Mysuru: ಮೋದಿ ಸಮಾವೇಶ ನಡೆದ ಮೈದಾನದಲ್ಲಿ ಕಸ ಹೆಕ್ಕಿದ ಯದುವೀರ್ ದಂಪತಿ, ವಿಡಿಯೋ ನೋಡಿ

| Updated By: ಗಣಪತಿ ಶರ್ಮ

Updated on: Apr 15, 2024 | 2:59 PM

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಸಮಾವೇಶ ನಡೆದ ಮಹಾರಾಜ ಕಾಲೇಜು ಮೈದಾನದಲ್ಲಿ ಪಕ್ಷದ ಅಭ್ಯರ್ಥಿ ಯದುವೀರ್ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಸಿಂಗ್ ದಂಪತಿ ಕಸ ಹೆಕ್ಕಿ ಸ್ವಚ್ಛಗೊಳಿಸಿದರು. ಆ ಮೂಲಕ ತಾವೂ ಸಹ ಸಾಮಾನ್ಯರಂತೆಯೇ ಎಂದು ಬಿಂಬಿಸಲು ಯತ್ನಿಸಿದರು. ಯದುವೀರ್ ದಂಪತಿ ಕಸ ಹೆಕ್ಕುತ್ತಿರುವ ವಿಡಿಯೋ ಇಲ್ಲಿದೆ.

ಮೈಸೂರು, ಏಪ್ರಿಲ್ 15: ಲೋಕಸಭೆ ಚುನಾವಣೆ (Lok Sabha Elections) ಪ್ರಚಾರಕ್ಕಾಗಿ ಭಾನುವಾರ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ (BJP) ನಡೆಸಿದ್ದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರ ಭಾಷಣ ಮಾಡಿದ್ದರು. ಮೈಸೂರು ಕೊಡಗು ಕ್ಷೇತ್ರದ ಪಕ್ಷದ ಅಭ್ಯರ್ಥಿ ಯದುವೀರ್ ಒಡೆಯರ್ (Yaduveer Krishnadatta Chamaraja Wadiyar) ಪರ ಮತಯಾಚನೆ ಮಾಡಿದ್ದರು. ಸಮಾವೇಶಕ್ಕೆ ಸಾವಿರಾರು ಹಾಜರಾಗಿದ್ದರು. ಸಮಾವೇಶದ ನಂತರ ಆ ಜಾಗದಲ್ಲಿ ಕಸ ಹೆಕ್ಕುವ ಮೂಲಕ ಯದುವೀರ್ ದಂಪತಿ ಗಮನ ಸೆಳೆದಿದ್ದಾರೆ.

ಮಹಾರಾಜ ಕಾಲೇಜು ಮೈದಾನದಲ್ಲಿ ಇತರ ಕಾರ್ಯಕರ್ತರ ಜತೆ ಸಾಮಾನ್ಯರಲ್ಲಿ ಸಾಮಾನ್ಯರಂತೆಯೇ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಸಿಂಗ್ ದಂಪತಿ ಶುಚಿತ್ವ ಕಾರ್ಯದಲ್ಲಿ ಭಾಗಿಯಾದರು. ಈ ಮೂಲಕ ‘ನಾನು ಮಹಾರಾಜ ಅಲ್ಲ, ಸಾಮನ್ಯ ಪ್ರಜೆ’ ಎಂದು ಸಾಬೀತುಪಡಿಸಲು ಯದುವೀರ್ ಮುಂದಾದಂತೆ ಕಂಡಿತು.

ಇದನ್ನೂ ಓದಿ: ಬಿಜೆಪಿಗಿಂತ ಜೆಡಿಎಸ್ ನಾಯಕರಿಗೇ ಹೆಚ್ಚು ಆದ್ಯತೆ ನೀಡಿದರೇ ಪ್ರಧಾನಿ ಮೋದಿ? ಅನುಮಾನ ಹೆಚ್ಚಿಸಿದ ಮೈಸೂರಿನ ವೇದಿಕೆ!

ಭಾನುವಾರ ಮಹಾರಾಜ ಕಾಲೇಜಯ ಮೈದಾನದಲ್ಲಿ ನಡೆದಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ 60 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಯದುವೀರ್ ಪರವಾಗಿ ಪ್ರಧಾನಿ ಮೋದಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರು ಮತಯಾಚನೆ ಮಾಡಿದ್ದರು. ಅಲ್ಲದೆ, ರಾಜ್ಯ ಇತರ ಕ್ಷೇತ್ರಗಳ ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆಯೂ ಮತದಾರರಿಗೆ ಮನವಿ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on