ದೆಹಲಿ ಸಂಸತ್ ದಾಳಿ, ಮುಂಬೈ ದಾಳಿ ಹಿಂದೆ ಮಸೂದ್ ಅಜರ್ ಕೈವಾಡ ಬಯಲು; ಪಾಕಿಸ್ತಾನಕ್ಕೆ ಮುಖಭಂಗ

ತಮ್ಮ ದೇಶದಲ್ಲಿ ಯಾವುದೇ ಉಗ್ರರಿಗೆ ನೆಲೆ ಕಲ್ಪಿಸಿಲ್ಲ, ಭಯೋತ್ಪಾದನೆಗೆ ನಾವು ಬೆಂಬಲ ನೀಡುತ್ತಿಲ್ಲ ಎಂಬ ಹೇಳಿಕೆಗಳನ್ನು ನೀಡುತ್ತಾ ಬೇರೆ ದೇಶಗಳ ಕಣ್ಣಿಗೆ ಮಣ್ಣೆರಚುತ್ತಿರುವ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ಜೈಶ್-ಎ-ಮೊಹಮ್ಮದ್ ಸಂಘಟನೆಯ ನಾಯಕನೊಬ್ಬ ತಮ್ಮ ಸಂಘಟನೆಯ ಮುಖ್ಯಸ್ಥನಾದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಮಸೂದ್ ಅಜರ್ ದೆಹಲಿ, ಮುಂಬೈ ದಾಳಿಗಳನ್ನು ಪ್ಲಾನ್ ಮಾಡಿದ್ದ ಎಂಬುದನ್ನು ಒಪ್ಪಿಕೊಂಡಿದ್ದಾನೆ.

ದೆಹಲಿ ಸಂಸತ್ ದಾಳಿ, ಮುಂಬೈ ದಾಳಿ ಹಿಂದೆ ಮಸೂದ್ ಅಜರ್ ಕೈವಾಡ ಬಯಲು; ಪಾಕಿಸ್ತಾನಕ್ಕೆ ಮುಖಭಂಗ
Masood Azhar

Updated on: Sep 17, 2025 | 8:51 PM

ಇಸ್ಲಮಾಬಾದ್, ಸೆಪ್ಟೆಂಬರ್ 17: ಜೈಶ್-ಎ-ಮೊಹಮ್ಮದ್‌ ಸಂಘಟನೆಯ ಹಿರಿಯ ಕಮಾಂಡರ್ ದೆಹಲಿ ಮತ್ತು ಮುಂಬೈನಲ್ಲಿ ದಾಳಿಗಳನ್ನು ಪ್ಲಾನ್ ಮಾಡುವಲ್ಲಿ ಮಸೂದ್ ಅಜರ್‌ ಮುಖ್ಯ ಪಾತ್ರ ವಹಿಸಿದ್ದ ಎಂದು ನೇರವಾಗಿ ಆರೋಪಿಸಿದ್ದಾನೆ. ಇದರ ನಂತರ ಪಾಕಿಸ್ತಾನದ ರಾಜ್ಯ ಪ್ರಾಯೋಜಿತ ಭಯೋತ್ಪಾದಕ ಸಂಪರ್ಕಗಳು ಮತ್ತೊಮ್ಮೆ ಬಹಿರಂಗಗೊಂಡಿವೆ. ಪಾಕಿಸ್ತಾನ (Pakistan) ಉಗ್ರಗಾಮಿಗಳಿಗೆ ಆಶ್ರಯ ನೀಡುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ವಿಶ್ವಸಂಸ್ಥೆ ಗೊತ್ತುಪಡಿಸಿದ ಗುಂಪಿನ ಪ್ರಮುಖ ವ್ಯಕ್ತಿಯಾದ ಮಸೂದ್ ಇಲ್ಯಾಸ್ ಕಾಶ್ಮೀರಿ, ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ಮಸೂದ್ ಅಜರ್ ತಿಹಾರ್ ಜೈಲಿನಿಂದ ಬಿಡುಗಡೆಯಾದ ನಂತರ ಪಾಕಿಸ್ತಾನದಿಂದ ಕಾರ್ಯಾಚರಣೆಗಳನ್ನು ನಿರ್ದೇಶಿಸಿದ್ದ ಎಂದು ವೀಡಿಯೊದಲ್ಲಿ ಒಪ್ಪಿಕೊಂಡಿದ್ದಾನೆ. ಅಜರ್‌ನ ನೆಲೆ 2019ರ ಭಾರತದ ವಾಯುದಾಳಿಯ ಸ್ಥಳವಾದ ಬಾಲಕೋಟ್‌ನಲ್ಲಿದೆ ಎಂದು ಆತ ಬಹಿರಂಗಪಡಿಸಿದ್ದಾನೆ. ಇದರಿಂದ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್​​ನಿಂದ ಮಸೂದ್ ಅಜರ್ ಕುಟುಂಬ ಛಿದ್ರವಾಯಿತು; ಕೊನೆಗೂ ಒಪ್ಪಿಕೊಂಡ ಜೈಶ್ ಕಮಾಂಡರ್

ವಿಶ್ವಸಂಸ್ಥೆ ಗೊತ್ತುಪಡಿಸಿದ ಭಯೋತ್ಪಾದಕ ಗುಂಪಿನ ಉನ್ನತ ಕಮಾಂಡರ್ ಮಸೂದ್ ಇಲಿಯಾಸ್ ಕಾಶ್ಮೀರಿ, ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ಅಜರ್ 5 ವರ್ಷಗಳ ಜೈಲು ಶಿಕ್ಷೆಯ ನಂತರ ಭಾರತದಿಂದ ಬಿಡುಗಡೆಯಾದ ನಂತರ ಪಾಕಿಸ್ತಾನದಿಂದ ಭಾರತದ ಮೇಲೆ ಭಯೋತ್ಪಾದಕ ದಾಳಿಗಳನ್ನು ಆಯೋಜಿಸಿದ್ದ ಎಂದು ವೀಡಿಯೊದಲ್ಲಿ ಒಪ್ಪಿಕೊಂಡಿದ್ದಾನೆ. “ದೆಹಲಿಯ ತಿಹಾರ್ ಜೈಲಿನಿಂದ ತಪ್ಪಿಸಿಕೊಂಡ ನಂತರ, ಅಮೀರ್-ಉಲ್-ಮುಜಾಹಿದ್ದೀನ್ ಮೌಲಾನಾ ಮಸೂದ್ ಅಜರ್ ಪಾಕಿಸ್ತಾನಕ್ಕೆ ಬರುತ್ತಾನೆ. ಬಾಲಕೋಟ್ ಮಣ್ಣು ಭಾರತದ ವಿರುದ್ಧದ ಅವನ ದೃಷ್ಟಿಕೋನ, ಧ್ಯೇಯ ಮತ್ತು ಪ್ಲಾನ್​​ಗೆ ಒಂದು ನೆಲೆಯನ್ನು ಒದಗಿಸುತ್ತದೆ. ಭಾರತ ದೇಶವನ್ನು ಭಯಭೀತಗೊಳಿಸಿದ ಅಮೀರ್-ಉಲ್-ಮುಜಾಹಿದ್ದೀನ್ ಮೌಲಾನಾ ಮಸೂದ್ ಅಜರ್ ಹೀಗೆ ಕಾಣಿಸಿಕೊಳ್ಳುತ್ತಾನೆ” ಎಂದು ಕಾಶ್ಮೀರಿ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಉಗ್ರ ಹಫೀಜ್ ಸಯೀದ್, ಮಸೂದ್ ಅಜರ್​ನನ್ನು ಭಾರತಕ್ಕೆ ಹಸ್ತಾಂತರಿಸಲು ಪಾಕಿಸ್ತಾನಕ್ಕೆ ಅಭ್ಯಂತರವಿಲ್ಲ: ಬಿಲಾವಲ್

ಇದು ಪಾಕಿಸ್ತಾನದ ಮಿಲಿಟರಿ-ಭದ್ರತಾ ಸಂಸ್ಥೆಯ ಕಣ್ಗಾವಲಿನಲ್ಲಿ ಜೈಶ್ ಶಿಬಿರಗಳು ಮುಕ್ತವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ಭಾರತದ ದೀರ್ಘಕಾಲೀನ ಹೇಳಿಕೆಯನ್ನು ದೃಢಪಡಿಸುತ್ತದೆ. ಪಾಕಿಸ್ತಾನ ತನ್ನ ಗಡಿಯೊಳಗೆ “ಯಾವುದೇ ಭಯೋತ್ಪಾದಕ ಅಡಗುತಾಣಗಳು” ಇಲ್ಲ ಎಂದು ಜಗತ್ತಿಗೆ ಹೇಳಿದ್ದರೂ ಸಹ ಈ ಹೇಳಿಕೆಯಿಂದಾಗಿ ಪಾಕಿಸ್ತಾನದ ನಿಜರೂಪ ಬಯಲಾದಂತಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ