Starbucks: ಒಂದು ಟ್ವೀಟ್ ಕಾರಣಕ್ಕೆ ಲಕ್ಷ ಕೋಟಿ ರೂ ನಷ್ಟ ಮಾಡಿಕೊಂಡ ಸ್ಟಾರ್​ಬಕ್ಸ್

Starbucks Loses 11 Billion Dollar: ಗಾಜಾದಲ್ಲಿ ಹಮಾಸ್ ವಿರುದ್ಧ ಹೋರಾಡುತ್ತಿರುವ ಇಸ್ರೇಲ್​ಗೆ ಬೆಂಬಲ ನೀಡಿದ ಸ್ಟಾರ್​ಬಕ್ಸ್​ಗೆ ಬಾಯ್ಕಾಟ್ ಸಂಕಷ್ಟ ಎದುರಾಗಿದೆ. ನವೆಂಬರ್ 16ರಿಂದೀಚೆ ಅದರ ಷೇರುಬೆಲೆ ಶೇ. 10ರಷ್ಟು ಕುಸಿದಿದೆ. ಇದರಿಂದ 11 ಬಿಲಿಯನ್ ಡಾಲರ್ ನಷ್ಟವಾಗಿದೆ. ಸ್ಟಾರ್ ಬಕ್ಸ್​ ಮಾತ್ರವಲ್ಲ ಮೆಕ್​ಡೊನಾಲ್ಡ್ ಅಂಗಡಿಗಳಿಗೂ ಬಾಯ್ಕಾಟ್ ಟ್ರೆಂಡ್ ನಡೆದಿದೆ. ಷೇರು ಕುಸಿತ ಮಾತ್ರವಲ್ಲ, ಬಿಸಿನೆಸ್ ಕೂಡ ಕಡಿಮೆ ಆಗಿದೆ.

Starbucks: ಒಂದು ಟ್ವೀಟ್ ಕಾರಣಕ್ಕೆ ಲಕ್ಷ ಕೋಟಿ ರೂ ನಷ್ಟ ಮಾಡಿಕೊಂಡ ಸ್ಟಾರ್​ಬಕ್ಸ್
ಸ್ಟಾರ್​ಬಕ್ಸ್

Updated on: Dec 07, 2023 | 3:10 PM

ವಾಷಿಂಗ್ಟನ್, ಡಿಸೆಂಬರ್ 7: ಇಸ್ರೇಲ್​ಗೆ ಬೆಂಬಲ ನೀಡಿ ಕೆಲಸಗಾರರ ಒಕ್ಕೂಟವೊಂದು ಮಾಡಿದ ಟ್ವೀಟ್ ಪರಿಣಾಮ ಸ್ಟಾರ್​ಬಕ್ಸ್ ಕಾರ್ಪೊರೇಶನ್ (Starbucks Corporation) ಸಂಸ್ಥೆಯ ಷೇರುಮೌಲ್ಯ ದಿನೇ ದಿನೇ ಕುಸಿಯುತ್ತಿದೆ. ಕೆಲವೇ ದಿನಗಳ ಅಂತರದಲ್ಲಿ ಸ್ಟಾರ್​ಬಕ್ಸ್​ನ ಷೇರುಸಂಪತ್ತು ಶೇ. 10ರ ಸಮೀಪದಷ್ಟು ಕರಗಿಹೋಗಿದೆ. ಅದರಿಂದ ಆದ ನಷ್ಟ ಬರೋಬ್ಬರಿ 11 ಬಿಲಿಯನ್ ಡಾಲರ್. ಅಂದರೆ 90,000 ಕೋಟಿ ರೂಗೂ ಹೆಚ್ಚು ಮೊತ್ತದ ಷೇರುಸಂಪತ್ತು ಕುಗ್ಗಿಹೋಗಿದೆ. ಷೇರು ಮಾತ್ರವಲ್ಲ ಹಲವೆಡೆ ಸ್ಟಾರ್​ಬಕ್ಸ್ ಹೋಟೆಲ್​ನ ಬಿಸಿನೆಸ್ ಕೂಡ ಗಣನೀಯವಾಗಿ ಇಳಿದಿದೆ. ಈ ಡಬಲ್ ಹೊಡೆತಕ್ಕೆ ಚೇತರಿಸಿಕೊಳ್ಳುವ ಬಗೆ ಹೇಗೆ ಎಂಬುದು ಸ್ಟಾರ್​ಬಕ್ಸ್​ಗೆ ಮುಖ್ಯ ಪ್ರಶ್ನೆಯಾಗಿದೆ.

ಸ್ಟಾರ್​ಬಕ್ಸ್ ಮಾಡಿದ ಟ್ವೀಟ್ ಏನು?

ಸ್ಟಾರ್​ಬಕ್ಸ್ ವರ್ಕರ್ಸ್ ಯುನೈಟೆಡ್​ನಿಂದ ನವೆಂಬರ್ 16ರಂದು ಟ್ವೀಟ್ ಆಗಿತ್ತು. ಅದು ರೆಡ್ ಕಪ್ ಡೇ ಪ್ರಯುಕ್ತ ಮಾಡಿದ ಟ್ವೀಟ್ ಆಗಿದ್ದರೂ ಅದರಲ್ಲಿ ಇಸ್ರೇಲೀ ಜನರಿಗೆ ಬೆಂಬಲ ವ್ಯಕ್ತಪಡಿಸಲಾಗಿತ್ತು.

ಇದನ್ನೂ ಓದಿ: ನೆಟ್ಟಗಾಗದ ಪೇಟಿಎಂ ಹಣೆಬರಹ; ಗುರುವಾರ ಅದರ ಷೇರುಬೆಲೆ ಶೇ. 20ರಷ್ಟು ಕುಸಿತ; ಈ ಹೊಸ ಹಿನ್ನಡೆಗೆ ಏನು ಕಾರಣ?

ಆಗಿನಿಂದಲೂ ಸ್ಟಾರ್​ಬಕ್ಸ್ ಮೇಲೆ ವಿವಿಧೆಡೆ ಬಹಿಷ್ಕಾರ ಧ್ವನಿ ಆವರಿಸಿವೆ. ಸ್ಟಾರ್​ಬಕ್ಸ್ ಮಾತ್ರವಲ್ಲ ಮ್ಯಾಕ್​ಡೊನಾಲ್ಡ್ ಮೊದಲಾದ ಸಂಸ್ಥೆಗಳೂ ಕೂಡ ಇಸ್ರೇಲ್​ಗೆ ಬೆಂಬಲ ವ್ಯಕ್ತಪಡಿಸಿದ್ದವು. ಇಂಥ ಎಲ್ಲಾ ಕಂಪನಿಗಳ ಮೇಲೂ ಬಾಯ್ಕಾಟ್ ಟ್ರೆಂಡ್ ಇದೆ. ಇಸ್ರೇಲಿಗರು ನಿರ್ವಹಿಸುತ್ತಿರುವ ಎಲ್ಲಾ ಉದ್ದಿಮೆಗಳಿಗೂ ಬಾಯ್ಕಾಟ್ ಭೀತಿ ಎದುರಾಗಿದೆ.

ವಾಷಿಂಗ್ಟನ್​ನಲ್ಲಿ ಮುಖ್ಯ ಕಚೇರಿ ಇರುವ ಸ್ಟಾರ್​ಬಕ್ಸ್ ಕಾರ್ಪೊರೇಶನ್​ನ ಷೇರುಬೆಲೆ ನವೆಂಬರ್ 16ರಿಂದೀಚೆ ಕುಸಿಯುತ್ತಾ ಬಂದಿದೆ. ಅಂದು 107.2 ಡಾಲರ್ ಇದ್ದ ಅದರ ಷೇರುಬೆಲೆ ಡಿಸೆಂಬರ್ 6ರಂದು 95 ಡಾಲರ್​ಗೆ ಕುಸಿದುಹೋಗಿತ್ತು. ಇಂದು ಗುರುವಾರ ಷೇರುಬೆಲೆ 97 ಡಾಲರ್​ಗೆ ಏರಿದೆ.

ಇದನ್ನೂ ಓದಿ: ಭಾರತದ ಮಾರುಕಟ್ಟೆಗಳಿಗೆ ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಮುಗಿಬೀಳುತ್ತಿರುವುದು ಯಾಕೆ? ಇಲ್ಲಿದೆ ಕೆಲ ಪ್ರಮುಖ ಕಾರಣಗಳು

ಸ್ಟಾರ್​ಬಕ್ಸ್ ಸಂಸ್ಥೆಗೆ ಭಾರತ ಮೂಲದ ಲಕ್ಷ್ಮಣ್ ನರಸಿಂಹನ್ ಸಿಇಒ ಆಗಿದ್ದಾರೆ. ಒಂದು ವರ್ಷದ ಹಿಂದೆ ಹಂಗಾಮಿ ಸಿಇಒ ಆಗಿ ಬಂದಿದ್ದ ಅವರು 2023ರ ಏಪ್ರಿಲ್​ನಲ್ಲಿ ಪೂರ್ಣಪ್ರಮಾಣದ ಸಿಇಒ ಆಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Thu, 7 December 23

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us