AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೆಡೆ ಬಿಸಿಲ ಬೇಗೆ ಜೋರಾದ್ರೆ ಮತ್ತೊಂದೆಡೆ ನೀರಿಗಾಗಿ ಹಾಹಾಕಾರ: ಬೆಂಗಳೂರಿನ ವಿವಿಧೆಡೆ ಕುಡಿಯುವ ನೀರಿದ ದರ ಏರಿಕೆ

ಒಂದೆಡೆ ಬಿಸಿಲ ಬೇಗೆ ಜೋರಾದ್ರೆ ಮತ್ತೊಂದೆಡೆ ನೀರಿಗಾಗಿ ಹಾಹಾಕಾರ: ಬೆಂಗಳೂರಿನ ವಿವಿಧೆಡೆ ಕುಡಿಯುವ ನೀರಿದ ದರ ಏರಿಕೆ

ಗಣಪತಿ ಶರ್ಮಾ
|

Updated on: Apr 17, 2026 | 9:02 AM

Share

ಕರ್ನಾಟಕವು ತೀವ್ರ ಬಿಸಿಲ ಬೇಗೆ ಮತ್ತು ನೀರಿನ ಅಭಾವದ ಡಬಲ್ ಶಾಕ್ ಎದುರಿಸುತ್ತಿದೆ. ಬೆಂಗಳೂರು, ನೆಲಮಂಗಲ, ಗದಗ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಬೆಲೆ ಏರಿಕೆ, ನೀರಿನ ಅಸಮರ್ಪಕ ಪೂರೈಕೆ, ಮತ್ತು ನದಿಗಳ ನೀರಿನ ಮಟ್ಟ ಕುಸಿತ ಗಂಭೀರ ಸಮಸ್ಯೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಗಳೊಂದಿಗೆ ಸಭೆ ನಡೆಸಿ, ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲು ಸೂಚಿಸಿದ್ದಾರೆ.

ಬೆಂಗಳೂರು, ಏಪ್ರಿಲ್ 17: ಕರ್ನಾಟಕ ಈಗ ತೀವ್ರ ಬಿಸಿಲ ಬೇಗೆಯೊಂದಿಗೆ ಕುಡಿಯುವ ನೀರಿನ ಭೀಕರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹಲವು ಜಿಲ್ಲೆಗಳಲ್ಲಿ ಜನರಿಗೆ ಡಬಲ್ ಶಾಕ್ ಎದುರಾಗಿದ್ದು, ನೀರಿಗಾಗಿ ತೀವ್ರ ಹಾಹಾಕಾರ ಶುರುವಾಗಿದೆ. ಬೆಂಗಳೂರಿನ ಲಗ್ಗೆರೆ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಬೆಲೆ ಏರಿಕೆಯಾಗಿದ್ದು, ಜನರು ದೂರದ ಪ್ರದೇಶಗಳಿಂದ ನೀರು ತರಲು ಪರದಾಡುತ್ತಿದ್ದಾರೆ. ಪ್ರತಿ ಮೂರು ದಿನಗಳಿಗೊಮ್ಮೆ ಕೇವಲ ಒಂದು ಅಥವಾ ಎರಡು ಗಂಟೆಗಳ ಕಾಲ ನೀರು ಪೂರೈಕೆಯಾಗುತ್ತಿದೆ.

ನೆಲಮಂಗಲದಲ್ಲಿ ನೀರಿನ ಅಸಮರ್ಪಕ ವಿತರಣೆ ಮತ್ತು ರಾಜಕೀಯದ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಜಕ್ಕಸಂದ್ರ ವಾರ್ಡ್‌ನಲ್ಲಿ ಹಣ ಕೊಟ್ಟವರಿಗೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಜನರು ಚರಂಡಿ ಪೈಪ್‌ಗಳಿಂದ ನೀರು ಹಿಡಿಯುವ ದುಸ್ಥಿತಿ ಎದುರಿಸುತ್ತಿದ್ದಾರೆ. ಉಡುಪಿ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಜೀವಜಲವಾಗಿದ್ದ ಸ್ವರ್ಣ ನದಿಯ ನೀರಿನ ಮಟ್ಟ ಕಳೆದ ವರ್ಷಕ್ಕಿಂತ ಒಂದು ಮೀಟರ್‌ನಷ್ಟು ಕುಸಿದಿದೆ.

ಏತನ್ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಡಿಸಿಗಳ ಸಭೆಯಲ್ಲಿ, ಅಣೆಕಟ್ಟುಗಳಲ್ಲಿನ ನೀರಿನ ಸಂಗ್ರಹದ ಬಗ್ಗೆ ಮಾಹಿತಿ ಪಡೆಯಲಾಯಿತು. ನೀರಾವರಿಗಿಂತ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ಡಿಸಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಕಡೆ ಮುಂಗಾರು ಕಡಿಮೆಯಾಗುವ ಆತಂಕವಿದ್ದು, 213 ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ. ಕುಡಿಯುವ ನೀರಿಗೆ ತೊಂದರೆಯಾದರೆ ಡಿಸಿಗಳೇ ನೇರ ಹೊಣೆ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us