ಸೆಂಟ್ರಲ್ ಬ್ಯಾಂಕ್ ಒಲಿಂಪಿಕ್ಸ್​ನಲ್ಲಿ ಆರ್​ಬಿಐ ಗವರ್ನರ್​ಗೆ ಚಿನ್ನದ ಪದಕ; ಪ್ರಧಾನಿ ಶ್ಲಾಘನೆ; ಶಕ್ತಿಕಾಂತ್ ಹೆಸರಲ್ಲೇ ಇದೆ ಶಕ್ತಿ ಎಂದ ಮಹೀಂದ್ರ

RBI Governor Shaktikanta Das gets A+ rating: ಗ್ಲೋಬಲ್ ಫೈನಾನ್ಸ್ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್ಸ್ 2024 ವರದಿಯು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ಚಿನ್ನದ ಪದಕ ನೀಡಿದೆ. ಹಣದುಬ್ಬರ ಇತ್ಯಾದಿಯನ್ನು ಸೆಂಟ್ರಲ್ ಬ್ಯಾಂಕುಗಳು ಹೇಗೆ ನಿರ್ವಹಣೆ ಮಾಡುತ್ತವೆ ಎನ್ನುವುದರ ಆಧಾರದ ಮೇಲೆ ರೇಟಿಂಗ್ ಕೊಡಲಾಗುತ್ತದೆ. ಆರ್​ಬಿಐ ಸೇರಿದಂತೆ ಮೂರು ದೇಶಗಳ ಸೆಂಟ್ರಲ್ ಬ್ಯಾಂಕುಗಳ ಗವರ್ನರುಗಳಿಗೆ ಗರಿಷ್ಠ ಎ+ ರೇಟಿಂಗ್ ನೀಡಲಾಗಿದೆ.

ಸೆಂಟ್ರಲ್ ಬ್ಯಾಂಕ್ ಒಲಿಂಪಿಕ್ಸ್​ನಲ್ಲಿ ಆರ್​ಬಿಐ ಗವರ್ನರ್​ಗೆ ಚಿನ್ನದ ಪದಕ; ಪ್ರಧಾನಿ ಶ್ಲಾಘನೆ; ಶಕ್ತಿಕಾಂತ್ ಹೆಸರಲ್ಲೇ ಇದೆ ಶಕ್ತಿ ಎಂದ ಮಹೀಂದ್ರ
ಶಕ್ತಿಕಾಂತ ದಾಸ್

Updated on: Aug 21, 2024 | 10:48 AM

ನವದೆಹಲಿ, ಆಗಸ್ಟ್ 21: ಸೆಂಟ್ರಲ್ ಬ್ಯಾಂಕ್ ಒಲಿಂಪಿಕ್ಸ್​ನಲ್ಲಿ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸತತ ಎರಡನೇ ಬಾರಿ ಚಿನ್ನದ ಪದಕ ಜಯಿಸಿದ್ದಾರೆ. ಸೆಂಟ್ರಲ್ ಬ್ಯಾಂಕುಗಳನ್ನು ಹೇಗೆ ನಿರ್ವಹಣೆ ಮಾಡಲಾಗುತ್ತಿದೆ ಎನ್ನುವುದರ ಆಧಾರದ ಮೇಲೆ ಅವುಗಳ ಮುಖ್ಯಸ್ಥರಿಗೆ ಎ+ ನಿಂದ ಹಿಡಿದು ಎಫ್​ವರೆಗೆ ರೇಟಿಂಗ್ ಕೊಡಲಾಗುತ್ತದೆ. ಗ್ಲೋಬಲ್ ಫೈನಾನ್ಸ್ ಮ್ಯಾಗಝಿನ್ 1994ರಿಂದ ವಾರ್ಷಿಕವಾಗಿ ಪ್ರಕಟಿಸುವ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್ಸ್​ನ ಈ ವರ್ಷದ ವರದಿಯಲ್ಲಿ ಶಕ್ತಿಕಾಂತ ದಾಸ್ ಅವರಿಗೆ ಎ+ ರೇಟಿಂಗ್ ಮತ್ತು ಚಿನ್ನದ ಪದಕ ಸಿಕ್ಕಿದೆ.

ಎಕ್ಸ್ ಪ್ಲಾಟ್​ಫಾರ್ಮ್​ನಲ್ಲಿ ಆರ್​ಬಿಐ ಈ ಸುದ್ದಿಯನ್ನು ಹಂಚಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಆರ್​​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಆರ್ಥಿಕ ಪ್ರಗತಿ ಮತ್ತು ಸ್ಥಿರತೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಅವರು ಮಾಡಿರುವ ಕೆಲಸಕ್ಕೆ ಮತ್ತು ಆರ್​ಬಿಐನಲ್ಲಿನ ಅವರ ನಾಯಕತ್ವಕ್ಕೆ ಇದು ಸಿಕ್ಕ ಮನ್ನಣೆಯಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸಿಕ್ಕಾಪಟ್ಟೆ ಇರುವ ಮ್ಯೂಚುವಲ್ ಫಂಡ್​ಗಳಲ್ಲಿ ಯಾವುದನ್ನು ಆರಿಸುವುದು? ರಾಧಿಕಾ ಗುಪ್ತಾ ಸಲಹೆ ಇದು

ಉದ್ಯಮಿ ಆನಂದ್ ಮಹೀಂದ್ರ ಅವರೂ ಪ್ರತಿಕ್ರಿಯಿಸಿದ್ದು ಶಕ್ತಿಕಾಂತ ದಾಸ್ ಅವರನ್ನು ಅಭಿನಂದಿಸಿದ್ದಾರೆ. ಶಕ್ತಿಕಾಂತ ದಾಸ್ ಅವರಿಗೆ ತಂದೆ ತಾಯಿ ಒಳ್ಳೆಯ ಹೆಸರು ಇಟ್ಟಿದ್ದಾರೆ. ಈ ಪ್ರಪಂಚಕ್ಕೆ ಅವರ ಶಕ್ತಿಯನ್ನು ತೋರಿಸಿದ್ದಾರೆ ಎಂದು ಮಹೀಂದ್ರ ಗ್ರೂಪ್ ಮುಖ್ಯಸ್ಥರಾದ ಅವರು ಹೇಳಿದ್ದಾರೆ.

ಸೆಂಟ್ರಲ್ ಬ್ಯಾಂಕ್ ಒಲಿಂಪಿಕ್ಸ್​ನಲ್ಲಿ ಈ ವರ್ಷ ಆರ್​ಬಿಐ ಗವರ್ನರ್ ಸೇರಿದಂತೆ ಮೂರು ಸೆಂಟ್ರಲ್ ಬ್ಯಾಂಕ್ ಗವರ್ನರ್​ಗಳಿಗೆ ಎ+ ರೇಟಿಂಗ್ ಸಿಕ್ಕಿದೆ. ಶಕ್ತಿಕಾಂತ ದಾಸ್ ಅಲ್ಲದೇ, ಡೆನ್ಮಾರ್ಕ್​ನ ಕ್ರಿಸ್ಟಿಯನ್ ಕೆಟ್ಟೆಲ್ ಥಾಮ್ಸನ್, ಸ್ವಿಟ್ಜರ್​​ಲ್ಯಾಂಡ್​ನ ಥಾಮಸ್ ಜಾರ್ಡನ್ ಅವರಿಗೆ ಈ ಮನ್ನಣೆ ದೊರೆತಿದೆ.

ಬ್ರೆಜಿಲ್​ನ ರಾಬರ್ಟೋ ಕ್ಯಾಂಪೋಸ್ ನೇಟೋ, ಚಿಲಿಯ ರೋಸಾನ ಕೋಸ್ಟಾ, ಮಾರಿಷಸ್​ನ ಹರ್ವೇಶ್ ಕುಮಾರ್ ಸೀಗೋಲಂ, ಮೊರಾಕ್ಕೋದ ಅಬ್ದಲ್​ಲತೀಫ್ ಜೋವಾರಿ, ಸೌತ್ ಆಫ್ರಿಕಅದ ಲೆಸೆಟ್ಜಾ ಕಗಾನ್ಯಾಗೋ, ಶ್ರೀಲಂಕಾದ ನಂದಲಾಲ್ ವೀರಸಿಂಘೆ ಮತ್ತು ವಿಯೆಟ್ನಾಂನ ಎನ್​ಗುಯೆನ್ ಥಿ ಹೋಂಗ್ ಅವರಿಗೆ ಎ ರೇಟಿಂಗ್ ಸಿಕ್ಕಿದೆ.

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಸರಿಯಾಗಿ ಬಳಸಿದ್ರೆ ಹಣದ ಚೀಲ; ತಪ್ಪು ಮಾಡಿದರೆ ಸಾಲದ ಶೂಲ; ಕಾರ್ಡ್ ಬಳಸಿ ಲಾಭ ಮಾಡುವುದು ಹೇಗೆ ನೋಡಿ

ಹತ್ತಿರಹತ್ತಿರ 100 ದೇಶಗಳ ಸೆಂಟ್ರಲ್ ಬ್ಯಾಂಕ್ ಗವರ್ನರ್​ಗಳಿಗೆ ಈ ರೀತಿ ರೇಟಿಂಗ್ ಕೊಡಲಾಗುತ್ತಿದೆ. ‘ಕಳೆದ ಕೆಲ ವರ್ಷಗಳಿಂದ ಸೆಂಟ್ರಲ್ ಬ್ಯಾಂಕರ್​ಗಳು ಹಣದುಬ್ಬರದ ಮೇಲೆ ಸಮರ ಸಾರಿವೆ. ಅವರ ಪ್ರಮುಖ ಅಸ್ತ್ರವಾದ ಬಡ್ಡಿದರವನ್ನು ಬಳಸುತ್ತಿವೆ. ಈ ಪ್ರಯತ್ನಕ್ಕೆ ಫಲ ಸಿಗುತ್ತಿರುವುದನ್ನು ಆ ದೇಶಗಳು ಕಾಣುತ್ತಿರಬಹುದು. ಹಣದುಬ್ಬರ ಸಾಕಷ್ಟು ಕಡಿಮೆ ಆಗಿದೆ,’ ಎಂದು ಗ್ಲೋಬಲ್ ಫೈನಾನ್ಸ್ ಸಂಸ್ಥೆಯ ಸಂಸ್ಥಾಪಕ ಜೋಸೆಫ್ ಜಿಯಾರಪುಟೋ ಈ ವರದಿಯಲ್ಲಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us