Twitter: ಉದ್ಯೋಗ ಕಡಿತ ಆಯ್ತು, ಇದೀಗ ಕೆಲವರನ್ನು ಟ್ವಿಟರ್​ಗೆ ಮತ್ತೆ ಬನ್ನಿ ಎನ್ನುತ್ತಿರುವ ಎಲಾನ್ ಮಸ್ಕ್!

ವಜಾಗೊಂಡ ಕೆಲವು ಸಿಬ್ಬಂದಿಯನ್ನು ಕಂಪನಿಗೆ ಮತ್ತೆ ಕೆಲಸಕ್ಕೆ ಬನ್ನಿ ಎಂದು ಟ್ವಿಟರ್ ಆಹ್ವಾನಿಸಿರುವುದಾಗಿ ವರದಿಯಾಗಿದೆ. ಯಾಕಾಗಿ ಟ್ವಿಟರ್ ಈ ನಿರ್ಧಾರ ಕೈಗೊಂಡಿತು? ಇಲ್ಲಿದೆ ಕಾರಣ

Twitter: ಉದ್ಯೋಗ ಕಡಿತ ಆಯ್ತು, ಇದೀಗ ಕೆಲವರನ್ನು ಟ್ವಿಟರ್​ಗೆ ಮತ್ತೆ ಬನ್ನಿ ಎನ್ನುತ್ತಿರುವ ಎಲಾನ್ ಮಸ್ಕ್!
ಟ್ವಿಟರ್
Edited By:

Updated on: Nov 07, 2022 | 11:29 AM

ನವದೆಹಲಿ: ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್(Twitter) ಅನ್ನು ಉದ್ಯಮಿ ಎಲಾನ್ ಮಸ್ಕ್ (Elon Musk) ಖರೀದಿಸಿದ ಬೆನ್ನಲ್ಲೇ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿರುವುದು ಹಳೆಯ ವಿಚಾರ. ಇದೀಗ ವಜಾಗೊಂಡ ಕೆಲವು ಸಿಬ್ಬಂದಿಯನ್ನು ಕಂಪನಿಗೆ ಮತ್ತೆ ಕೆಲಸಕ್ಕೆ ಬನ್ನಿ ಎಂದು ಆಹ್ವಾನಿಸಿದ್ದಾರಂತೆ ಮಸ್ಕ್! 44 ಶತಕೋಟಿ ಡಾಲರ್​ ಮೊತ್ತಕ್ಕೆ ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು ಖರೀದಿಸಿದ ಬೆನ್ನಲ್ಲೇ ಕಂಪನಿಯ ಅನೇಕ ಉದ್ಯೋಗಿಗಳು ಉದ್ಯೋಗ ಕಡಿತದ ಭೀತಿ ಎದುರಿಸಿದ್ದರು. ಕೆಲವೇ ದಿನಗಳಲ್ಲಿ ಅದು ನಿಜವೂ ಅಯ್ತು. ಇದೀಗ ಮರಳಿ ಕೆಲಸಕ್ಕೆ ಬರುವಂತೆ ಕೆಲವು ಉದ್ಯೋಗಿಗಳಿಗೆ ಕಂಪನಿಯಿಂದ ಸಂದೇಶ ಬಂದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಟ್ವಿಟರ್​ ನಂತರ ಫೇಸ್​ಬುಕ್​ನಿಂದಲೂ ಉದ್ಯೋಗಿಗಳ ಕೆಲಸ ಕಸಿಯಲು ಸಿದ್ಧತೆ: ದೊಡ್ಡಮಟ್ಟದಲ್ಲಿ ಸಿಬ್ಬಂದಿ ವಜಾ ಪಟ್ಟಿ ಸಿದ್ಧಪಡಿಸಿದ ಮೆಟಾ

‘ಅಚಾತುರ್ಯದಿಂದಾಗಿ ವಜಾಗೊಳಿಸಲಾಗಿದೆ, ವಾಪಸ್ ಬನ್ನಿ’ ಎಂದು ಕೆಲವು ಮಂದಿ ಸಿಬ್ಬಂದಿಗೆ ಸಂದೇಶ ಕಳುಹಿಸಲಾಗಿದೆ. ಇನ್ನು ಕೆಲವು ಉದ್ಯೋಗಿಗಳ ಅನುಭವ ಮತ್ತು ಕೌಶಲ್ಯ ಮಸ್ಕ್ ಅವರ ಭವಿಷ್ಯದ ದೃಷ್ಟಿಕೋನ ಹಾಗೂ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಗತ್ಯವಿದೆ ಎಂದು ಆಡಳಿತ ಭಾವಿಸಿದೆ. ಈ ಕಾರಣಕ್ಕೆ ವಾಪಸ್ ಕರೆಸಿಕೊಳ್ಳಲಾಗುತ್ತಿದೆ ಎಂದು ಸದ್ಯದ ಬೆಳವಣಿಗೆಗೆ ಸಂಬಂಧಿಸಿ ಮಾಹಿತಿಯುಳ್ಳ ಉನ್ನತ ಮೂಲಗಳು ತಿಳಿಸಿವೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.

ಕಳೆದ ವಾರವಷ್ಟೇ ಸಿಬ್ಬಂದಿ ವಜಾಗೊಳಿಸಿದ್ದ ಟ್ವಿಟರ್

ಕಳೆದ ವಾರ ಸುಮಾರು 3,700 ಮಂದಿಯನ್ನು ಟ್ವಿಟರ್ ಉದ್ಯೋಗದಿಂದ ವಜಾಗೊಳಿಸಿತ್ತು. ‘ಟ್ವಿಟರ್​ ಒಂದು ದಿನಕ್ಕೆ ಅನುಭವಿಸುತ್ತಿರುವ ನಷ್ಟದ ಮೌಲ್ಯ 40 ಲಕ್ಷ ಡಾಲರ್. ಇಂಥ ಪರಿಸ್ಥಿತಿಯಲ್ಲಿ ನೌಕರರನ್ನು ಮನೆಗೆ ಕಳಿಸುವುದು ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲ’ ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದರು. ಕಂಪನಿಯ ಎಲ್ಲ ಉದ್ಯೋಗಿಗಳಿಗೆ ಅವರ ಸ್ಥಿತಿಗತಿ ಕುರಿತು ಸಾಮೂಹಿಕ ಇಮೇಲ್ ಕಳಿಸಿದ ಕೇವಲ 24 ಗಂಟೆಗಳಲ್ಲಿ ಟ್ವಿಟರ್ ಮಾಲೀಕ ಮಸ್ಕ್ ನಷ್ಟದ ವಿಚಾರ ಮುಂದಿಟ್ಟು ಇಂಥದ್ದೊಂದು ಇಮೇಲ್ ಕಳಿಸಿದ್ದರು. ಲೇಆಫ್​ಗಳಿಗೂ ಮುನ್ನ ಟ್ವಿಟರ್​ ವಿಶ್ವದಾದ್ಯಂತ ಇರುವ ತನ್ನ ಕಚೇರಿಗಳನ್ನು ಮುಚ್ಚಿತ್ತು. ಭಾರತದಲ್ಲಿಯೂ ಕಳೆದ ವಾರ ಟ್ವಿಟರ್​ನ ಅರ್ಧದಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು.

ಮಸ್ಕ್ ಕಾರ್ಯಾಭಾರದೊಂದಿಗೇ ಶುರುವಾಗಿದ್ದ ವಜಾ ಪ್ರಕ್ರಿಯೆ

ಮಸ್ಕ್ ಅವರು ಟ್ವಿಟರ್​ ಮಾಲೀಕತ್ವ ವಹಿಸಿದ ಬೆನ್ನಲ್ಲೇ ಉನ್ನತ ಉದ್ಯೋಗಿಗಳ ವಜಾ ಆರಂಭವಾಗಿತ್ತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪರಾಗ್ ಅಗರ್​ವಾಲ್​, ನೀತಿ ನಿರೂಪಣೆ-ವಿಶ್ವಾಸಾರ್ಹತೆ ಮತ್ತು ಸುರಕ್ಷಾ ವಿಭಾಗದ ಮುಖ್ಯಸ್ಥರಾದ ವಿಜಯಾ ಗಡ್ಡೆ, ಮುಖ್ಯ ಹಣಕಾಸು ಅಧಿಕಾರಿ (ಸಿಎಫ್​ಪ) ನೆಡ್ ಸೆಗಲ್ ಅವರನ್ನು ಮೊದಲಿಗೆ ವಜಾಗೊಳಿಸಲಾಗಿತ್ತು. ನಂತರ ಇತರ ಹಂತದ ಸಿಬ್ಬಂದಿಗಳ ವಜಾ ಆರಂಭಗೊಂಡಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us