AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget Positives: ಕೇಂದ್ರ ಬಜೆಟ್​ನಲ್ಲಿ ಯಾರಿಗೆ ಮಂದಹಾಸ, ಯಾರಿಗೆ ನಿರಾಸೆ, ಇಲ್ಲಿದೆ ಡೀಟೇಲ್ಸ್

Nirmala Sitharaman Interim Budget: ನಿರ್ಮಲಾ ಸೀತಾರಾಮನ್ ಅವರ ಸತತ ಆರನೆ ಬಜೆಟ್ ಕೇವಲ 58 ನಿಮಿಷಕ್ಕೆ ಮುಕ್ತಾಯಗೊಂಡಿದೆ. ಈ ಚುಟುಕು ಬಜೆಟ್​ನಲ್ಲಿ ದೊಡ್ಡ ಘೋಷಣೆಗಳೇನೂ ಇಲ್ಲ. ಕೆಲವಿಷ್ಟು ಕ್ಷೇತ್ರಗಳಿಗೆ ಉತ್ತೇಜನ ಸಿಕ್ಕಿದೆ. ಕೆಲ ವಲಯಗಳು ನಿರಾಸೆ ವ್ಯಕ್ತಪಡಿಸಿವೆ. ಕೃಷಿ, ಪ್ರವಾಸೋದ್ಯಮ ಮೊದಲಾದ ಕ್ಷೇತ್ರಗಳಿಗೆ ಒಂದಷ್ಟು ಹೆಚ್ಚಿನ ಒತ್ತು ಸಿಕ್ಕಿದೆ.

Budget Positives: ಕೇಂದ್ರ ಬಜೆಟ್​ನಲ್ಲಿ ಯಾರಿಗೆ ಮಂದಹಾಸ, ಯಾರಿಗೆ ನಿರಾಸೆ, ಇಲ್ಲಿದೆ ಡೀಟೇಲ್ಸ್
ಬಜೆಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 01, 2024 | 5:33 PM

Share

ನವದೆಹಲಿ, ಫೆಬ್ರುವರಿ 1: ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರದ ಕೊನೆಯ ಬಜೆಟ್ (Interim budget 2024) ಬಹಳ ಚುಟುಕಾಗಿದೆ. ದೊಡ್ಡ ಮಟ್ಟದಲ್ಲಿ ಯಾವ ವ್ಯತ್ಯಯವೂ ಆಗಿಲ್ಲ. ಹಿಂದಿನ ಸಾಧನೆ, ಮುಂದಿನ ಗುರಿಗಳನ್ನು ತೋರ್ಪಡಿಸಿದ್ದೇ ಹೆಚ್ಚು. ಕೋವಿಡ್ ಬಳಿಕ ಆರ್ಥಿಕತೆ ಗರಿಗೆದರುತ್ತಿರುವುದಿರಂದ ಬಹಳಷ್ಟು ಉದ್ದಿಮೆಗಳು ಈ ಮಧ್ಯಂತರ ಬಜೆಟ್​ನಿಂದಲೂ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದವು. ಕೆಲ ವಲಯಗಳಿಗೆ ನಿರಾಸೆಯಾಗಿದೆ. ಇನ್ನೂ ಕೆಲ ಕ್ಷೇತ್ರಗಳಿಗೆ ಸಮಾಧಾನ ತಂದಿರುವುದು ಹೌದು.

ಮಧ್ಯಂತರ ಬಜೆಟ್​ನಿಂದ ಯಾರಿಗೆಲ್ಲ ಖುಷಿಯಾಗಿರಬಹುದು

ಬಜೆಟ್​ನಿಂದ ಕೃಷಿ ವಲಯಕ್ಕೆ ಉತ್ತೇಜನ

ರೈತರಿಗೆ ದೂರಗಾಮಿಯಾಗಿ ಲಾಭ ತರುವಂತಹ ಕೆಲ ಯೋಜನೆಗಳಿಗೆ ಸರ್ಕಾರ ಗಮನ ಹರಿಸಿದೆ. ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ ಆಧುನಿಕ ಸಂಗ್ರಹಾರ ನಿರ್ಮಾಣ ಮಾಡುವುದು, ಸರಬರಾಜು ಸರಪಳಿ ವ್ಯವಸ್ಥೆ ಗಟ್ಟಿಗೊಳಿಸುವುದು ಇತ್ಯಾದಿ ಯೋಜನೆಗಳಿಗೆ ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆಗಳನ್ನು ಬಳಸಲು ಸರ್ಕಾರ ಚಿಂತಿಸಿದೆ.

ಹಾಲು ಉತ್ಪನ್ನ, ಮೀನುಗಾರಿಕೆ ಇತ್ಯಾದಿ ಕ್ಷೇತ್ರಗಳನ್ನು ಇನ್ನಷ್ಟು ಗಟ್ಟಿಗೊಳಿಸಲು ಯೋಜನೆ ಹಾಕಲಾಗುತ್ತಿದೆ.

ಇದನ್ನೂ ಓದಿ: ಮಧ್ಯಂತರ ಬಜೆಟ್: ಜಿಡಿಪಿ, ಎಫ್​ಡಿಐಗೆ ಹೊಸ ವ್ಯಾಖ್ಯಾನ ಕೊಟ್ಟ ನಿರ್ಮಲಾ ಸೀತಾರಾಮನ್

ಮಧ್ಯಮ ವರ್ಗದವರಿಗೆ ಬಜೆಟ್​ನಿಂದ ಒಂದಿಷ್ಟು ಖುಷಿ

ಸರ್ವರಿಗೂ ವಸತಿ ಕೊಡುವ ಉದ್ದೇಶದಿಂದ ಬಾಡಿಗೆ ಮನೆ, ಸ್ಲಂ ಮತ್ತು ಅನಧಿಕೃತ ಕಾಲೊನಿಗಳಲ್ಲಿ ಇರುವ ಮಧ್ಯಮ ವರ್ಗದ ಜನರಿಗೆ ತಮ್ಮದೇ ಸ್ವಂತ ಮನೆ ಹೊಂದಲು ಹಣಕಾಸು ನೆರವು ನೀಡುವುದು ಆರ್ಥಿಕ ಪ್ರಗತಿಯ ಸಂಕೇತವಾಗಿದೆ. ಇದು ಮುಂದುವರಿದ ದೇಶವಾಗುತ್ತಿರುವ ಲಕ್ಷಣವಾಗಿದೆ ಎಂದು ಕೆಪಿಎಂಜಿ ಸಂಸ್ಥೆಯ ಮುಖ್ಯಸ್ಥ ನೀರಜ್ ಬನ್ಸಾಲ್ ಪ್ರತಿಕ್ರಿಯಿಸಿದ್ದಾರೆ.

ಪ್ರವಾಸೋದ್ಯಮಕ್ಕೆ ಉತ್ತೇಜನ

ಲಕ್ಷದ್ವೀಪ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರವಾಸೀ ಕೇಂದ್ರಗಳನ್ನು ಅಭಿವೃದ್ದಿಪಡಿಸಿ, ಜಾಗತಿಕ ಮಟ್ಟದಲ್ಲಿ ಅದನ್ನು ಪ್ರಚುರಪಡಿಸಲು ಸರ್ಕಾರ ಆಸಕ್ತವಾಗಿದೆ. ಈ ನಿಟ್ಟಿನಲ್ಲಿ ರಾಜ್ಯಗಳಿಗೆ ಬಡ್ಡಿರಹಿತ ಸಾಲ ಕೊಡುವ ಆಲೋಚನೆಯಲ್ಲಿ ಸರ್ಕಾರ ಇದೆ.

ಇದನ್ನೂ ಓದಿ: ಇದು ವಿನಾಶಕಾರಿ ಬಜೆಟ್​ ಎಂದ ಸಿಎಂ ಸಿದ್ದರಾಮಯ್ಯ

ಮರುಬಳಕೆ ಇಂಧನಕ್ಕೆ ಬಜೆಟ್ ಉತ್ತೇಜನ

ವಾಯುಶಕ್ತಿ ಬಳಕೆಯಿಂದ ಆರಂಭದಲ್ಲಿ 1 ಗೀಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಗೆ ಸರ್ಕಾರ ಧನಸಹಾಯ ಘೋಷಿಸಿದೆ. ಇದು ಈ ಉದ್ಯಮಕ್ಕೆ ತುಸು ಉತ್ತೇಜನ ಕೊಟ್ಟಂತಾಗಿದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:27 pm, Thu, 1 February 24