ಕೇಂದ್ರ ಬಜೆಟ್ 2024: ಏಕೀಕೃತ ಸಬ್ಸಿಡಿ, ಜೈವಿಕ ರಸಗೊಬ್ಬರಗಳಿಗೆ ಸಬ್ಸಿಡಿ ಸೇರಿದಂತೆ ಕೃಷಿ ವಲಯದ ವಿವಿಧ ಬೇಡಿಕೆಗಳಿವು…

|

Updated on: Jun 21, 2024 | 4:55 PM

Agricultural sector expectations from Union Budget 2024: ಕೃಷಿ ಕ್ಷೇತ್ರದ ಸಂಘ ಸಂಸ್ಥೆಗಳು, ತಜ್ಞರು ಮೊದಲಾದವರು ಇಂದು (ಜೂನ್ 21) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚಿಸಿದ್ದಾರೆ. ಕೃಷಿ ಕ್ಷೇತ್ರಕ್ಕೆ ಉತ್ತೇಜನ ಸಿಗಲು ಯಾವೆಲ್ಲಾ ಅಂಶಗಳು ಬೇಕಾಗಬಹುದು ಎಂದು ಇವರು ಸಲಹೆ ನೀಡಿರುವುದು ತಿಳಿದುಬಂದಿದೆ. ಜೈವಿಕ ರಸಗೊಬ್ಬರಗಳಿಗೆ ಸಬ್ಸಿಡಿ ಕೊಡಬೇಕು, ಯೂರಿಯಾ ದರ ಏರಿಸಬೇಕು ಎಂಬಿತ್ಯಾದಿ ಬೇಡಿಕೆಗಳು ಈ ಸಂದರ್ಭದಲ್ಲಿ ವ್ಯಕ್ತವಾಗಿವೆ.

ಕೇಂದ್ರ ಬಜೆಟ್ 2024: ಏಕೀಕೃತ ಸಬ್ಸಿಡಿ, ಜೈವಿಕ ರಸಗೊಬ್ಬರಗಳಿಗೆ ಸಬ್ಸಿಡಿ ಸೇರಿದಂತೆ ಕೃಷಿ ವಲಯದ ವಿವಿಧ ಬೇಡಿಕೆಗಳಿವು...
ನಿರ್ಮಲಾ ಸೀತಾರಾಮನ್
Follow us on

ನವದೆಹಲಿ, ಜೂನ್ 21: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್ ರಚಿಸುವ ಮುನ್ನ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಸಲಹೆ ಸೂಚನೆಗಳನ್ನು ಪಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ನಿಟ್ಟಿನಲ್ಲಿ ಇಂದು (ಜೂನ್ 21) ಶುಕ್ರವಾರ ವಿವಿಧ ಕೃಷಿ ಸಂಘಟನೆಗಳ ಪ್ರತಿನಿಧಿಗಳು ಮತ್ತು ಕೃಷಿ ತಜ್ಞರು ನಿರ್ಮಲಾ ಸೀತಾರಾಮನ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಎರಡೂವರೆ ಗಂಟೆ ಕಾಲ ನಡೆದ ಚರ್ಚೆಯಲ್ಲಿ ಐಸಿಎಫ್​ಎ, ಭಾರತ್ ಕೃಷಿಕ್ ಸಮಾಜ್, ಸಿಎಸಿಪಿ, ನ್ಯಾಷನಲ್ ಇನ್ಸ್​​ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಎಕನಾಮಿಕ್ಸ್ ಅಂಡ್ ಪಾಲಿಸಿ ರೀಸರ್ಚ್, ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಶನ್ ಆಫ್ ಸದರ್ನ್ ಇಂಡಿಯಾ ಮೊದಲಾದ ಸಂಘ ಸಂಸ್ಥೆಗಳು ಈ ನಿಯೋಗದಲ್ಲಿದ್ದವು.

ಕೃಷಿ ಕ್ಷೇತ್ರದ ಬೇಡಿಕೆಗಳು

  • ರೈತರ ಆದಾಯ ಹೆಚ್ಚಿಸಲು ಮತ್ತು ಕೃಷಿ ಕ್ಷೇತ್ರಕ್ಕೆ ಪುಷ್ಟಿ ಕೊಡಲು ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಮೊತ್ತದ ಹೂಡಿಕೆ ಬೇಕು.
  • ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್​ನ (ಐಸಿಎಆರ್) ಬಜೆಟ್ ಅನ್ನು 9,500 ಕೋಟಿ ರೂನಿಂದ 20,000 ಕೋಟಿ ರೂಗೆ ಹೆಚ್ಚಿಸಬೇಕು.
  • ಎಲ್ಲಾ ಕೃಷಿ ಸಂಬಂಧಿತ ಸಬ್ಸಿಡಿಗಳನ್ನು ಏಕೀಕೃತಗೊಳಿಸಿ ಹಣವನ್ನು ನೇರವಾಗಿ ವರ್ಗಾವಣೆ ಮಾಡಬೇಕು.
  • 2018ರಿಂದಲೂ ಹೆಚ್ಚಾಗದ ಯೂರಿಯಾ ಬೆಲೆಯನ್ನು ಈಗ ಏರಿಕೆ ಮಾಡಬೇಕು.
  • ಜೈವಿಕ ರಸಗೊಬ್ಬರಗಳಿಗೆ ಸಬ್ಸಿಡಿ ಕೊಟ್ಟು ಉತ್ತೇಜನ ನೀಡಬೇಕು.
  • ಎಂಎಸ್​ಪಿ ಕಮಿಟಿಯನ್ನು ಸಮಾಪ್ತಿಗೊಳಿಸಿ; ಹೊಸ ಕೃಷಿ ನೀತಿ ಜಾರಿಗೆ ತನ್ನಿ
  • ಕೇಂದ್ರ ಪ್ರಾಯೋಜಿತ ಕೃಷಿ ಯೋಜನೆಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಅನುಪಾತವನ್ನು ಈಗಿರುವ 60:30ರಿಂದ 90:10ಕ್ಕೆ ಬದಲಿಸಬೇಕು. ಐದು ವರ್ಷ ಅವಧಿಯವರೆಗೆ ಶೇ. 90ರಷ್ಟು ವೆಚ್ಚವನ್ನು ಸರ್ಕಾರ ಭರಿಸಬೇಕು.
  • ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (ಎಪಿಇಡಿಎ) ಹಿಂದಿನ ಬಜೆಟ್​ನಲ್ಲಿ 80 ಕೋಟಿ ರೂ ನೀಡಲಾಗಿತ್ತು. ಅದನ್ನು 800 ಕೋಟಿ ರೂಗೆ ಹೆಚ್ಚಿಸಬೇಕು. ಇದರಿಂದ ಕೃಷಿ ರಫ್ತು ಹೆಚ್ಚಲು ಸಾಧ್ಯವಾಗುತ್ತದೆ.
  • ರಾಷ್ಟ್ರೀಯ ಆಡು ಮತ್ತು ಕುರಿ ಯೋಜನೆ ಆರಂಭಿಸಬೇಕು.
  • ಜಿಲ್ಲಾ ರಫ್ತು ಕೇಂದ್ರಗಳನ್ನು ಸ್ಥಾಪಿಸಬೇಕು.

ಇದನ್ನೂ ಓದಿ: ಬಜೆಟ್​ಗೆ ಮುಂಚೆ ಪ್ರಮುಖ ಆರ್ಥಿಕ ತಜ್ಞರ ಜೊತೆ ನಿರ್ಮಲಾ ಸೀತಾರಾಮನ್ ಸಭೆ

ಕೃಷಿ ಕ್ಷೇತ್ರದ ತಜ್ಞರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ನೀಡಿದ ವಿವಿಧ ಸಲಹೆ ಮತ್ತು ಬೇಡಿಕೆಗಳಲ್ಲಿ ಈ ಮೇಲಿನವು ಕೆಲವು. ಎಲ್ಲವನ್ನೂ ಆಲಿಸಿಕೊಂಡಿರುವ ನಿರ್ಮಲಾ ಸೀತಾರಾಮನ್ ಹಾಗೂ ಹಣಕಾಸು ಸಚಿವಾಲಯದ ಅಧಿಕಾರಿಗಳು ಅಂತಿಮವಾಗಿ ಯಾವೆಲ್ಲಾ ಅಂಶಗಳನ್ನು ಬಜೆಟ್​ನಲ್ಲಿ ಅಡಕಗೊಳಿಸುತ್ತಾರೆ ಕಾದು ನೋಡಬೇಕು. ಜುಲೈ 22ಕ್ಕೆ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಮಂಡನೆ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ