‘ಧೈರ್ಯವಿದ್ದರೆ ವಿಧಾನಸಭೆಯಲ್ಲಿ ಉತ್ತರಿಸಿ’; ಕಾವೇರಿ ಸಮಸ್ಯೆ ಕುರಿತು ಸಿಎಂ ವಿಜಯ್ಗೆ ಉದಯನಿಧಿ ಸ್ಟಾಲಿನ್ ಸವಾಲು
ಚುನಾವಣಾ ಪ್ರಚಾರದ ಸಮಯದಲ್ಲಿ 5 ಎಕರೆವರೆಗೆ ಭೂಮಿ ಹೊಂದಿರುವ ಎಲ್ಲಾ ರೈತರ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಅಧಿಕಾರಕ್ಕೆ ಬಂದ ನಂತರ ಅವರು ಮೊದಲು ಮೊತ್ತವನ್ನು 50,000 ರೂ.ಗಳಿಗೆ ಮತ್ತು ನಂತರ 75,000 ರೂ.ಗಳಿಗೆ ಬದಲಾಯಿಸುವ ಮೂಲಕ ರೈತರನ್ನು ವಂಚಿಸಿದ್ದಾರೆ. ರೈತರು ಸಂಪೂರ್ಣ ಬೆಳೆ ಸಾಲ ಮನ್ನಾಕ್ಕೆ ಒತ್ತಾಯಿಸಿ ಹೋರಾಡುತ್ತಿರುವಾಗ ಟಿವಿಕೆ ಸರ್ಕಾರ ಮೌನವಾಗಿದೆ ಎಂದು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಆರೋಪಿಸಿದ್ದಾರೆ. ಇಂದು ಕಪ್ಪು ಬಟ್ಟೆ ಧರಿಸಿ ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರದ ವಿರುದ್ಧ ಉದಯನಿಧಿ ವಾಗ್ದಾಳಿ ನಡೆಸಿದ್ದಾರೆ.

ಚೆನ್ನೈ, ಆಗಸ್ಟ್ 6: ತಮಿಳುನಾಡು ವಿಧಾನಸಭೆಯಲ್ಲಿ ಮಂಡಿಸಲಾದ 2026-27ರ ಹಣಕಾಸು ವರ್ಷದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಬಜೆಟ್ ವರದಿಯನ್ನು ರೈತರಿಗೆ ಯಾವುದೇ ಪ್ರಯೋಜನವನ್ನು ನೀಡದ ನಿರಾಶಾದಾಯಕ ವರದಿ ಎಂದು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಟೀಕಿಸಿದ್ದಾರೆ. ಎಲ್ಲಾ ಡಿಎಂಕೆ ಶಾಸಕರು ಇಂದು ವಿಧಾನಸಭೆಗೆ ಕಪ್ಪು ಶರ್ಟ್ ಧರಿಸಿ ಬಂದು, ಸರ್ಕಾರ ರೈತರಿಗೆ ದ್ರೋಹ ಮಾಡಿದೆ ಎಂದು ಆರೋಪಿಸಿದರು. ಬಜೆಟ್ ಭಾಷಣದ ನಂತರ ವಿಧಾನಸಭೆ ಆವರಣದಲ್ಲಿ ಮಾಧ್ಯಮಗಳನ್ನು ಭೇಟಿಯಾದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಸರ್ಕಾರದ ಕೃಷಿ ಬಜೆಟ್ ಅನ್ನು ತೀವ್ರವಾಗಿ ಟೀಕಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, “ಕಳೆದ ಡಿಎಂಕೆ ಆಡಳಿತದಲ್ಲಿ ಪರಿಚಯಿಸಲಾದ ಕಲ್ಯಾಣ ಯೋಜನೆಗಳ ಹೆಸರುಗಳನ್ನು ಟಿವಿಕೆ ಸರ್ಕಾರ ಬದಲಾಯಿಸಿ, ತಮ್ಮದೇ ಎಂದು ಬಿಂಬಿಸಿಕೊಳ್ಳುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತ ಪಕ್ಷವು ತನ್ನ ಚುನಾವಣಾ ಭರವಸೆಗಳನ್ನು ಈಡೇರಿಸದೆ ನಿರಂತರವಾಗಿ ರೈತರನ್ನು ವಂಚಿಸುತ್ತಿದೆ ಎಂದು ಅವರು ಆರೋಪಿಸಿದರು. “ಚುನಾವಣಾ ಪ್ರಚಾರದ ಸಮಯದಲ್ಲಿ ಮುಖ್ಯಮಂತ್ರಿಗಳು 5 ಎಕರೆವರೆಗೆ ಭೂಮಿ ಹೊಂದಿರುವ ಎಲ್ಲಾ ರೈತರಿಗೆ ಸಂಪೂರ್ಣ ಬೆಳೆ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ, ಅವರು ಆರಂಭದಲ್ಲಿ 50,000 ರೂ.ವರೆಗೆ ಮಾತ್ರ ಮನ್ನಾ ಮಾಡಲಾಗುವುದು ಎಂದು ಹೇಳಿದ್ದರು. ನಂತರ, ಡಿಎಂಕೆ ಮತ್ತು ರೈತರ ವಿರೋಧದ ನಂತರ, ಅವರು ಅದನ್ನು 75,000ಕ್ಕೆ ಹೆಚ್ಚಿಸಿದರು. ಚುನಾವಣಾ ಭರವಸೆಯಂತೆ ರೈತರು ಸಂಪೂರ್ಣ ಬೆಳೆ ಸಾಲವನ್ನು ಮನ್ನಾ ಮಾಡಬೇಕೆಂದು ನಿರಂತರವಾಗಿ ಒತ್ತಾಯಿಸುತ್ತಿದ್ದರೂ, ಸರ್ಕಾರ ಈ ವಿಷಯದ ಬಗ್ಗೆ ಮೌನವಾಗಿದೆ” ಎಂದು ಉದಯನಿಧಿ ಆರೋಪಿಸಿದರು.
ಇದನ್ನೂ ಓದಿ: ‘ಅಹಂಕಾರವೇ ವಿನಾಶಕ್ಕೆ ದಾರಿ’; ಉದಯನಿಧಿ ಬಿಡುಗಡೆ ಬಳಿಕ ಸಿಎಂ ವಿಜಯ್ ಸರ್ಕಾರದ ವಿರುದ್ಧ ಸ್ಟಾಲಿನ್ ವಾಗ್ದಾಳಿ
ಮೇಕೆದಾಟು ಮತ್ತು ಕಾವೇರಿ ನೀರಿನ ಕೊರತೆ:
ಕಳೆದ ಕೆಲವು ತಿಂಗಳುಗಳಲ್ಲಿ ತಮಿಳುನಾಡು ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಿಗೆ ಈ ಬಜೆಟ್ನಲ್ಲಿ ಯಾವುದೇ ಪರಿಹಾರವಿಲ್ಲ ಎಂದು ಅವರು ಟೀಕಿಸಿದರು. “ರಾಜ್ಯದಲ್ಲಿ ಕಾವೇರಿ ನೀರಿನ ಕೊರತೆಯಿಂದಾಗಿ, ರೈತರು ಕೃಷಿ ಮಾಡಲು ಸಾಧ್ಯವಾಗದೆ ಭಾರಿ ನಷ್ಟ ಅನುಭವಿಸಿದ್ದಾರೆ. ಕರ್ನಾಟಕ ಸರ್ಕಾರದ ಮೇಕೆದಾಟು ಅಣೆಕಟ್ಟು ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಸರ್ಕಾರ ತಮಿಳುನಾಡು ರೈತರ ಹಕ್ಕುಗಳನ್ನು ರಕ್ಷಿಸಲು ಯಾವುದೇ ಗಂಭೀರ ಕ್ರಮಗಳನ್ನು ತೆಗೆದುಕೊಂಡಿಲ್ಲ” ಎಂದು ಅಸಮಾಧಾನ ಹೊರಹಾಕಿದರು.
ಕಳೆದ ಕೆಲವು ತಿಂಗಳುಗಳಿಂದ ಅನೇಕ ಕಷ್ಟಗಳನ್ನು ಎದುರಿಸುತ್ತಿರುವ ರೈತರ ಧ್ವನಿಯಾಗಿ ಮತ್ತು ಅವರ ಹಕ್ಕುಗಳನ್ನು ರಕ್ಷಿಸುವ ಮಾರ್ಗವಾಗಿ ಎಲ್ಲಾ ಡಿಎಂಕೆ ಶಾಸಕರು ಕಪ್ಪು ಶರ್ಟ್ ಧರಿಸಿ ಬಂದು ನಾಯಕನ ಆದೇಶದ ಮೇರೆಗೆ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಉದಯನಿಧಿ ಹೇಳಿದರು.
ಇದನ್ನೂ ಓದಿ: ‘ಟಿವಿಕೆ ಸರ್ಕಾರ ನನ್ನನ್ನು ಉಗ್ರನಂತೆ ನಡೆಸಿಕೊಂಡಿತು’; ಉದಯನಿಧಿ ಸ್ಟಾಲಿನ್ ಆರೋಪ
ಧೈರ್ಯವಿದ್ದರೆ ಉತ್ತರಿಸಿ:
ವಿಧಾನಸಭೆಯಲ್ಲಿ ಕಾವೇರಿ ನೀರಿನ ಸಮಸ್ಯೆ ಮತ್ತು ರೈತರ ಮೇಲಿನ ಪರಿಣಾಮದ ಕುರಿತು ಚರ್ಚಿಸಲು ಪ್ರಶ್ನೋತ್ತರ ಅವಧಿ ಮುಗಿದ ನಂತರ ಮುಂದೂಡಿಕೆ ನಿರ್ಣಯ ಮಂಡಿಸಲು ಸ್ಪೀಕರ್ಗೆ ಪತ್ರ ಸಲ್ಲಿಸಲಾಗಿದೆ. “ನಾಳೆ ರೈತರಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸುತ್ತೇವೆ. ಮುಖ್ಯಮಂತ್ರಿಗಳಿಗೆ ಧೈರ್ಯವಿದ್ದರೆ, ಅವರು ಎದ್ದು ನಿಂತು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲಿ” ಎಂದು ಉದಯನಿಧಿ ಸ್ಟಾಲಿನ್ ಸವಾಲು ಹಾಕಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




