Onion Price: ಟೊಮೆಟೋ ಆಯಿತು, ಈಗ ಈರುಳ್ಳಿ ಸರದಿ; ಜನಸಾಮಾನ್ಯರಿಗೆ ಕಣ್ಣೀರು ತರಿಸುತ್ತಿದೆ ಬೆಲೆ ಏರಿಕೆ
Price Hike: ಭಾರತದಾದ್ಯಂತ ಟೊಮೆಟೋ ರೀತಿಯಲ್ಲಿ ಅಡುಗೆಗೆ ಸರ್ವೇ ಸಾಮಾನ್ಯವಾಗಿ ಬಳಕೆಯಾಗುವ ಈರುಳ್ಳಿ ಬೆಲೆ ಏರಿದರೆ ಜನಸಾಮಾನ್ಯರಿಗೆ ಕಷ್ಟಕರ ಎನಿಸುವುದು ಸಹಜ. ರೀಟೇಲ್ ಮಳಿಗೆಗಳಲ್ಲಿ ಈರುಳ್ಳಿ ಬೆಲೆ ಕಿಲೋಗೆ 70 ರೂವರೆಗೂ ಮಾರಾಟವಾಗುತ್ತಿದೆ. ಕಳಪೆ ಗುಣಮಟ್ಟದ ಈರುಳ್ಳಿಯೇ ಕಿಲೋಗೆ 50 ರೂ ಬೆಲೆ ಪಡೆದಿದೆ. ಉತ್ತಮ ಗುಣಮಟ್ಟದ ಈರುಳ್ಳಿ 70 ರೂವರೆಗೆ ಸೇಲ್ ಆಗುತ್ತಿದೆ. ಆದರೆ, ಈರುಳ್ಳಿ ಬೆಲೆ ಟೊಮೆಟೋ ರೀತಿ ಗಗನಕ್ಕೇರುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ನವದೆಹಲಿ, ಅಕ್ಟೋಬರ್ 27: ಜುಲೈನಿಂದ ಸೆಪ್ಟೆಂಬರ್ವರೆಗೂ ಟೊಮೆಟೋ ಬೆಲೆ ಸತತವಾಗಿ ಏರಿಕೆಯಾಗಿ 200 ರೂಗೂ ಹೆಚ್ಚು ಬೆಲೆಗೆ ಹೋಗಿದ್ದನ್ನು ನೋಡಿದ್ದೇವೆ. ಇದೀಗ ಈರುಳ್ಳಿಯೂ (Onion Price) ಅದೇ ಹಾದಿ ಹಿಡಿಯುವಂತಿದೆ. ಕಳೆದ ಎರಡು ವಾರದಲ್ಲಿ ಈರುಳ್ಳಿ ಬೆಲೆ ಶೇ. 50ರಷ್ಟು ಏರಿಕೆ ಆಗಿದೆ. ಭಾರತದಾದ್ಯಂತ ಟೊಮೆಟೋ ರೀತಿಯಲ್ಲಿ ಅಡುಗೆಗೆ ಸರ್ವೇ ಸಾಮಾನ್ಯವಾಗಿ ಬಳಕೆಯಾಗುವ ಈರುಳ್ಳಿ ಬೆಲೆ ಏರಿದರೆ ಜನಸಾಮಾನ್ಯರಿಗೆ ಕಷ್ಟಕರ ಎನಿಸುವುದು ಸಹಜ. ದೆಹಲಿ ಎನ್ಸಿಆರ್ ಪ್ರದೇಶದ ರೀಟೇಲ್ ಮಳಿಗೆಗಳಲ್ಲಿ ಈರುಳ್ಳಿ ಬೆಲೆ ಕಿಲೋಗೆ 70 ರೂವರೆಗೂ ಮಾರಾಟವಾಗುತ್ತಿದೆ.
ನ್ಯೂಸ್9 ವರದಿ ಪ್ರಕಾರ, ಕಳಪೆ ಗುಣಮಟ್ಟದ ಈರುಳ್ಳಿಯೇ ಕಿಲೋಗೆ 50 ರೂ ಬೆಲೆ ಪಡೆದಿದೆ. ಉತ್ತಮ ಗುಣಮಟ್ಟದ ಈರುಳ್ಳಿ 70 ರೂವರೆಗೆ ಸೇಲ್ ಆಗುತ್ತಿದೆ. ಆದರೆ, ಈರುಳ್ಳಿ ಬೆಲೆ ಟೊಮೆಟೋ ರೀತಿ ಗಗನಕ್ಕೇರುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಮಾರುಕಟ್ಟೆ ತಜ್ಞರ ಪ್ರಕಾರ ಡಿಸೆಂಬರ್ನಲ್ಲಿ ಹೊಸ ಈರುಳ್ಳಿ ಆವಕ ಬರಲಿದ್ದು, ಬೆಲೆ ಕಡಿಮೆ ಆಗುವ ನಿರೀಕ್ಷೆ ಇದೆ.
ಇದನ್ನೂ ಓದಿ: ಒಂದೇ ವಾರದಲ್ಲಿ 18 ಲಕ್ಷಕೋಟಿ ರೂ ಕಳೆದುಕೊಂಡ ಹೂಡಿಕೆದಾರರು; ಷೇರುಪೇಟೆ ಈ ಪರಿ ಅಲುಗಾಡುತ್ತಿರುವುದೇಕೆ?
ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಈರುಳ್ಳಿ ರಫ್ತಿನ ಮೇಲೆ ಶೇ. 40ರಷ್ಟು ಸುಂಕ ವಿಧಿಸಿತ್ತು. ದೇಶೀಯವಾಗಿ ಈರುಳ್ಳಿ ಸಂಗ್ರಹ ಹೆಚ್ಚು ಇರಲಿ ಎಂಬ ಕಾರಣಕ್ಕೆ ಸರ್ಕಾರ ಈ ಕ್ರಮ ಕೈಗೊಂಡಿತ್ತು. ಆದರೆ, ಇಷ್ಟರಲ್ಲಾಗಲೇ ಹೊಸ ಈರುಳ್ಳಿ ಆವಕ ಬರಬೇಕಿತ್ತು. ಅದರ ಆಗಮನ ವಿಳಂಬವಾಗಿರುವುದರಿಂದ ಈರುಳ್ಳಿ ಅಭಾವ ಸೃಷ್ಟಿಯಾಗಿ ಬೆಲೆ ಏರಿಕೆಗೆ ಕಾರಣವಾಗಿದೆ. ಡಿಸೆಂಬರ್ನಲ್ಲಿ ಹೊಸ ಈರುಳ್ಳಿ ಆಗಮನದಿಂದ ಬೆಲೆ ಕಡಿಮೆ ಆಗಬಹುದು.
ಭಾರತದಲ್ಲಿ ಒಂದು ವರ್ಷದಲ್ಲಿ 30 ಮಿಲಿಯನ್ ಮೆಟ್ರಿಕ್ ಟನ್ಗಳಿಗೂ ಹೆಚ್ಚು ಈರುಳ್ಳಿ ಉತ್ಪಾದನೆ ಆಗುತ್ತದೆ. ಇದರಲ್ಲಿ ಮಹಾರಾಷ್ಟ್ರವೊಂದರಲ್ಲೇ ಶೇ. 30ರಷ್ಟು ಉತ್ಪಾದನೆ ಆಗುತ್ತದೆ. ನಂತರದ ಸ್ಥಾನದಲ್ಲಿ ಕರ್ನಾಟಕ ಮತ್ತು ಗುಜರಾತ್ ಇವೆ. ಈ ಮೂರು ರಾಜ್ಯಗಳಲ್ಲೇ ಶೇ. 60ಕ್ಕಿಂತಲೂ ಹೆಚ್ಚು ಈರುಳ್ಳಿ ಬೆಳೆಯಲಾಗುತ್ತಿದೆ.
ಇದನ್ನೂ ಓದಿ: ಬಾಪ್ ಆಫ್ ಚಾರ್ಟ್: ಷೇರುಮಾರುಕಟ್ಟೆಯ ಕಿಂಗ್ ಮೇಕರ್ ಆಗುತ್ತೇನೆಂದು ಜನರಿಗೆ ಮಂಕುಬೂದಿ ಹಾಕಿರುವ ನಸೀರ್ ಅನ್ಸಾರಿ ಕಥೆ ಕೇಳಿ..!
ಗೋಧಿ, ಅಕ್ಕಿ ಬೆಲೆಗಳೂ ಮೇಲ್ಮುಖ
ಈಗ ಈರುಳ್ಳಿ ಮಾತ್ರವಲ್ಲ, ಅಗತ್ಯ ಆಹಾರ ಪದಾರ್ಥಗಳೆನಿಸಿದ ಗೋಧಿ, ಅಕ್ಕಿ ಇತ್ಯಾದಿಗಳ ಬೆಲೆಯೂ ಹೆಚ್ಚಿದೆ. ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯ ಬೆಲೆ ಹೆಚ್ಚಳ ಮಿತಿಮೀರದಂತೆ ನಿಯಂತ್ರಿಸಲು ಸರ್ಕಾರ ರಫ್ತು ನಿರ್ಬಂಧ ಹಾಕಿದೆ. ಇನ್ನು ಗೋಧಿ ಬೆಲೆ ಎಂಟು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿದೆ. ಸರ್ಕಾರ ತನ್ನ ಬಳಿ ಇರುವ ಗೋಧಿ ದಾಸ್ತಾನನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ವಾರಕ್ಕೊಮ್ಮೆ ಗೋಧಿ ಹರಾಜು ನಡೆಯುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ