AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರ್ಮುಜ್​ನಿಂದ ಎರಡು ಭಾರತೀಯ ಗ್ಯಾಸ್ ಟ್ಯಾಂಕರ್ ಸಾಗಲು ಅನುಮತಿ; ಇದು ಮಾತುಕತೆಯ ಫಲ ಎಂದ ಸಚಿವ ಜೈಶಂಕರ್

Minister S Jaishankar explains how India able to get 2 gas tankers from Hormuz Strait: ಯುದ್ಧದಿಂದ ಬ್ಲಾಕ್ ಆಗಿರುವ ಹಾರ್ಮುಜ್ ಜಲಸಂಧಿ ಮೂಲಕ ಎರಡು ಭಾರತೀಯ ಟ್ಯಾಂಕರ್​ಗಳು ಪರ್ಷಿಯಲ್ ಕೊಲ್ಲಿ ದಾಟಿ ಭಾರತದತ್ತ ಬರುತ್ತಿವೆ. ಇರಾನ್ ಜೊತೆ ಭಾರತ ಡೀಲ್ ಮಾಡಿಕೊಂಡಿದೆ ಎನ್ನುವಂತಹ ಸುದ್ದಿಗಳೂ ಹರಿದಾಡುತ್ತಿವೆ. ಈ ವಿಚಾರ ಮತ್ತು ಆರೋಪಗಳ ಬಗ್ಗೆ ಸರ್ಕಾರ ಪ್ರತಿಕ್ರಿಯಿಸಿದೆ. ಸಚಿವ ಜೈಶಂಕರ್ ಮಾತನಾಡಿದ್ದಾರೆ.

ಹಾರ್ಮುಜ್​ನಿಂದ ಎರಡು ಭಾರತೀಯ ಗ್ಯಾಸ್ ಟ್ಯಾಂಕರ್ ಸಾಗಲು ಅನುಮತಿ; ಇದು ಮಾತುಕತೆಯ ಫಲ ಎಂದ ಸಚಿವ ಜೈಶಂಕರ್
ಎಸ್ ಜೈಶಂಕರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 16, 2026 | 12:57 PM

Share

ನವದೆಹಲಿ, ಮಾರ್ಚ್ 16: ಹಾರ್ಮುಜ್ ಜಲಸಂಧಿಯನ್ನು ಬ್ಲಾಕ್ ಮಾಡಿದ್ದ ಇರಾನ್ ಮೊನ್ನೆಯಷ್ಟೇ ಎರಡು ಭಾರತೀಯ ಗ್ಯಾಸ್ ಟ್ಯಾಂಕರ್​ಗಳು (Indian flagged gas tankers) ಸಾಗಲು ಅನುಮತಿ ಕೊಟ್ಟಿದೆ. ಈ ವಿಚಾರದ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಪ್ರತಿಕ್ರಿಯಿಸಿದ್ದಾರೆ. ಭಾರತೀಯ ಹಡಗುಗಳಿಗೆ ಇರಾನ್ ಅನುಮತಿಸಿರುವುದರ ಹಿಂದೆ ಯಾವುದೇ ಒಪ್ಪಂದ ಇಲ್ಲ. ಇದು ಎರಡು ದೇಶಗಳ ನಡುವಿನ ಸಂಬಂಧದ ಫಲ, ಮಾತುಕತೆಯ ಫಲ ಎಂದು ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.

ಇರಾನ್ ಜೊತೆ ಭಾರತ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ, ಭಾರತದ ಹಡಗುಗಳಿಗೆ ಇರಾನ್ ಒಪ್ಪಿಗೆ ಕೊಟ್ಟಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಜೈಶಂಕರ್ ಅವರು ಈ ಸ್ಪಷ್ಟನೆ ಕೊಟ್ಟಿದ್ದು, ಇರಾನ್ ಮಾಡಿರುವ ಸಹಾಯಕ್ಕೆ ಬದಲಾಗಿ ಭಾರತ ಮತ್ತೇನೂ ನೆರವು ಕೊಟ್ಟಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಸರ್ಕಾರದಿಂದ ಎಲ್​ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ

‘ಇದು ವಿನಿಮಯದ ವಿಚಾರ ಅಲ್ಲ. ಭಾರತ ಮತ್ತು ಇರಾನ್ ನಡುವೆ ಸಂಬಂಧ ಮೊದಲಿಂದಲೂ ಇದೆ. ಇದರ ಆಧಾರದ ಮೇಲೆ ನಾನು ಮಾತುಕತೆ ನಡೆಸುತ್ತಿದ್ದೇನೆ. ಈ ಮಾತುಕತೆಯು ಕೆಲ ಫಲ ಕೊಟ್ಟಿದೆ. ಈ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಮಾತುಕತೆಯಿಂದ ಫಲ ದೊರಕುತ್ತಿದೆ ಎಂದಾದರೆ ಸಹಜವಾಗಿ ನಾನು ಅದೇ ನಿಟ್ಟಿನಲ್ಲಿ ಮುಂದುವರಿಯುತ್ತೆನೆ’ ಎಂದು ಸಚಿವರು ತಿಳಿಸಿದ್ದಾರೆ.

‘ಇವು ಇನ್ನೂ ಆರಂಭಿಕ ದಿನಗಳಷ್ಟೇ. ನಮ್ಮ ಇನ್ನೂ ಹಲವು ಹಡಗುಗಳು ಅಲ್ಲಿವೆ. ಈಗ ಎರಡು ಹಡಗುಗಳನ್ನು ಬಿಟ್ಟಿರುವುದು ಸ್ವಾಗತಾರ್ಹ ಬೆಳವಣಿಗೆ. ಹಾಗೆಯೇ, ಮಾತುಕತೆ ಮುಂದುವರಿಯುತ್ತಿರುವುದೂ ಹೌದು’ ಎಂದು ಜೈಶಂಕರ್ ವಿವರಿಸಿದ್ದಾರೆ.

ಇದನ್ನೂ ಓದಿ: ಗ್ಯಾಸ್​ ಬುಕಿಂಗ್ ಆಗುತ್ತಿಲ್ಲವೇ? ವಾಟ್ಸಾಪ್ ಮೂಲಕ ಸುಲಭವಾಗಿ LPG ಬುಕ್ ಮಾಡುವುದು ಹೇಗೆ?

ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಇರಾನ್ ಅಧ್ಯಕ್ಷ ಮಸೂದ್ ಪೆಜೆಶಕಿಯನ್ ಜೊತೆ ಮಾತನಾಡಿ, ಇಂಧನ ಮತ್ತು ಸರಕುಗಳ ಸಾಗಣೆ ವಿಚಾರವನ್ನು ಚರ್ಚಿಸಿದ್ದಾರೆ. ಅದೇ ವೇಳೆ, ಇರಾನ್​ನಿಂದ ತಡೆ ಎದುರಿಸುತ್ತಿರುವ ಹಾರ್ಮುಜ್ ಜಲಸಂಧಿ ಮೂಲಕ ಎಲ್​ಪಿಜಿ ಹೊತ್ತ ಎರಡು ಭಾರತೀಯ ಟ್ಯಾಂಕರ್​ಗಳು ಅರೇಬಿಯನ್ ಸಮುದ್ರ ಪ್ರವೇಶಿಸಿ ಭಾರತವನ್ನು ತಲುಪುತ್ತಿವೆ ಎನ್ನಲಾಗುತ್ತಿದೆ. ಶಿವಾಲಿಕ್ ಮತ್ತು ನಂದಾದೇವಿ ಹೆಸರಿನ ಈ ಹಡಗುಗಳು ಇನ್ನೆರಡು ದಿನದೊಳಗೆ ಮುಂದ್ರಾ ಮತ್ತು ಕಾಂಡ್ಲಾ ಪೋರ್ಟ್​ಗಳಿಗೆ ಬರುವ ನಿರೀಕ್ಷೆ ಇದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us