ಯುದ್ಧದ ನಡುವೆಯೂ ಅರ್ಮೇನಿಯಾ ಮೂಲಕ ಇರಾನ್ನಿಂದ 550 ಭಾರತೀಯರ ಸ್ಥಳಾಂತರ
ಇರಾನ್ ಹಾಗೂ ಅಮೆರಿಕ, ಇಸ್ರೇಲ್ ನಡುವೆ ದಾಳಿಗಳು ಮುಂದುವರೆದಿವೆ. ಈ ಯುದ್ಧ ನಿಲ್ಲುವ ಸೂಚನೆಗಳೇ ಕಾಣುತ್ತಿಲ್ಲ. ಇಸ್ರೇಲ್ ಕೊಂಚ ಮಟ್ಟಿಗೆ ತಣ್ಣಗಾಗಿದ್ದರೂ ಅಮೆರಿಕ ಹಾಗೂ ಇರಾನ್ ಕದನವಿರಾಮಕ್ಕೆ ಒಪ್ಪುತ್ತಿಲ್ಲ. ಈ ನಡುವೆ ಭಾರತ ಸರ್ಕಾರ ಇಸ್ರೇಲ್ ಹಾಗೂ ಇರಾನ್ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ನಮ್ಮ ದೇಶಕ್ಕೆ ಕರೆತರುವ ಪ್ರಯತ್ನಗಳನ್ನು ಚುರುಕುಗೊಳಿಸಿದೆ. 550ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಇರಾನ್ನಿಂದ ಅರ್ಮೇನಿಯಾ ಮೂಲಕ ಸ್ಥಳಾಂತರಿಸಲಾಗಿದೆ. ಅರ್ಮೇನಿಯಾ, ಅಜೆರ್ಬೈಜಾನ್ ಮೂಲಕ ಇರಾನ್ನ ಗಡಿ ದಾಟಿರುವ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ದೃಢಪಡಿಸಿದೆ.

ನವದೆಹಲಿ, ಮಾರ್ಚ್ 16: ಇರಾನ್ನಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಭಾರತ ಸಾಕಷ್ಟು ಪ್ರಯತ್ನಗಳನ್ನು ನಡೆಸಿತ್ತು. ಅದಕ್ಕಾಗಿ ಅಲ್ಲಿನ ರಾಯಭಾರ ಕಚೇರಿ ಸಹಾಯವಾಣಿ, ನಿಯಂತ್ರಣ ಕೊಠಡಿಯನ್ನು ಕೂಡ ತೆರೆದಿತ್ತು. ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ನ ದಾಳಿ ಮುಂದುವರೆದಿರುವುದರಿಂದ ಅರ್ಮೇನಿಯಾ ಮೂಲಕ 550 ಭಾರತೀಯರು ಇರಾನ್ನ ಗಡಿ ದಾಟಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಭೂ ಗಡಿಯ ಮೂಲಕ ಭಾರತೀಯರ ಸ್ಥಳಾಂತರಕ್ಕೆ ಅವಕಾಶ ನೀಡಿದ ಅರ್ಮೇನಿಯಾ ಸರ್ಕಾರಕ್ಕೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಧನ್ಯವಾದ ತಿಳಿಸಿದ್ದಾರೆ.
“ಇರಾನ್ನಿಂದ ಇಲ್ಲಿಯವರೆಗೆ 550ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಅರ್ಮೇನಿಯಾ ಸರ್ಕಾರ ಮತ್ತು ಅರ್ಮೇನಿಯಾದ ಜನರಿಗೆ ಧನ್ಯವಾದಗಳು. ಈ ಸವಾಲಿನ ಸಮಯದಲ್ಲಿ ನೀವು ನೀಡಿದ ಬೆಂಬಲವನ್ನು ಮರೆಯಲಾಗದು” ಎಂದು ಸಚಿವ ಎಸ್. ಜೈಶಂಕರ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Thank the Government and the people of Armenia for facilitating the safe evacuation of over 550 Indian nationals from Iran so far.
Appreciate their support in these challenging times. @AraratMirzoyan
🇮🇳 🇦🇲
— Dr. S. Jaishankar (@DrSJaishankar) March 16, 2026
ಇದನ್ನೂ ಓದಿ: ನಾವು ಕೇಳಿದರೂ ಇರಾನ್ ಒಪ್ಪಂದಕ್ಕೆ ಸಿದ್ಧವಿಲ್ಲ; ಯುದ್ಧ ನಿಲ್ಲಿಸುವ ಬಗ್ಗೆ ಟ್ರಂಪ್ ಪ್ರತಿಕ್ರಿಯೆ
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸ್ಥಳಾಂತರಿಸುವಿಕೆಯನ್ನು ಸಂಘಟಿಸಿತು. ಅದು ಭೂ ಗಡಿಗಳಲ್ಲಿ ವೀಸಾ ಮತ್ತು ವಲಸೆ ಔಪಚಾರಿಕತೆಗಳೊಂದಿಗೆ ನಾಗರಿಕರಿಗೆ ಸಹಾಯ ಮಾಡಿತು. ಅರ್ಮೇನಿಯಾಕ್ಕೆ ದಾಟಿದವರಲ್ಲದೆ ಸುಮಾರು 90 ಭಾರತೀಯ ಪ್ರಜೆಗಳು ರಾಯಭಾರ ಕಚೇರಿಯ ಸಹಾಯದೊಂದಿಗೆ ಇರಾನ್ನಿಂದ ಅಜೆರ್ಬೈಜಾನ್ ಗಡಿಯೊಳಗೆ ಪ್ರವೇಶಿಸಿದ್ದಾರೆ ಎಂದಿದ್ದಾರೆ.
#WATCH | Delhi: MEA spokesperson Randhir Jaiswal says, “…We also have had approximately 90 of our nationals from Iran cross over into Azerbaijan through the land border. These movements were facilitated by our embassy in Tehran. They helped them with visas, as well as with… pic.twitter.com/40KZ7UguX9
— ANI (@ANI) March 16, 2026
ಅರ್ಮೇನಿಯಾಕ್ಕೆ ದಾಟಿದ 550 ಸ್ಥಳಾಂತರಿಸುವವರಲ್ಲಿ 284 ಮಂದಿ ಧಾರ್ಮಿಕ ಉದ್ದೇಶಗಳಿಗಾಗಿ ಇರಾನ್ಗೆ ಪ್ರಯಾಣಿಸಿದ ಯಾತ್ರಿಕರು ಎಂದು ಜೈಸ್ವಾಲ್ ಹೇಳಿದ್ದಾರೆ. ಅವರಲ್ಲಿ ಕೆಲವರು ಈಗಾಗಲೇ ಭಾರತಕ್ಕೆ ಮರಳಿದ್ದರೆ, ಇನ್ನು ಕೆಲವರು ಮುಂಬರುವ ದಿನಗಳಲ್ಲಿ ವಿಮಾನದಲ್ಲಿ ಮರಳುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳು, ನಾವಿಕರು, ಉದ್ಯಮಿಗಳು, ವೃತ್ತಿಪರರು ಮತ್ತು ಯಾತ್ರಿಕರು ಸೇರಿದಂತೆ ಸುಮಾರು 9,000 ಭಾರತೀಯ ಪ್ರಜೆಗಳು ಪ್ರಸ್ತುತ ಇರಾನ್ನಲ್ಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಈ ಹಿಂದೆ ಹೇಳಿತ್ತು. ಭಾರತಕ್ಕೆ ತಮ್ಮ ಮುಂದಿನ ಪ್ರಯಾಣವನ್ನು ಸುಗಮಗೊಳಿಸಲು ದೇಶವನ್ನು ತೊರೆಯಲು ಬಯಸುವವರಿಗೆ ಅರ್ಮೇನಿಯಾ ಅಥವಾ ಅಜೆರ್ಬೈಜಾನ್ಗೆ ಪ್ರಯಾಣಿಸಲು ಭಾರತ ಇರಾನ್ನಲ್ಲಿರುವ ಭಾರತೀಯರಿಗೆ ಸಲಹೆ ನೀಡುತ್ತಿದೆ.
ಇದನ್ನೂ ಓದಿ: ಇರಾನ್ ಸುಪ್ರೀಂ ನಾಯಕ ಖಮೇನಿ ಬಳಸುತ್ತಿದ್ದ ವಿಮಾನವನ್ನು ಧ್ವಂಸ ಮಾಡಿದ ಇಸ್ರೇಲ್
ಹಾಗೇ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೂ ಗಲ್ಫ್ ಪ್ರದೇಶದಿಂದ ಸುಮಾರು 20,000 ಪ್ರಯಾಣಿಕರು ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲವು ಪ್ರದೇಶಗಳಲ್ಲಿ ವಾಯುಪ್ರದೇಶದ ನಿರ್ಬಂಧಗಳ ಹೊರತಾಗಿಯೂ ಈ ಪ್ರದೇಶದ ಹಲವಾರು ದೇಶಗಳ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
