ಪ್ರಧಾನಿ ಮೋದಿಯ ದೃಷ್ಟಿ ಮತ್ತು ನಿಲುವು ಕಂಡು ಅಚ್ಚರಿಗೊಂಡ ಎಐ ಸ್ಟಾರ್ಟಪ್​ಗಳ ಮುಖ್ಯಸ್ಥರು

PM Modi's AI Vision: ಪ್ರಧಾನಿ ಮೋದಿ ದೆಹಲಿಯಲ್ಲಿ AI ಸ್ಟಾರ್ಟಪ್‌ಗಳೊಂದಿಗೆ ಸಂವಾದ ನಡೆಸಿದರು. ಫೆಬ್ರವರಿಯಲ್ಲಿ ನಡೆಯಲಿರುವ ಇಂಡಿಯಾ AI ಇಂಪ್ಯಾಕ್ಟ್ ಸಮಿಟ್ ಹಿನ್ನೆಲೆಯಲ್ಲಿ ಈ ಸಭೆ ಆಯೋಜಿಸಲಾಗಿತ್ತು. ಭಾರತವನ್ನು ಜಾಗತಿಕ AI ನಾಯಕನನ್ನಾಗಿ ಮಾಡುವ ಪ್ರಧಾನಿಯವರ ದೃಷ್ಟಿಕೋನ, ವಿಶೇಷವಾಗಿ ಫೌಂಡೇಶನ್ ಮಾಡೆಲ್‌ಗಳ ಅಭಿವೃದ್ಧಿ, ಸ್ಟಾರ್ಟಪ್ ಮುಖ್ಯಸ್ಥರನ್ನು ಪ್ರೇರೇಪಿಸಿತು. 'ಭಾರತಕ್ಕೆ ಅನನ್ಯವಾದ ಪರಿಹಾರಗಳನ್ನು ನಿರ್ಮಿಸಬೇಕು' ಎಂಬ ಸಂದೇಶ ಸಭೆಯ ಪ್ರಮುಖಾಂಶವಾಗಿತ್ತು.

ಪ್ರಧಾನಿ ಮೋದಿಯ ದೃಷ್ಟಿ ಮತ್ತು ನಿಲುವು ಕಂಡು ಅಚ್ಚರಿಗೊಂಡ ಎಐ ಸ್ಟಾರ್ಟಪ್​ಗಳ ಮುಖ್ಯಸ್ಥರು
ಎಐ ಸ್ಟಾರ್ಟಪ್​ಗಳ ಮುಖಂಡರೊಂದಿಗೆ ಪ್ರಧಾನಿ ಸಂವಾದ

Updated on: Jan 09, 2026 | 8:23 PM

ನವದೆಹಲಿ, ಜನವರಿ 9: ಪ್ರಧಾನಿ ನರೇಂದ್ರ ಮೋದಿ (Narendra Modi) ನಿವಾಸದಲ್ಲಿ ನಡೆದ ಎಐ ಸ್ಟಾರ್ಟಪ್​ಗಳ ಸಭೆ, ಅದರಲ್ಲಿ ಭಾಗವಹಿಸಿದವರೆಲ್ಲರ ಹೃದಯ ಹಗುರಾಗಿಸಿದೆ. ಎಐ ವಿಚಾರದಲ್ಲಿ ಪ್ರಧಾನಿ ಹೊಂದಿರುವ ದೃಷ್ಟಿಕೋನ, ನಿಲುವು ಏನು ಎಂಬುದು ಭಾರತೀಯ ಸ್ಟಾರ್ಟಪ್​ಗಳ ಮುಖ್ಯಸ್ಥರ ಅರಿವಿಗೆ ಬಂದಿತ್ತು. ಫೆಬ್ರುವರಿಯಲ್ಲಿ ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಪ್ರಧಾನಿಗಳು 12 ಸ್ಟಾರ್ಟಪ್​ಗಳ ಮುಖಂಡರನ್ನು ತಮ್ಮ ನಿವಾಸಕ್ಕೆ ಕರೆಸಿ ವಿಚಾರ ವಿನಿಮಯ ಮಾಡಿದ್ದಾರೆ.

ಪ್ರಧಾನಿಯನ್ನು ಭೇಟಿ ಮಾಡಿರುವ ಎಐ ಸ್ಟಾರ್ಟಪ್​ಗಳು ಇಂಡಿಯಾ ಎಐ ಮಿಷನ್ ಅಡಿಯಲ್ಲಿ ಫೌಂಡೇಶನ್ ಮಾಡಲ್​ಗಳನ್ನು ಅಭಿವೃದ್ಧಿಪಡಿಸಲು ಆಯ್ಕೆಯಾಗಿರುವಂಥವಾಗಿವೆ. ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಡಾ. ಅಶ್ವಿನಿ ವೈಷ್ಣವ್, ರಾಜ್ಯ ಸಚಿವರಾದ ಜಿತಿನ್ ಪ್ರಸಾದ, ಕಾರ್ಯದರ್ಶಿ ಎಸ್ ಕೃಷ್ಣನ್ ಹಾಗೂ ಈ 12 ಸ್ಟಾರ್ಟಪ್​ಗಳ ಮುಖಂಡರು ಪ್ರಧಾನಿಗಳೊಂದಿಗೆ ಮಾತನಾಡಿದ್ದಾರೆ. ಈ ಮಾತುಕತೆ ಸಕಾರಾತ್ಮಕವಾಗಿತ್ತು ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಎಐ ಇಂಪ್ಯಾಕ್ಟ್ ಸಮಿಟ್​ಗೆ ಪೂರ್ವಭಾವಿಯಾಗಿ 12 ಸ್ಟಾರ್ಟಪ್​ಗಳೊಂದಿಗೆ ಪ್ರಧಾನಿ ಮೋದಿ ಸಭೆ

ಪ್ರಧಾನಮಂತ್ರಿಗಳು ತಮ್ಮ ನಿಜಜೀವನದ ಅನುಭವಗಳೊಂದಿಗೆ ಮಾತನಾಡಿದ್ದು ನಮಗೆ ತಾಂತ್ರಿಕ ವಿಷಯಗಳ ಬಗ್ಗೆ ಪ್ರೇರಣೆ ಕೊಟ್ಟಿತು ಎಂದು ಸರ್ವಂ ಎಐ ಸಹ-ಸಂಸ್ಥಾಪಕ ಡಾ. ಪ್ರತ್ಯೂಶ್ ಕುಮಾರ್ ಹೇಳಿದ್ದಾರೆ.

ಪ್ರಧಾನಿಯವರಿಗೆ ತಾನು ಏನು ಹೇಳುತ್ತಿದ್ದೇನೆ ಎನ್ನುವ ಸ್ಪಷ್ಟ ಅರಿವು ಇದೆ. ಭಾರತ ಎಐನಲ್ಲಿ ವಿಶ್ವಗುರು ಆಗಬೇಕಾದರೆ ವಿಶ್ವಕ್ಕೆ ಯಾವುದನ್ನು ಪರಿಹರಿಸಲು ಸಾಧ್ಯವಿಲ್ಲವೋ ಆ ಸಮಸ್ಯೆ ಬಗೆಹರಿಸಬೇಕು ಎನ್ನುತ್ತಾರೆ. ಅವರೊಂದಿಗೆ ಮಾತನಾಡಿದ್ದು ಖುಷಿಯಾಯಿತು ಎಂದು ಟೆಕ್ ಮಹೀಂದ್ರ ಸಿಇಒ ನಿಖಿಲ್ ಮಲ್ಹೋತ್ರಾ ಹರ್ಷ ವ್ಯಕ್ತಪಡಿಸಿದ್ದಾರೆ.

ಎಐ ಸ್ಟಾರ್ಟಪ್​ಗಳ ಮುಖ್ಯಸ್ಥರ ಅನುಭವ

ಪ್ರಧಾನಿಯವರ ಅನುಭವವು ನಮ್ಮ ಚಿಂತನೆಯನ್ನು ಹರಿತಗೊಳಿಸಲು ಸಹಾಯವಾಯಿತು. ಭಾರತಕ್ಕೆ ಏನು ಬೇಕು ಎಂಬುದನ್ನು ಅವರಿಗಿಂತ ತಿಳಿದವರು ಯಾರೂ ಇಲ್ಲ. ನಾವು ಪಾಶ್ಚಿಮಾತ್ಯರನ್ನು ನಕಲು ಮಾಡುವುದು ಬೇಡ. ನಮಗೆ ಏನು ಬೇಕೋ, ಏನು ಅಗತ್ಯವೋ ಅದನ್ನು ನಿರ್ಮಿಸಬೇಕು ಎಂಬುದು ಅವರ ನಿಲುವು ಎಂದು ನ್ಯೂರೋಡಿಎಕ್ಸ್ ಸಿಇಒ ಡಾ. ಸಿದ್ಧಾರ್ಥ್ ಪನ್ವರ್ ವಿವರಿಸಿದ್ದಾರೆ.

ಪ್ರಧಾನಿಗಳ ವಿಶನ್ ಗಮನಿಸಿ ಅಮೆರಿಕದಿಂದ ಭಾರತಕ್ಕೆ ಬಂದಿದ್ದೇನೆ. ಅಮೆರಿಕದಲ್ಲಿ ಅವಕಾಶಗಳು ಸಿಗುತ್ತವೆ. ಆದರೆ, ಭಾರತದಲ್ಲೂ ಮಾಡಲ್ ನಿರ್ಮಿಸಲು ಫಂಡಿಂಗ್ ಸಿಗುತ್ತದೆ ಎನ್ನುವುದು ಉತ್ತೇಜನಕಾರಿ ಸಂಗತಿ ಎಂದು ಗ್ಯಾನ್ ಎಐನ ರಿಸರ್ಚ್ ಎಂಜಿನಿಯರ್ ಆಗಿರುವ ಪಾರ್ಥಸಾರಥಿ ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಕಾಫಿಗೆ ಯೂರೋಪ್​ನಲ್ಲಿ ಬಲು ಬೇಡಿಕೆ; 2025ರಲ್ಲಿ 2 ಬಿಲಿಯನ್ ಡಾಲರ್ ಮುಟ್ಟಿದ ಭಾರತದ ಒಟ್ಟಾರೆ ಕಾಫಿ ರಫ್ತು

ಇಂಡಿಯಾ ಎಐ ಮಿಷನ್​ನಲ್ಲಿ ಆಯ್ಕೆಯಾಗಿರುವ 12 ಸ್ಟಾರ್ಟಪ್​ಗಳು ಅವತಾರ್, ಭಾರತ್​ಜೆನ್, ಫ್ರಾಕ್ಟಲ್, ಗ್ಯಾನ್, ಜೆನ್​ಲೂಪ್, ಜ್ಞಾನಿ, ಇಂಟೆಲಿಹೆಲ್ತ್, ಸರ್ವಂ, ಶೋಧ್ ಎಐ, ಸಾಕೆಟ್ ಎಐ, ಟೆಕ್ ಮಹೀಂದ್ರ ಮತ್ತು ಝೆನ್​ಟೀಕ್ ಆಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:20 pm, Fri, 9 January 26

Follow Us