ನವದೆಹಲಿ: ಭಾರತದಾದ್ಯಂತ ಕಳೆದ ಮೂರ್ನಾಲ್ಕು ವಾರಗಳಿಂದ ಸಕ್ಕರೆ (Sugar) ದುಬಾರಿಯಾಗಿದೆ. ಕಿಲೋಗೆ 45 ರೂವರೆಗೂ ಬೆಲೆ ಪಡೆದಿರುವ ಸಕ್ಕರೆ ಮುಂಬರುವ ದಿನಗಳಲ್ಲಿ ತೀರಾ ತುಟ್ಟಿಯಾಗಲಿದೆ. ಸಕ್ಕರೆ ಲಭ್ಯತೆ ಕಡಿಮೆ ಆಗಿರುವುದು ಇದಕ್ಕೆ ಕಾರಣ. ಈ ಸೀಸನ್ನಲ್ಲಿ ಸುಮಾರು 3 ಲಕ್ಷ ಟನ್ಗಳಷ್ಟು ಸಕ್ಕರೆಯ ಕೊರತೆ ಎದುರಾಗುತ್ತಿದೆ. 38.6 ಎಂಟಿಯಷ್ಟು ಸಕ್ಕರೆ ಉತ್ಪಾದನೆಯ ನಿರೀಕ್ಷೆ ಇತ್ತು. ಆದರೆ, ಈ ಬಾರಿ ಕೆವಲ 33.5 ಎಂಟಿ ಸಕ್ಕರೆ ಮಾತ್ರ ಉತ್ಪಾದನೆ ಅಗಬಹುದು ಎಂದು ಅಖಿಲ ಭಾರತ ಸಕ್ಕರೆ ವ್ಯಾಪಾರ ಸಂಘಟನೆ ಹೇಳಿದೆ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ತಿಳಿಸಿದ್ದಾರೆ. ಸರಕು ಮಾರುಕಟ್ಟೆಯಲ್ಲಿ (Commodities Market) ಏಪ್ರಿಲ್ ತಿಂಗಳಲ್ಲಿ ಕಚ್ಛಾ ಸಕ್ಕರೆ ಬೆಲೆ ಪೌಂಡ್ಗೆ 23.5 ಡಾಲರ್ನಷ್ಟು ಏರಿಕೆ ಆಗಿದೆ. 2016ರ ನಂತರ ಇದು ಈ ಮಾರುಕಟ್ಟೆಯಲ್ಲಿ ಪಡೆದಿರುವ ಅತ್ಯಂತ ಹೆಚ್ಚಿನ ಬೆಲೆಯಾಗಿದೆ. ಕಚ್ಛಾ ಸಕ್ಕರೆ (Raw sugar) ಬೆಲೆ ಕಳೆದ ಒಂದು ವರ್ಷದಲ್ಲಿ ಶೇ. 16ರಷ್ಟು ಹೆಚ್ಚಾದರೆ, ಕಳೆದ ಒಂದು ತಿಂಗಳಲ್ಲಿ ಬೆಲೆ ಹೆಚ್ಚಳ ಅಗಿದ್ದು ಬರೋಬ್ಬರಿ ಶೇ. 13.27ರಷ್ಟು.
ಇದನ್ನೂ ಓದಿ: RBI: ಐಟಿ ಸರ್ವಿಸ್ ಹೊರಗುತ್ತಿಗೆ: ಗ್ರಾಹಕರ ಜವಾಬ್ದಾರಿಯಿಂದ ಬ್ಯಾಂಕುಗಳು ತಪ್ಪಿಸಿಕೊಳ್ಳುವಂತಿಲ್ಲ: ಆರ್ಬಿಐ ಹೊಸ ನಿಯಮ
ಸಕ್ಕರೆ ಉತ್ಪಾದನೆಯಲ್ಲಿ ಮಹಾರಾಷ್ಟ್ರ ನಂಬರ್ ಒನ್ ರಾಜ್ಯ. ಇಲ್ಲಿಯ 190ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಲ್ಲಿ 60 ಲಕ್ಷ ಟನ್ಗಳಷ್ಟು (13.9 ಎಂಟಿ) ಸಕ್ಕರೆ ಉತ್ಪಾದನೆ ಉತ್ಪಾದನೆ ಅಗುತ್ತದೆ. ನಂತರದ ಸ್ಥಾನ ಉತ್ತರಪ್ರದೇಶದ್ದು. ಇದು ಬಿಟ್ಟರೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 70ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು 33 ಲಕ್ಷ ಟನ್ (6.3 ಎಂಟಿ) ಸಕ್ಕರೆ ಉತ್ಪಾದನೆ ಆಗುತ್ತದೆ. ಅದರೆ ಈ ಬಾರಿ ಸಕ್ಕರೆ ಉತ್ಪಾದನೆ ಗಣನೀಯವಾಗಿ ಇಳಿಕೆಯಾಗುವ ನಿರೀಕ್ಷೆ ಇದೆ.
ಮಹಾರಾಷ್ಟ್ರ ಮತ್ತು ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವುದನ್ನು ನಿಲ್ಲಿಸಿವೆ. 2023 ಮಾರ್ಚ್ 31ರವರೆಗೆ ಈ ಎರಡು ರಾಜ್ಯಗಳಲ್ಲಿ ಕ್ರಮವಾಗಿ 104 ಎಂಟಿ ಮತ್ತು 53ಎಂಟಿಯಷ್ಟು ಕಬ್ಬನ್ನು ಮಾತ್ರ ಅರೆದಿವೆ. ಹೀಗಾಗಿ, ಮಹಾರಾಷ್ಟ್ರದಲ್ಲಿ ಸಕ್ಕರೆ ಉತ್ಪಾದನೆ 10.5 ಮತ್ತು ಕರ್ನಾಟಕದಲ್ಲಿ ಸಕ್ಕರೆ ಉತ್ಪಾದನೆ 5.6 ಎಂಟಿಯಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: PM Kisan: ಪಿಎಂ ಕಿಸಾನ್ 14ನೇ ಕಂತು ಯಾವಾಗ? ಹೊಸ ರೈತರು ನೊಂದಾಯಿಸುವುದು ಹೇಗೆ? ಎಲ್ಲಾ ವಿವರ ಇಲ್ಲಿದೆ
ಓಪೆಕ್ ಪ್ಲಸ್ ಗುಂಪಿನ (OPEC+) ದೇಶಗಳು ಕಚ್ಛಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಲು ನಿರ್ಧರಿಸಿವೆ. ಹೀಗಾಗಿ, ಜೈವಿಕ ಇಂಧನ (Biofuel) ಉತ್ಪಾದನೆಗೆ ಬೇಕಾದ ಎಥನಾಲ್ನ ಕೊರತೆ ಎದುರಾಗಿದೆ. ಈ ಕೊರತೆ ನೀಗಿಸಲು ಕಬ್ಬನ್ನು ಉಪಯೋಗಿಸಲಾಗುತ್ತಿದೆ. ಕಬ್ಬಿನ ಮೂಲಕ ಎಥನಾಲ್ ತಯಾರಿಸಬಹುದಾಗಿದೆ.
ಸಕ್ಕರೆ ಬೆಲೆ ತುಟ್ಟಿಯಾದರೆ ಅದರಿಂದ ಅಗುವ ನೇರ ಮತ್ತು ಪರೋಕ್ಷ ಪರಿಣಾಮಗಳು ಹಲವು. ಮೊದಲಿಗೆ ಹಣದುಬ್ಬರ. ಇದು ಅಗತ್ಯವಸ್ತುಗಳ ಬೆಲೆ ಏರಿಕೆಗೂ ಹಣದುಬ್ಬರಕ್ಕೂ ನೇರ ಸಂಬಂಧ ಇದೆ. ಅಗತ್ಯವಸ್ತುಗಳಲ್ಲಿ ಸಕ್ಕರೆಯೂ ಪ್ರಮುಖವಾದುದು. ಸಕ್ಕರೆ ಬೆಲೆ ಏರಿದರೆ ಹಣದುಬ್ಬರ ಏರಿಕೆಯ ವೇಗವೂ ಹೆಚ್ಚುತ್ತದೆ.
ಇದನ್ನೂ ಓದಿ: 3rd Richest Lady: ಗಂಡ ಸತ್ತ ಬಳಿಕ ಸಿಕ್ಕ ಷೇರುಗಳಿಂದಲೇ ಭಾರತದ 3ನೇ ಅತೀ ಶ್ರೀಮಂತ ಮಹಿಳೆ ಎನಿಸಿರುವ ರೇಖಾ
ಹಣದುಬ್ಬರ ಏರಿಕೆಯಾದರೆ ಅದನ್ನು ನಿಯಂತ್ರಿಸಲು ಆರ್ಬಿಐ ಮತ್ತೆ ಬಡ್ಡಿ ದರಗಳನ್ನು ಹೆಚ್ಚಿಸುವುದು ಅನಿವಾರ್ಯ. ಬಡ್ಡಿ ದರ ಹೆಚ್ಚಾದರೆ ಆರ್ಥಿಕತೆಯ ಚಟುವಟಿಕೆ ಮಂಕಾಗುತ್ತದೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಸಕ್ಕರೆ ರಫ್ತನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.
Published On - 1:44 pm, Tue, 11 April 23