ಎಲ್ಲೇ ಅಡಗಿದ್ದರೂ ಬಿಡೋದಿಲ್ಲ; ಖಮೇನಿಯ ಉತ್ತರಾಧಿಕಾರಿಯನ್ನು ಕೊಲ್ಲುತ್ತೇವೆಂದ ಇಸ್ರೇಲ್

ಇರಾನ್​ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಇಸ್ರೇಲ್ ಮತ್ತು ಅಮೆರಿಕ ಹತ್ಯೆ ಮಾಡಿವೆ. ಇದರ ಬೆನ್ನಲ್ಲೇ ಇರಾನ್​ನ ಹೊಸ ಸುಪ್ರೀಂ ನಾಯಕನಾಗಿ ಖಮೇನಿಯ ಮಗ ಮೊಜ್ತಾಬಾನನ್ನು ಆಯ್ಕೆ ಮಾಡಲಾಗಿದೆ. ಆದರೆ, ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲೇ ಅವರಿಗೆ ಇಸ್ರೇಲ್​ನಿಂದ ಜೀವ ಬೆದರಿಕೆ ಬಂದಿದೆ. ಇರಾನ್​ನ ಹೊಸ ಉತ್ತರಾಧಿಕಾರಿ ಯಾರೇ ಆಗಿದ್ದರೂ, ಆತ ಎಲ್ಲೇ ಅಡಗಿದ್ದರೂ ಬಿಡುವುದಿಲ್ಲ, ಆತನನ್ನು ಹುಡುಕಿ ಹತ್ಯೆ ಮಾಡಿಯೇ ತೀರುತ್ತೇವೆ ಎಂದು ಇಸ್ರೇಲ್ ರಕ್ಷಣಾ ಸಚಿವ ಬೆದರಿಕೆ ಹಾಕಿದ್ದಾರೆ.

ಎಲ್ಲೇ ಅಡಗಿದ್ದರೂ ಬಿಡೋದಿಲ್ಲ; ಖಮೇನಿಯ ಉತ್ತರಾಧಿಕಾರಿಯನ್ನು ಕೊಲ್ಲುತ್ತೇವೆಂದ ಇಸ್ರೇಲ್
Mojtaba Khamenei And Ayatollah Khamenei

Updated on: Mar 04, 2026 | 4:58 PM

ಜೆರುಸಲೇಂ, ಮಾರ್ಚ್ 4: ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಇಂದು ಇರಾನ್​ನ ನೂತನ ಸುಪ್ರೀಂ ನಾಯಕ ಮೊಜ್ತಾಬಾಗೆ ಜೀವ ಬೆದರಿಕೆ ಹಾಕಿದ್ದಾರೆ. ಟೆಹ್ರಾನ್ ಮೇಲೆ ನಡೆದ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಕೊಲ್ಲಲ್ಪಟ್ಟ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ (Ayatollah Ali Khamenei) ಉತ್ತರಾಧಿಕಾರಿಯಾಗಿ ಆಯ್ಕೆಯಾಗುವ ಇರಾನಿನ ನಾಯಕನನ್ನು ಹತ್ಯೆ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಅಯತೊಲ್ಲಾ ಅಲಿ ಖಮೇನಿಯ ಹತ್ಯೆಯ ನಂತರ ಖಾಲಿಯಾಗಿರುವ ನಾಯಕತ್ವ ಸ್ಥಾನವನ್ನು ವಹಿಸಿಕೊಳ್ಳಲು ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ವರದಿಗಳ ಮಧ್ಯೆ ಕಾಟ್ಜ್ ಅವರ ಬೆದರಿಕೆ ಬಂದಿದೆ.

ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ “ಇಸ್ರೇಲ್ ಅನ್ನು ನಾಶಮಾಡುವ, ಯುನೈಟೆಡ್ ಸ್ಟೇಟ್ಸ್ ಮತ್ತು ನಮ್ಮ ಸುತ್ತಲಿನ ಪ್ರದೇಶದ ದೇಶಗಳಿಗೆ ಬೆದರಿಕೆ ಹಾಕುವ ಮತ್ತು ಇರಾನಿನ ಜನರನ್ನು ನಿಗ್ರಹಿಸುವ ಸಲುವಾಗಿ ಇರಾನಿನ ಭಯೋತ್ಪಾದಕ ಆಡಳಿತದಿಂದ ನೇಮಿಸಲ್ಪಟ್ಟ ಯಾವುದೇ ನಾಯಕನನ್ನು ಹತ್ಯೆ ಮಾಡಲಾಗುತ್ತದೆ. ಆತ ಎಲ್ಲೇ ಅಡಗಿದ್ದರೂ ನಾವು ಬಿಡುವುದಿಲ್ಲ. ಆತ ಯಾರೇ ಆಗಿರಲಿ ಅದು ನಮಗೆ ಮುಖ್ಯವಲ್ಲ” ಎಂದು ಎಚ್ಚರಿಸಿದ್ದಾರೆ.


ಇದನ್ನೂ ಓದಿ: ಇರಾನ್​ನ ಹೊಸ ಸುಪ್ರೀಂ ನಾಯಕ ಮುಜ್ತಾಬಾ ಖಮೇನಿಯ ಆಸ್ತಿ ಎಷ್ಟು?

ಇರಾನ್ ಇಂಟರ್ನ್ಯಾಷನಲ್ ವರದಿಯ ಪ್ರಕಾರ, ಇರಾನ್‌ನ ತಜ್ಞರ ಸಭೆಯು ಅಯತೊಲ್ಲಾ ಅಲಿ ಖಮೇನಿಯವರ ಹತ್ಯೆಯ ನಂತರ ಖಾಲಿಯಾಗಿದ್ದ ನಾಯಕತ್ವವನ್ನು ವಹಿಸಿಕೊಳ್ಳಲು ಖಮೇನಿಯ ಮಗ ಮೊಜ್ತಾಬಾ ಖಮೇನಿಯನ್ನು ಆಯ್ಕೆ ಮಾಡಿದೆ. 56 ವರ್ಷದ ಮೊಜ್ತಾಬಾ ಖಮೇನಿ ಅಯತೊಲ್ಲಾ ಖಮೇನಿಯ ಎರಡನೇ ಪುತ್ರರಾಗಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us