Turkey Earthquake: 28 ಸಾವಿರ ಗಡಿದಾಟಿದ ಸಾವಿನ ಸಂಖ್ಯೆ; ಸಂತ್ರಸ್ತರ ಲೂಟಿ ಮಾಡಿದ 48 ಮಂದಿ ಬಂಧನ

Arson and Looting: ಟರ್ಕಿ, ಸಿರಿಯಾ ಭೂಕಂಪದಲ್ಲಿ ಸಾವಿನ ಸಂಖ್ಯೆ 28 ಸಾವಿರ ಗಡಿ ದಾಟಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಬಹಳ ಹೆಚ್ಚಾಗುವ ಭೀತಿ ಇದೆ. ಭೂಕಂಪಪೀಡಿತ ಜಾಗದಲ್ಲಿ ಕೆಲ ದುಷ್ಕರ್ಮಿಗಳು ಲೂಟಿಯಲ್ಲಿ ತೊಡಗಿರುವ ಘಟನೆಗಳೂ ನಡೆಯುತ್ತಿವೆ.

Turkey Earthquake: 28 ಸಾವಿರ ಗಡಿದಾಟಿದ ಸಾವಿನ ಸಂಖ್ಯೆ; ಸಂತ್ರಸ್ತರ ಲೂಟಿ ಮಾಡಿದ 48 ಮಂದಿ ಬಂಧನ
ಟರ್ಕಿ ಭೂಕಂಪ

Updated on: Feb 12, 2023 | 8:15 AM

ಇಸ್ಲಾಂಬುಲ್: ಟರ್ಕಿ ಮತ್ತು ಸಿರಿಯಾ ಭೂಕಂಪಗಳಲ್ಲಿ ಸಾವಿನ ಸಂಖ್ಯೆ ನಿರೀಕ್ಷೆಮೀರಿ ಹೆಚ್ಚುತ್ತಿದ್ದು, ಈಗಾಗಲೇ 28 ಸಾವಿರಕ್ಕೂ ಹೆಚ್ಚು ಮಂದಿ ಸತ್ತಿರುವುದು ದೃಢಪಟ್ಟಿದೆ. ಇನ್ನೂ ಕೂಡ ಬಹಳಷ್ಟು ಕಟ್ಟಡಗಳ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಬಾಕಿ ಇದ್ದು ಸಾವಿನ ಸಂಖ್ಯೆ (Death Toll In Turkey Earthquake) ಇನ್ನೂ ಹೆಚ್ಚಾಗಲಿದೆ. ಅಲ್ಲದೇ ಗಾಯಾಳುಗಳ ಸಂಖ್ಯೆಯೂ ಹೆಚ್ಚಿದ್ದು, ಸಾವಿನ ಸಂಖ್ಯೆ ಉಬ್ಬರಕ್ಕೆ ಕಾರಣವಾಗಬಹುದು.

ಅಲ್ಲಲ್ಲಿ ಪವಾಡಸದೃಶರಂತೆ ಕಟ್ಟಡಗಳ ಅವಶೇಷಗಳಡಿ ಜನರು ಜೀವಂತವಾಗಿ ಸಿಕ್ಕಿರುವ ಘಟನೆಗಳು ನಡೆದಿವೆ. ಹಾಗೆಯೇ, ಕೆಲ ಕಡೆ ಕಿಡಿಗೇಡಿಗಳು ಲೂಟಿಯಲ್ಲಿ ತೊಡಗಿರುವುದು ವರದಿಯಾಗುತ್ತಿದೆ. ಭೂಕಂಪ ಸಂತ್ರಸ್ತರಿಂದಲೂ ಇವರು ಲೂಟಿ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಟರ್ಕಿ ಪೊಲೀಸರು ಇಂಥ 48 ಮಂದಿ ವಂಚಕರನ್ನು ಬಂಧಿಸಿರುವುದು ತಿಳಿದುಬಂದಿದೆ. ಯಾರಾದರೂ ಕಾನೂನು ಮುರಿಯಲು ಪ್ರಯತ್ನಿಸಿದರೆ ತುರ್ತುಸಂದರ್ಭದ ಅಧಿಕಾರ ಬಳಸಿ ಕಠಿಣ ಶಿಕ್ಷೆ ವಿಧಿಸುವುದಾಗಿ ಟರ್ಕಿ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.

ದೇಶದ ಜನರು ಮತ್ತು ಆಡಳಿತ ಭೂಕಂಪದಿಂದ ಕಂಗೆಟ್ಟಿರುವ ಸಂದರ್ಭದಲ್ಲೂ ಕೆಲ ಗುಂಪುಗಳು ಜಗಳದಲ್ಲಿ ತೊಡಗಿವೆ. ಹಟಾಯ್ ಪ್ರಾಂತ್ಯದಲ್ಲಿ ವಿವಿಧ ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಪರಿಣಾಮವಾಗಿ ಅಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಆಸ್ಟ್ರಿಯಾ ದೇಶದ ತಂಡವು ಹೆದರಿಕೆಯಿಂದ ಬೇಸ್ ಕ್ಯಾಂಪ್​ನಲ್ಲಿ ಆಶ್ರಯ ಪಡೆಯಬೇಕಾದ ಘಟನೆ ನಡೆದಿದೆ.

ಇದನ್ನೂ ಓದಿ: Turkey Earthquake: ಟರ್ಕಿ ಭೂಕಂಪ; ಭಾರತೀಯರು ಅವಶೇಷಗಳಡಿ ಸಿಲುಕಿದ್ದಾರೆಯೇ? ರಾಯಭಾರಿ ನೀಡಿದ ಮಾಹಿತಿ ಇಲ್ಲಿದೆ

ಇನ್ನು, ಟರ್ಕಿಯ ಕೆಲ ಪ್ರಾಂತ್ಯಗಳಲ್ಲಿ ಕಳಪೆ ಕಾಮಗಾರಿಗಳಿಂದಾಗಿ ಕಟ್ಟಡಗಳು ಕೆಳಗುರುಳಿರುವ ಹಿನ್ನೆಲೆಯಲ್ಲಿ ಪೊಲೀಸರು 12 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಟರ್ಕಿ ಮತ್ತು ಸಿರಿಯಾದಲ್ಲಿ ಇದೇ ವೇಳೆ ಪ್ರತೀಕೂಲ ಹವಾಮಾನವು ಭೂಕಂಪಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಗಳನ್ನು ಕಠಿಣಗೊಳಿಸಿದೆ. ಥರಗುಟ್ಟುವ ಚಳಿಯಲ್ಲಿ ರಕ್ಷಣಾ ಕಾರ್ಯ ಹೆಚ್ಚು ವೇಗದಲ್ಲಿ ನಡೆಯಲಾಗುತ್ತಿಲ್ಲ.

Published On - 8:13 am, Sun, 12 February 23

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us