New Rules: ವಿಮಾನ ಟಿಕೆಟ್ ರದ್ದಾದರೆ ಬೇಡ ಚಿಂತೆ; ಸಿಗಲಿದೆ ಶೇ 75ರಷ್ಟು ಹಣ, ಜತೆಗೆ ಪ್ರಯಾಣ

ಟಿಕೆಟ್ ಕಾಯ್ದಿರಿಸಿದ ದರ್ಜೆಯ ಪ್ರಯಾಣಕ್ಕೆ ಅವಕಾಶ ಸಿಗದೇ ಇರುವ ಬಗ್ಗೆ ಮತ್ತು ವಿಮಾನಯಾನ ಸಂಸ್ಥೆಗಳೇ ಟಿಕೆಟ್​ ಅನ್ನು ಡೌನ್​ಗ್ರೇಡ್ (ಕಾಯ್ದಿರಿಸಿದ ದರ್ಜೆಗಿಂತ ಕೆಳಗಿನ ದರ್ಜೆಯ ಪ್ರಯಾಣಕ್ಕೆ ಅವಕಾಶ ನೀಡುವುದು) ಮಾಡುತ್ತಿರುವ ಬಗ್ಗೆ ಪ್ರಯಾಣಿಕರಿಂದ ಅನೇಕ ದೂರುಗಳು ಬಂದಿದ್ದವು. ಹೀಗಾಗಿ ನಿಯಮದಲ್ಲಿ ಪರಿಷ್ಕರಣೆ ಮಾಡಲಾಗಿದೆ ಎಂದು ಡಿಜಿಸಿಎ ತಿಳಿಸಿದೆ.

New Rules: ವಿಮಾನ ಟಿಕೆಟ್ ರದ್ದಾದರೆ ಬೇಡ ಚಿಂತೆ; ಸಿಗಲಿದೆ ಶೇ 75ರಷ್ಟು ಹಣ, ಜತೆಗೆ ಪ್ರಯಾಣ
ಸಾಂದರ್ಭಿಕ ಚಿತ್ರ

Updated on: Jan 26, 2023 | 3:34 PM

ನವದೆಹಲಿ: ವಿವಿಧ ಕಾರಣಗಳಿಂದ ವಿಮಾನ ಟಿಕೆಟ್ (Flight Ticket) ರದ್ದಾರೆ ಅಥವಾ ಕಾಯ್ದಿರಿಸಿದ ದರ್ಜೆಯಲ್ಲೇ ಪ್ರಯಾಣಿಸಲು ಅವಕಾಶ ದೊರೆಯದಿದ್ದರೆ ಇನ್ನು ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಶೇ 75ರಷ್ಟು ಹಣ ವಾಪಸ್ ನೀಡಬೇಕೆಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಸೂಚಿಸಿದೆ. ಈ ವಿಚಾರವಾಗಿ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದ್ದು, ಪರಿಷ್ಕೃತ ನಿಯಮ ಫೆಬ್ರವರಿ 15ರಿಂದ ಅಸ್ತಿತ್ವಕ್ಕೆ ಬರಲಿದೆ. ಈ ನಿಯಮ ದೇಶೀಯ ವಿಮಾನಯಾನಕ್ಕೆ ಅನ್ವಯವಾಗಲಿದೆ. ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ಟಿಕೆಟ್ ದರ ರದ್ದಾದರೆ ಅಥವಾ ದರ್ಜೆ ಬದಲಾದರೆ ಶೇ 30ರಿಂದ 75ರ ವರೆಗೆ ರಿಫಂಡ್ ಆಗಲಿದೆ. ಆದರೆ, ಇದು ಟಿಕೆಟ್ ವೆಚ್ಚ, ತೆರಿಗೆ, ಪ್ರಯಾಣದ ದೂರ ಇತ್ಯಾದಿ ಅಂಶಗಳಿಗೆ ಅನುಗುಣವಾಗಿ ವ್ಯತ್ಯಾಸವಾಗಲಿದೆ. ಪರಿಷ್ಕೃತ ನಿಯಮದ ಬಗ್ಗೆ ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಟಿಕೆಟ್ ಕಾಯ್ದಿರಿಸಿದ ದರ್ಜೆಯ ಪ್ರಯಾಣಕ್ಕೆ ಅವಕಾಶ ಸಿಗದೇ ಇರುವ ಬಗ್ಗೆ ಮತ್ತು ವಿಮಾನಯಾನ ಸಂಸ್ಥೆಗಳೇ ಟಿಕೆಟ್​ ಅನ್ನು ಡೌನ್​ಗ್ರೇಡ್ (ಕಾಯ್ದಿರಿಸಿದ ದರ್ಜೆಗಿಂತ ಕೆಳಗಿನ ದರ್ಜೆಯ ಪ್ರಯಾಣಕ್ಕೆ ಅವಕಾಶ ನೀಡುವುದು) ಮಾಡುತ್ತಿರುವ ಬಗ್ಗೆ ಪ್ರಯಾಣಿಕರಿಂದ ಅನೇಕ ದೂರುಗಳು ಬಂದಿದ್ದವು. ಹೀಗಾಗಿ ನಿಯಮದಲ್ಲಿ ಪರಿಷ್ಕರಣೆ ಮಾಡಲಾಗಿದೆ ಎಂದು ಡಿಜಿಸಿಎ ತಿಳಿಸಿದೆ.

ಇದನ್ನೂ ಓದಿ: ದೇಶೀಯ ವಿಮಾನ ಪ್ರಯಾಣ ಶೇ 47ರಷ್ಟು ಹೆಚ್ಚಳ

ಟಿಕೆಟ್​ ಡೌನ್​ಗ್ರೇಡ್ ಆದ ಸಂದರ್ಭಗಳಲ್ಲಿ ವಿಮಾನಯಾನ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ರಿಫಂಡ್ ಮಾಡುವ ಬಗ್ಗೆ ಡಿಜಿಸಿಎ 2022ರ ಡಿಸೆಂಬರ್​ನಲ್ಲಿ ಪ್ರಸ್ತಾಪಿಸಿತ್ತು. ಜತೆಗೆ, ಸಂತ್ರಸ್ತ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವಂತೆಯೂ ಪ್ರಸ್ತಾಪ ಮುಂದಿಟ್ಟಿತ್ತು. ನಂತರ ಆ ಪ್ರಸ್ತಾವಗಳಲ್ಲಿ ತಿದ್ದುಪಡಿ ಮಾಡಿ ಶೇ 75ರ ರಿಫಂಡ್ ಮತ್ತು ಅದೇ ಟಿಕೆಟ್​​ನಲ್ಲಿ ಪ್ರಯಾಣದ ಅವಕಾಶ ಕಲ್ಪಿಸಿ ನಿಯಮ ರೂಪಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತಮ್ಮ ಇಚ್ಛೆಗೆ ವಿರುದ್ಧವಾಗಿ ಟಿಕೆಟ್ ಡೌನ್​ಗ್ರೇಡ್ ಆಗಿರುವ ಪ್ರಯಾಣಿಕರಿಗೆ ಹೊಸ ನಿಯಮದಿಂದ ಅನುಕೂಲವಾಗಿದೆ. ತಾವು ಕಾಯ್ದಿರಿಸಿದ್ದಕ್ಕಿಂತ ಕೆಳಗಿನ ದರ್ಜೆಯ ಪ್ರಯಾಣಕ್ಕಾಗಿ ಅವರಿಗೆ ರಿಫಂಡ್ ದೊರೆಯಲಿದೆ ಎಂದು ಅವರು ಹೇಳಿದ್ದಾರೆ. ವಿಮಾನ ಪ್ರಯಾಣಿಕರ ಹಕ್ಕುಗಳನ್ನು ಇನ್ನಷ್ಟು ಬಲಪಡಿಸಲು ಹಾಗೂ ಟಿಕೆಟ್​ ಡೌನ್​​ಗ್ರೇಡಿಂಗ್​ನಿಂದ ಅವರಿಗಾಗುವ ತೊಂದರೆಯನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us