AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ugadi Special 2022 : ಯುಗಾದಿ ಹಬ್ಬಕ್ಕೂ – ಆಯರ್ವೇದಕ್ಕೂ ಪಾರಂಪರಿಕ ಸಂಬಂಧವಿದೆ

Ugadi Special 2022 : ಬೇವು-ಬೆಲ್ಲ ಸುಖ ದುಃಖಗಳ ಸಂಕೇತವಾಗಿದ್ದೂ, ಮನುಕುಲಕ್ಕೆ ಜೀವನ ಒಡ್ದುವ ಸವಾಲುಗಳನ್ನು ಎದುರಿಸುವ ಮೂಲಕ, ಸುಖ- ದುಃಖ ಎರಡನ್ನು ಸಮನಾಗಿ ನೋಡಬೇಕೆಂಬ ಸಂದೇಶವನ್ನು ಸಾರುತ್ತದೆ. ಸಿಹಿ – ಕಹಿಯನ್ನು ಸಮದೃಷ್ಟಿಯಿಂದ ಸವಿಯಬೇಕು ಎನ್ನುವ ಸಲುವಾಗಿ ನಮ್ಮ ಹಿರಿಯರು ಬೇವು ಬೆಲ್ಲವನ್ನು ಯುಗಾದಿ ಹಬ್ಬದಂದು ತಿನ್ನಿಸುತ್ತಿದ್ದರು.

Ugadi Special 2022 : ಯುಗಾದಿ ಹಬ್ಬಕ್ಕೂ - ಆಯರ್ವೇದಕ್ಕೂ ಪಾರಂಪರಿಕ ಸಂಬಂಧವಿದೆ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 02, 2022 | 9:02 AM

Share

ಹೋಳಿ ಹಬ್ಬದ ರಂಗು ಮಾಸಲು ಆರಂಭಿಸುತ್ತಿದ್ದಂತೆಯೇ, ಪ್ರಕೃತಿಯ ತರು-ಲತೆಗಳಲ್ಲಿ ಚಿಗುರೆಲೆಗಳು ಕಾಣಿಸಿಕೊಂಡು ಅವು ನವಜೀವನವನ್ನು ಪಡೆದುಕೊಳ್ಳುವುದರ ಮೂಲಕ ವಸಂತಾಗಮನವನ್ನು ಸಾರುತ್ತದೆ. ಯುಗಾದಿ ಎಂದರೆ “ಯುಗದ ಆದಿ”, ಅಂದರೆ ಹೊಸ ವರುಷ. ಈ ಹಬ್ಬ ಬಂತೆಂದರೆ ಎಲ್ಲೆಡೆ ಸಂತೋಷ, ಸಂಭ್ರಮ ತುಂಬಿ ತುಳುಕುತ್ತಿರುತ್ತದೆ. ಚೈತ್ರಮಾಸದ ಹೊಸ್ತಿಲಲ್ಲಿ ನಿಂತಿರುವ ನಮ್ಮೆಲ್ಲರ ಪಾಲಿಗೆ ಹೊಸ ವರುಷದ ಜೊತೆಗೆ ಜೀವನಕ್ಕೆ ಹೊಸ ಕಂಪನ್ನು ತರುವುದು ಯುಗಾದಿ. ಯುಗಾದಿ ಹಬ್ಬ ಅಂದ್ರೆ “ಹೊಸತನದ ಹುರುಪು”. ಎಣ್ಣೆ ಸ್ನಾನ , ಹೊಸ ಉಡುಗೆ ತೊಡುವ ಸಂಭ್ರಮ, ಮನೆ ಮನೆಗಳಲ್ಲಿ ಹಸಿರು ತೋರಣಗಳ ಅಲಂಕಾರ,ಹೋಳಿಗೆಯ ಘಮ ಇರುತ್ತದೆ. ಹಿಂದೂ ಆಚರಣೆಗಳ ಪ್ರಕಾರ ಪ್ರತಿ ಹಬ್ಬಕ್ಕೂ ವಿಶೇಷ ಮಹತ್ವವಿದೆ. ಯುಗಾದಿಯ ದಿನ ಕೆಲ ಆಚರಣೆಗಳನ್ನು ತಪ್ಪದೇ ಪಾಲಿಸಬೇಕು. ಆ ಆಚರಣೆಗಳನ್ನು ಪಾಲಿಸುವುದರಿಂದ ವರುಷವಿಡೀ ಶುಭ ಫಲಗಳನ್ನು ಕಾಣಬಹುದೆಂಬ ನಂಬಿಕೆ ಆಗಿನ ಕಾಲದಿಂದಲೂ ಮುಂದುವರೆದುಕೊಂಡು ಬಂದಿದೆ. ವಿಶೇಷವಾಗಿ ಯುಗಾದಿ ಎಂದಾಕ್ಷಣ ನಮಗೆ ನೆನಪಿಗೆ ಬರೋದು ಬೇವು ಬೆಲ್ಲ.

ಬೇವು-ಬೆಲ್ಲ ಸುಖ ದುಃಖಗಳ ಸಂಕೇತವಾಗಿದ್ದೂ, ಮನುಕುಲಕ್ಕೆ ಜೀವನ ಒಡ್ದುವ ಸವಾಲುಗಳನ್ನು ಎದುರಿಸುವ ಮೂಲಕ, ಸುಖ- ದುಃಖ ಎರಡನ್ನು ಸಮನಾಗಿ ನೋಡಬೇಕೆಂಬ ಸಂದೇಶವನ್ನು ಸಾರುತ್ತದೆ. ಸಿಹಿ – ಕಹಿಯನ್ನು ಸಮದೃಷ್ಟಿಯಿಂದ ಸವಿಯಬೇಕು ಎನ್ನುವ ಸಲುವಾಗಿ ನಮ್ಮ ಹಿರಿಯರು ಬೇವು ಬೆಲ್ಲವನ್ನು ಯುಗಾದಿ ಹಬ್ಬದಂದು ತಿನ್ನಿಸುತ್ತಿದ್ದರು. ಬೇವು ಬೆಲ್ಲಕ್ಕೆ ವಿಶೇಷವಾದ ಔಷಧಿ ಗುಣಗಳು ಇರುವುದನ್ನು ನಾವು ಆಯರ್ವೇದದಲ್ಲಿ ಕಾಣಬಹುದು. ಇದು ಮಾನವನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಯುಗಾದಿ ಹಬ್ಬದ ಮತ್ತೊಂದು ವಿಶೇಷತೆ ಎಂದರೆ, ಮನೆಯ ಮುಂದಿನ ಬಣ್ಣದ ರಂಗೋಲಿ, ಮಾವಿನ ತೋರಣ ಹಾಗೂ ಪುಷ್ಪಾಲಂಕಾರ. ಇವುಗಳೆಲ್ಲವೂ ಶುಭ ಕಾರ್ಯಕ್ರಮದ ಸಂಕೇತವಾಗಿದೆ. ವೈಜ್ಞಾನಿಕವಾಗಿ ಹಬ್ಬ ಹರಿದಿನಗಳಲ್ಲಿ ಅತೀ ಹೆಚ್ಚು ಜನ ಒಂದೆಡೆ ಸೇರಿದಾಗ ಜನ ದಟ್ಟಣೆಯಿಂದ ಆಮ್ಲಜನಕದ ಕೊರತೆ ಉಂಟಾಗಬಹುದು ಮಾವಿನ ಎಲೆಯು ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನು ಉತ್ಪಾದಿಸುವುದಿಂದ ಸಮಾರಂಭದ ಸುತ್ತಮುತ್ತಲೂ ಹಸಿರು ಮಾವಿನ ತೋರಣವನ್ನು ಕಟ್ಟುತ್ತಾರೆ. ಇನ್ನು ಮನೆಯ ಮುಂಬಾಗಿಲು ಮತ್ತು ದೇವರ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟುವುದರಿಂದ ಮನೆಯಲ್ಲಿ ಹಬ್ಬದ ವಾತಾವರಣ ಮೂಡಿ ಎಲ್ಲರ ಮನಸ್ಸಲ್ಲಿ ಉತ್ಸಾಹ ತುಂಬುತ್ತದೆ. ಜೊತೆಗೆ ಮನೆಯನ್ನು ಪ್ರವೇಶಿಸುತಿದ್ದಂತೆಯೇ ಹಚ್ಚ ಹಸಿರಿನ ತೋರಣ ಕಣ್ಣಿಗೆ ತಂಪನ್ನು ನೀಡುತ್ತದೆ.

ಇದೆಲ್ಲದರ ಜೊತೆಗೆ ಯುಗಾದಿ ಎಂದ ಕೂಡಲೇ ನಮಗೆ ನೆನಪಾಗೋ ಮತ್ತೊಂದು ವಿಚಾರವೇ “ಹಬ್ಬದ ಅಡುಗೆ”. ಅಮ್ಮ ಮಾಡೋ ಸಿಹಿ ತಿನಿಸುಗಳು, ಹಬ್ಬಕ್ಕಾಗಿ ತಯಾರಿಸುವ ವಿಶೇಷ ಖ್ಯಾದ್ಯಗಳು ಹಬ್ಬದ ರಂಗನ್ನೇ ಹೆಚ್ಚಿಸುತ್ತದೆ. ಯುಗಾದಿ ಹಬ್ಬದ ವಿಶೇಷ ತಿನಿಸು ಒಬ್ಬಟ್ಟು,ಬೇಳೆ ಅಥವಾ ತೆಂಗಿನಕಾಯಿಯ ಹೂರಣದಿಂದ ಮಾಡಲ್ಪಡುವ ಹೋಳಿಗೆ ಮನೆಮಂದಿಗೆಲ್ಲ ಬಹಳಾ ಅಚ್ಚುಮೆಚ್ಚು. ಹೋಳಿಗೆ ಜೊತೆ, ಹಾಲು,ತುಪ್ಪ, ಬಾಳೆಹಣ್ಣನ್ನು ಬೆರೆಸಿ ತಿಂದರೆ ಅದರ ಸುಖವೇ ಬೇರೆ . ಇನ್ನು ಮಾವಿನಕಾಯಿ ಚಿತ್ರಾನ್ನ, ಮಾವಿನಕಾಯಿ ತೊಕ್ಕು, ಹಪ್ಪಳ, ಸಂಡಿಗೆ, ಪಚ್ಚಡಿ, ಸೀಕರಣೆ ಒಬ್ಬಟ್ ಸಾರು ಇಂತಹ ರುಚಿ ರುಚಿಯ ಆಹಾರ ಪದರ‍್ಥಗಳು ನಿಜವಾಗಿಯೂ ಯುಗಾದಿಯಾ ಮೆರಗನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ಯುಗಾದಿ ಹೊಸ ವರುಷದ ಜೊತೆಗೆ ಹೊಸ ಹರುಷವನ್ನು ಎಲ್ಲರಲ್ಲೂ ತರಲಿ ಎಂದು ಆಶೀಸೋಣ.

ತೇಜಶ್ವಿನಿ ಕಾಂತರಾಜ್ ಎಸ್ ಡಿ ಎಂ ಕಾಲೇಜು , ಉಜಿರೆ