಗ್ಗೆ 7:15ಕ್ಕೇ ರೈಲು ಯಶವಂತಪುರ ತಲುಪಿದ್ದರಿಂದ ಅಭ್ಯರ್ಥಿಗಳು ನಿರಾಳರಾಗಿ ತಮ್ಮ ಪರೀಕ್ಷಾ ಕೇಂದ್ರಗಳತ್ತ ತೆರಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
