
ನವದೆಹಲಿ, ಜುಲೈ 17: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಅಡಿಯಲ್ಲಿ ಸರ್ಕಾರ ಈವರೆಗೆ 19 ಕಂತುಗಳ ಹಣವನ್ನು ರೈತರಿಗೆ (farmer) ನೀಡಿದೆ. ಈಗ 20ನೇ ಕಂತಿನ ಹಣ ಬಿಡುಗಡೆ ಆಗುತ್ತಿದೆ. ಈ ತಿಂಗಳವರೆಗೆ ಯಾವಾಗ ಬೇಕಾದರೂ 20ನೇ ಕಂತಿನ ಹಣವಾದ 2,000 ರೂ ರಿಲೀಸ್ ಆಗಬಹುದು. ವರದಿಯೊಂದರ ಪ್ರಕಾರ ಜುಲೈ 18, ಶುಕ್ರವಾರದಂದು ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ಹಣ ಬಿಡುಗಡೆ ಆಗಬಹುದು.
ಬಿಹಾರದ ಈಸ್ಟ್ ಚಂಪಾರನ್ನ ಮೋತಿಹರಿ ಎಂಬಲ್ಲಿ ನಾಳೆ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಈ ವೇಳೆ ಅವರು 20ನೇ ಕಂತಿನ ಹಣ ಬಿಡುಗಡೆ ಮಾಡಬಹುದು ಎಂದು ಝೀ ನ್ಯೂಸ್ ವರದಿ ಮಾಡಿದೆ.
ಇದನ್ನೂ ಓದಿ: ಪಿಎಂ ಕಿಸಾನ್ 20ನೇ ಕಂತಿನ ಹಣ ಸಿಗಬೇಕೆಂದರೆ ಈ ಕೆಲಸಗಳನ್ನು ಕಡ್ಡಾಯವಾಗಿ ಮಾಡಿರಬೇಕು
2024ರ ಜೂನ್ನಲ್ಲಿ 17ನೇ ಕಂತು, ಅಕ್ಟೋಬರ್ನಲ್ಲಿ 18ನೇ ಕಂತು, ಮತ್ತು 2025ರ ಫೆಬ್ರುವರಿ ತಿಂಗಳಲ್ಲಿ 19ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿತ್ತು. 16ನೇ ಕಂತಿನ ಹಣವನ್ನು ಪ್ರಧಾನಿಗಳು ಬೆಳಗಾವಿ ಸಮಾವೇಶವೊಂದರಲ್ಲಿ ಬಿಡುಗಡೆ ಮಾಡಿದ್ದರು.
ಈವರೆಗೂ 12 ಕೋಟಿಗೂ ಅಧಿಕ ರೈತರು ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿಕೊಂಡಿದ್ದಾರೆ. ಇಕೆವೈಸಿ ಮಾಡಿಸಿಲ್ಲದಿರುವುದು, ಅನರ್ಹತೆ ಇತ್ಯಾದಿ ಕಾರಣಕ್ಕೆ ಫಲಾನುಭವಿ ರೈತರ ಸಂಖ್ಯೆ ಕಡಿಮೆ ಆಗಿದೆ. 19ನೇ ಕಂತಿನ ಹಣವನ್ನು 9.8 ಕೋಟಿ ರೈತರು ಪಡೆದಿದ್ದರು. ಈ ಬಾರಿ 20ನೇ ಕಂತಿನ ಹಣ ಸ್ವೀಕರಿಸುವವರ ಸಂಖ್ಯೆ 10 ಕೋಟಿ ದಾಟಬಹುದು. ಕರ್ನಾಟಕದಲ್ಲಿ 47 ಲಕ್ಷ ರೈತರು ಈ ಸ್ಕೀಮ್ಗೆ ನೊಂದಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕೋಟ್ಯಂತರ ರೈತರ ಭವಿಷ್ಯ ಹೆಚ್ಚಿಸಬಲ್ಲ ಪಿಎಂ ಧನ-ಧಾನ್ಯ ಕೃಷಿ ಯೋಜನೆ; ಏನಿದು ಪಿಎಂಡಿಡಿಕೆವೈ?
ರೈತರ ಕೃಷಿ ಬೇಸಾಯಕ್ಕೆ ಅನುಕೂಲವಾಗಲೆಂದು ಸರ್ಕಾರ ವರ್ಷಕ್ಕೆ 6,000 ರೂ ಧನಸಹಾಯ ನೀಡುತ್ತದೆ. ಈ ಹಣವನ್ನು ವರ್ಷದಲ್ಲಿ ಮೂರು ಕಂತುಗಳಲ್ಲಿ ಕೊಡುತ್ತದೆ. 2019ರಲ್ಲಿ ಶುರುವಾದ ಈ ಸ್ಕೀಮ್ನಲ್ಲಿ ಇಲ್ಲಿಯವರೆಗೆ 19 ಕಂತುಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ