ಘಾನಾದಲ್ಲಿ ಭೀಕರ ದುರಂತ; ಮಿಲಿಟರಿ ಹೆಲಿಕಾಪ್ಟರ್ ಅಪಘಾತದಲ್ಲಿ ಇಬ್ಬರು ಸಚಿವರು ಸೇರಿ 8 ಜನ ಸಾವು

ಘಾನಾದಲ್ಲಿ ಭೀಕರ ಅಪಘಾತ ಉಂಟಾಗಿದ್ದು, ಸಚಿವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಈ ದುರಂತದಲ್ಲಿ ರಕ್ಷಣಾ ಸಚಿವ, ಪರಿಸರ ಸಚಿವ ಸೇರಿದಂತೆ 8 ಜನ ಮೃತಪಟ್ಟಿದ್ದಾರೆ. ಇವರಲ್ಲಿ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕಾಂಗ್ರೆಸ್ ಉಪಾಧ್ಯಕ್ಷರು, ಹಿರಿಯ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ಸಿಬ್ಬಂದಿ ಕೂಡ ಸೇರಿದ್ದಾರೆ. ಹೆಲಿಕಾಪ್ಟರ್ ಅಪಘಾತದ ಕಾರಣವನ್ನು ಇನ್ನೂ ಖಚಿತಪಡಿಸಿಲ್ಲ.

ಘಾನಾದಲ್ಲಿ ಭೀಕರ ದುರಂತ; ಮಿಲಿಟರಿ ಹೆಲಿಕಾಪ್ಟರ್ ಅಪಘಾತದಲ್ಲಿ ಇಬ್ಬರು ಸಚಿವರು ಸೇರಿ 8 ಜನ ಸಾವು
Ghana Plane Accident

Updated on: Aug 06, 2025 | 10:58 PM

ಅಕ್ರಾ (ಘಾನಾ), ಆಗಸ್ಟ್ 6: ಇಂದು ಘಾನಾದಲ್ಲಿ (Ghana Helicopter Crash) ಅತಿ ದೊಡ್ಡ ಅಪಘಾತ ಸಂಭವಿಸಿದೆ. ಮಿಲಿಟರಿ ಹೆಲಿಕಾಪ್ಟರ್ ಪತನವಾಗಿ ಘಾನಾದ ಇಬ್ಬರು ಪ್ರಮುಖ ಕ್ಯಾಬಿನೆಟ್ ಸಚಿವರು ಸೇರಿದಂತೆ 8 ಜನರು ಸಾವನ್ನಪ್ಪಿದ್ದಾರೆ. ಘಾನಾದ ರಕ್ಷಣಾ ಸಚಿವ ಎಡ್ವರ್ಡ್ ಒಮಾನೆ ಬೋಮಾ ಮತ್ತು ಪರಿಸರ ಸಚಿವ ಇಬ್ರಾಹಿಂ ಮುರ್ತಲಾ ಮುಹಮ್ಮದ್ ಅವರ ಸಾವುಗಳನ್ನು ಸರ್ಕಾರ ದೃಢಪಡಿಸಿದೆ. ಈ ಘಟನೆಯನ್ನು ಘಾನಾ ಸರ್ಕಾರ “ರಾಷ್ಟ್ರೀಯ ದುರಂತ” ಎಂದು ಕರೆದಿದೆ. ಘಾನಾ ಸಶಸ್ತ್ರ ಪಡೆಗಳ ಪ್ರಕಾರ, Z-9 ಯುಟಿಲಿಟಿ ಹೆಲಿಕಾಪ್ಟರ್ ಇಂದು ಬೆಳಿಗ್ಗೆ ಘಾನಾದ ರಾಜಧಾನಿ ಅಕ್ರಾದಿಂದ ಹೊರಟು ಪ್ರಮುಖ ಚಿನ್ನದ ಗಣಿಗಾರಿಕೆ ಕೇಂದ್ರವಾದ ಒಬುವಾಸಿಗೆ ಹೋಗುವ ಮಾರ್ಗದಲ್ಲಿತ್ತು. ಆದರೆ, ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಹೆಲಿಕಾಪ್ಟರ್ ರಾಡಾರ್‌ನಿಂದ ಮಾಯವಾಯಿತು.

ಈ ದುರಂತದಲ್ಲಿ ಮೃತರಾದವರಲ್ಲಿ ಇಬ್ಬರು ಮಂತ್ರಿಗಳ ಜೊತೆಗೆ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕಾಂಗ್ರೆಸ್‌ನ ಉಪಾಧ್ಯಕ್ಷರು, ಹಿರಿಯ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ಸಿಬ್ಬಂದಿ ಸದಸ್ಯರು ಕೂಡ ಸೇರಿದ್ದಾರೆ. ಸಾರಿಗೆ ಮತ್ತು ವೈದ್ಯಕೀಯ ಸ್ಥಳಾಂತರಿಸುವಿಕೆಗೆ ಸಾಮಾನ್ಯವಾಗಿ ಬಳಸಲಾಗುವ Z-9 ಹೆಲಿಕಾಪ್ಟರ್ ಪತನಗೊಂಡಾಗ ಅಧಿಕೃತ ಕಾರ್ಯಾಚರಣೆಯಲ್ಲಿತ್ತು ಎಂದು ವರದಿಯಾಗಿದೆ. ಅಪಘಾತದ ಕಾರಣವನ್ನು ಇನ್ನೂ ಖಚಿತಪಡಿಸಲಾಗಿಲ್ಲ.


ಇದನ್ನೂ ಓದಿ: Video: ಬಸ್‌ಗಳ ನಡುವೆ ಸಿಲುಕಿ ಅಪ್ಪಚ್ಚಿಯಾದ ಆಟೋ, ಭೀಕರ ಅಪಘಾತದ ದೃಶ್ಯ ಇಲ್ಲಿದೆ ನೋಡಿ

ಈ ದುರಂತವು ಕಳೆದ ಒಂದು ದಶಕದಲ್ಲಿ ಘಾನಾದಲ್ಲಿ ಸಂಭವಿಸಿದ ಅತ್ಯಂತ ಕೆಟ್ಟ ವೈಮಾನಿಕ ಅಪಘಾತಗಳಲ್ಲಿ ಒಂದಾಗಿದೆ. 2014ರಲ್ಲಿ ಕರಾವಳಿಯಲ್ಲಿ ಸೇವಾ ಹೆಲಿಕಾಪ್ಟರ್ ಅಪಘಾತದಲ್ಲಿ 3 ಜನರು ಸಾವನ್ನಪ್ಪಿದ್ದರು. 2021ರಲ್ಲಿ ಅಕ್ರಾದಲ್ಲಿ ಸರಕು ವಿಮಾನವು ರನ್‌ವೇಯನ್ನು ದಾಟಿ ಪ್ರಯಾಣಿಕರ ಬಸ್‌ಗೆ ಡಿಕ್ಕಿ ಹೊಡೆದು 10 ಜನರು ಸಾವನ್ನಪ್ಪಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:54 pm, Wed, 6 August 25

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us