AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Manappuram: ಮಣಪ್ಪುರಂ ಮುಖ್ಯಸ್ಥರ 143 ಕೋಟಿ ಆಸ್ತಿ ಮುಟ್ಟುಗೋಲು; ಕಾಲುಭಾಗದಷ್ಟು ಮಣ್ಣುಪಾಲಾದ ಷೇರುಸಂಪತ್ತು; ಏನು ಕಾರಣ?

ED Freezes Assets Of Manappuram Finance Chief: ಆರ್​ಬಿಐ ಸಮ್ಮತಿ ಇಲ್ಲದೇ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿ, ಆ ಹಣವನ್ನು ಬೇರೆ ಬೇರೆ ಕಡೆ ವರ್ಗಾಯಿಸಿದ ಆರೋಪ ಎದುರಿಸುತ್ತಿರುವ ಮಣಪ್ಪುರಂ ಫೈನಾನ್ಸ್ ಸಂಸ್ಥೆ ಮುಖ್ಯಸ್ಥರಿಗೆ ಸೇರಿದ 143ಕೋಟಿ ರೂ ಮೊತ್ತದ ಆಸ್ತಿಗಳನ್ನು ಇಡಿ ಫ್ರೀಜ್ ಮಾಡಿದೆ.

Manappuram: ಮಣಪ್ಪುರಂ ಮುಖ್ಯಸ್ಥರ 143 ಕೋಟಿ ಆಸ್ತಿ ಮುಟ್ಟುಗೋಲು; ಕಾಲುಭಾಗದಷ್ಟು ಮಣ್ಣುಪಾಲಾದ ಷೇರುಸಂಪತ್ತು; ಏನು ಕಾರಣ?
ಜಾರಿ ನಿರ್ದೇಶನಾಲಯ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 05, 2023 | 10:38 AM

Share

ತಿರುವನಂತಪುರಂ: ಅಕ್ರಮ ಹಣ ವರ್ಗಾವಣೆ (Money Laundering) ಆರೋಪದ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಮಣಪ್ಪುರಂ ಫೈನಾನ್ಸ್ ಸಂಸ್ಥೆಯ (Manappuram Finance Ltd) ಎಂಡಿ ಮತ್ತು ಸಿಇಒ ವಿ.ಪಿ. ನಂದಕುಮಾರ್​ಗೆ ಸೇರಿದ 143 ಕೋಟಿ ರೂ ಮೊತ್ತದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಹೊಂದಿರುವ ಮಣಪ್ಪುರಂ ಫೈನಾನ್ಸ್ ಲಿ ಸಂಸ್ಥೆಯ ಮುಖ್ಯ ಕಚೇರಿ ಇರುವ ಕೇರಳದ ತ್ರಿಶೂರ್​ನಲ್ಲಿ ಮೇ 3ಮತ್ತು 4ರಂದು 6 ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ನಂದಕುಮಾರ್ ಅವರಿಗೆ ಸೇರಿದ ಎಂಟು ಬ್ಯಾಂಕ್ ಖಾತೆಗಳಲ್ಲಿ ಇಟ್ಟಿರುವ ಠೇವಣಿಗಳು, ಷೇರುಪೇಟೆಯಲ್ಲಿನ ಹೂಡಿಕೆ ಮತ್ತು ಮಣಪ್ಪುರಂ ಫೈನಾನ್ಸ್ ಸಂಸ್ಥೆಯಲ್ಲಿ ಅವರ ಪಾಲಿನ ಷೇರುಗಳು, 60 ಸ್ಥಿರಾಸ್ತಿಗಳ ದಾಖಲೆ ಇತ್ಯಾದಿಯನ್ನು ಜಾರಿ ನಿರ್ದೇಶನಾಲಯ ಫ್ರೀಜ್ ಮಾಡಿರುವುದು ತಿಳಿದುಬಂದಿದೆ.

ಮಣಪ್ಪುರಂ ಫೈನಾನ್ಸ್ ಸಂಸ್ಥೆ ವಿರುದ್ಧದ ಆರೋಪವೇನು?

ಆರ್​ಬಿಐನ ಸಮ್ಮತಿ ಇಲ್ಲದೆಯೇ ವಿ.ಪಿ. ನಂದಕುಮಾರ್ ಅವರು ಸಾರ್ವಜನಿಕರಿಂದ ಸುಮಾರು 150 ಕೋಟಿ ರೂ ಹಣ ಸಂಗ್ರಹಿಸಿದ್ದಾರೆ. ನಂದಕುಮಾರ್ ಮಾಲಿಕತ್ವದ ಮಣಪ್ಪುರಂ ಆಗ್ರೋ ಫಾರ್ಮ್ಸ್ ಮೂಲಕ ದೊಡ್ಡ ಪ್ರಮಾಣದಲ್ಲಿ ಹಣ ಕಲೆಹಾಕಲಾಗಿದೆ. ಮಣಪ್ಪುರಂ ಫೈನಾನ್ಸ್​ನ ವಿವಿಧ ಶಾಖಾ ಕಚೇರಿಗಳಲ್ಲಿ ಈ ಕೆಲಸ ಮಾಡಲಾಗಿರುವುದು ತಿಳಿದುಬಂದಿದೆ. ಕಂಪನಿಯ ಸಿಎಫ್​ಒ ಹಾಗೂ ಕೆಲ ಉದ್ಯೋಗಿಗಳು ಅಕ್ರಮವಾಗಿ ಹಣ ಸಂಗ್ರಹಿಸುವ ಕೆಲಸ ಮಾಡಿರುವ ಆರೋಪ ಇದೆ.

ಇದನ್ನೂ ಓದಿHow Scams Work?: ನಕಲಿ ರಿವ್ಯೂ ಬರೆಯಿಸಿ ಹಣವನ್ನೂ ಕೊಟ್ಟು ಖೆಡ್ಡಾ ತೋಡುವ ವಂಚಕರು; ನಿತಿನ್ ಕಾಮತ್ ಬಿಚ್ಚಿಟ್ಟ ಭಯಾನಕ ಕ್ರಿಪ್ಟೋ ವೃತ್ತಾಂತ

ಆರ್​ಬಿಐಗೆ ಈ ಬಗ್ಗೆ ಗೊತ್ತಾಗಿ, 143 ಕೋಟಿ ರೂ ಹಣವನ್ನು ಸಾರ್ವಜನಿಕರಿಗೆ ಮರಳಿಸಬೇಕೆಂದು ಸೂಚಿಸಿತ್ತು. ತಾನು ಹಣವನ್ನು ಹಿಂದಿರುಗಿಸಿರುವುದಾಗಿ ಮಣಪ್ಪುರಂ ಫೈನಾನ್ಸ್ ಸಂಸ್ಥೆ ಸಿಇಒ ವಿ.ಪಿ. ನಂದಕುಮಾರ್ ಉತ್ತರ ನೀಡಿದ್ದರು.

ಇಡಿ ತನಿಖೆ ವೇಳೆ, ಸಾರ್ವಜನಿಕರಿಗೆ ಹಣ ಮರಳಿಸಿರುವ ಬಗ್ಗೆ ಯಾವುದೇ ದಾಖಲಾತಿ ಸಿಕ್ಕಿಲ್ಲ ಎನ್ನಲಾಗಿದೆ. 53 ಕೋಟಿ ರೂ ಹಣವನ್ನು ಕ್ಯಾಷ್ ರೂಪದಲ್ಲಿ ಮರಳಿಸಿರುವುದಾಗಿ ಹೇಳಲಾಗಿತ್ತಾದರೂ ಅದಕ್ಕೂ ಯಾವುದೇ ಪುರಾವೆ ಸಿಕ್ಕಿಲ್ಲ.

ಇದನ್ನೂ ಓದಿExtra Week Off: ಬ್ಯಾಂಕುಗಳಿಗೆ ವಾರದಲ್ಲಿ 2 ದಿನ ರಜೆ; ನಿತ್ಯ 40 ನಿಮಿಷ ಹೆಚ್ಚು ಕೆಲಸ; ಸರ್ಕಾರದಿಂದ ಶೀಘ್ರದಲ್ಲೇ ಅಧಿಸೂಚನೆ?

ಇನ್ನು, ಜಾರಿ ನಿರ್ದೇಶನಾಲಯ ಹೇಳುವ ಪ್ರಕಾರ, ಸಾರ್ವಜನಿಕರಿಂದ ಅಕ್ರಮವಾಗಿ ಸಂಗ್ರಹಿಸಲಾದ ಹಣವನ್ನು ವಿ.ಪಿ. ನಂದಕುಮಾರ್ ಅವರು ತಮ್ಮ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ಸ್ಥಿರಾಸ್ತಿಗಳನ್ನು ಖರೀದಿಸಿದ್ದಾರೆ. ಹಾಗೂ ಮಣಪ್ಪುರಂ ಫೈನಾನ್ಸ್ ಸಂಸ್ಥೆಯ ಷೇರುಗಳ ಮೇಲೆಯೂ ಹೂಡಿಕೆ ಮಾಡಿದ್ದಾರೆನ್ನಲಾಗಿದೆ.

ಜಾರಿ ನಿರ್ದೇಶನಾಲಯ ಮೇ 3 ಮತ್ತು 4ರಂದು ತ್ರಿಶೂರ್​ನಲ್ಲಿರುವ ಮಣಪ್ಪುರಂ ಫೈನಾನ್ಸ್ ಸಂಸ್ಥೆಯ ಮುಖ್ಯ ಕಚೇರಿ, ನಂದಕುಮಾರ್ ಅವರ ಮನೆ ಇತ್ಯಾದಿ 6 ಸ್ಥಳಗಳ ಮೇಲೆ ರೇಡ್ ಮಾಡಿ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ, ಅಂತಿಮವಾಗಿ 143 ಕೋಟಿ ರೂ ಮೊತ್ತದ ಆಸ್ತಿಗಳನ್ನು ಫ್ರೀಜ್ ಮಾಡಿದೆ.

ಮಣಪ್ಪುರಂ ಷೇರು ಸಂಪತ್ತು ಕಾಲುಭಾಗದಷ್ಟು ಮಣ್ಣುಪಾಲು

ಇಡಿ ರೇಡ್ ಆಗುತ್ತಿರುವಂತೆಯೇ ಷೇರು ಮಾರುಕಟ್ಟೆಯಲ್ಲಿ ಮಣಪ್ಪುರಂ ಫೈನಾನ್ಸ್ ಸಂಸ್ಥೆಯ ಷೇರುಗಳು ಕಡಿಮೆ ಬೆಲೆಗೆ ಬಿಕರಿಯಾಗತೊಡಗಿವೆ. ಮೇ 2ರಂದು 130 ರೂ ಇದ್ದ ಷೇರು ಬೆಲೆ ಇದೀಗ 100 ರೂ ಆಸುಪಾಸಿನಲ್ಲಿ ವಹಿವಾಟು ಆಗುತ್ತಿದೆ. ಕಳೆದ ಮೂರ್ನಾಲ್ಕು ದಿನದಲ್ಲಿ 28 ರುಪಾಯಿಗೂ ಹೆಚ್ಚು (ಶೇ. 23) ಕುಸಿತ ಕಂಡಿದೆ ಮಣಪ್ಪುರಂ ಫೈನಾನ್ಸ್ ಷೇರು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More