ಅನೈತಿಕ ಸಂಬಂಧ; ಪ್ರೀತಿಸಿ ಮದುವೆಯಾದ ಹೆಂಡತಿಗೆ ಕಟ್ಟಿದ ಚಟ್ಟ, ಏನಿದು ಕಥೆ ಅಂತೀರಾ?ಈ ಸ್ಟೋರಿ ಓದಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 07, 2023 | 10:26 PM

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ(Belthangady) ತಾಲೂಕಿನ ಬೆಳಾಲು ಗ್ರಾಮದ ಮಾಚಾರು ಕೆಂಚನೊಟ್ಟು ಎಂಬ ಪ್ರದೇಶದಲ್ಲಿ ಪತಿಯೇ ಪತ್ನಿಯನ್ನು ಕೊಂದು ಬಾವಿಗೆ ಹಾಕಿದ್ದ ಘಟನೆ ನಡೆದಿದೆ. ಈ ಕೊಲೆ ಆರೋಪಿ ಸಿಕ್ಕಿಬಿದ್ದಿದೆ ರೋಚಕವಾಗಿದ್ದು, ಈ ಕುರಿತು ಇಲ್ಲಿದೆ ವಿವರ.

ಅನೈತಿಕ ಸಂಬಂಧ; ಪ್ರೀತಿಸಿ ಮದುವೆಯಾದ ಹೆಂಡತಿಗೆ ಕಟ್ಟಿದ ಚಟ್ಟ, ಏನಿದು ಕಥೆ ಅಂತೀರಾ?ಈ ಸ್ಟೋರಿ ಓದಿ
ಆರೋಪಿ ಸುಧಾಕರ, ಮೃತ ಪತ್ಮಿ
Follow us on

ದಕ್ಷಿಣ ಕನ್ನಡ, ನ.07: ಜಿಲ್ಲೆಯ ಬೆಳ್ತಂಗಡಿ(Belthangady) ತಾಲೂಕಿನ ಬೆಳಾಲು ಗ್ರಾಮದ ಮಾಚಾರು ಕೆಂಚನೊಟ್ಟು ಎಂಬ ಪ್ರದೇಶದಲ್ಲಿ ನವೆಂಬರ್ 3 ರ ಬೆಳ್ಳಂಬೆಳಗ್ಗೆಯೇ ‘ನನ್ನ ಹೆಂಡತಿ ಬಾವಿಗೆ ಬಿದ್ದಿದ್ದಾಳೆ ಎಂದು ಓರ್ವ ವ್ಯಕ್ತಿ ಕೂಗಾಟ ಆರಂಭಿಸಿದ್ದ. ಹೌದು, ಸುಧಾಕರ (30) ಎಂಬಾತನ ಹೆಂಡತಿ ಶಶಿಕಲಾ(25) ಎಂಬುವವರು ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದರು. ಜೊತೆಗೆ ಆತನೆ ಶಶಿಕಲಾ ತವರು ಮನೆಯವರು ಮತ್ತು ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದ. ಬಳಿಕ ಘಟನೆ ಕುರಿತು ‘ನಾನು ಬೆಳಗ್ಗೆ 4.30 ಕ್ಕೆ ರಬ್ಬರ್ ಟ್ಯಾಪಿಂಗ್​ಗೆ ಹೋಗಿದ್ದೆ. ಬೆಳಗ್ಗೆ 7.30 ರ ಸುಮಾರಿಗೆ ಅಲ್ಲಿಂದ ಬಂದು ಬಾವಿ ನೋಡಿದ್ರೆ, ಅಲ್ಲಿ ಹೆಂಡತಿ ಬಾವಿಯಲ್ಲಿ ಬಿದ್ದಿದ್ದಳು. ಅವಳಿಗೆ ಏನಾಯ್ತು ಗೊತ್ತಿಲ್ಲ ಎಂದು ಅಳುತ್ತಿದ್ದ. ಕೂಡಲೇ ಸ್ಥಳೀಯರು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಧರ್ಮಸ್ಥಳ ಪೊಲೀಸರು ಸುಧಾಕರನನ್ನು ಪ್ರಶ್ನಿಸಿದ್ದು, ಅದೇ ಕತೆಯನ್ನು ಹೇಳಿ, ಹೆಂಡತಿ ಇಲ್ಲದೇ ನಾನು ಹೇಗೆ ಬದುಕಲಿ ಎಂದು ಆತ್ಮಹತ್ಯೆಗೂ ಮುಂದಾಗುವ ನಾಟಕವಾಡಿದ್ದ.

ಪೊಲೀಸ್ ಗೂಸಾ!ಸತ್ಯ ಕಕ್ಕಿದ ಸುಧಾಕರ್​

ಇನ್ನು ಪೊಲೀಸರಿಗೆ ಆಗಲೇ ಸುಧಾಕರನ ಮೇಲೆ ಅನುಮಾನ ಮೂಡಿತ್ತು. ತಕ್ಷಣ ನಿನ್ನ ಜೊತೆ ಮಾತನಾಡಬೇಕು ಬಾ ಎಂದು ಮನೆಯ ಹಿಂದಗಡೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಧರ್ಮಸ್ಥಳ ಪಿಎಸ್ಐ, ಸುಧಾಕರನ ಕಪಾಳಕ್ಕೆ ಹೊಡೆದು, ಅವರ ಭಾಷೆಯಲ್ಲಿ ವಿಚಾರಿಸಿದ್ದಾರೆ. ಗೂಸಾ ಬಿದ್ದ ತಕ್ಷಣ ಸುಧಾಕರ ಸತ್ಯ ಕಕ್ಕಿದ್ದಾನೆ. ಆನ್ ಸ್ಪಾಟ್​ನಲ್ಲಿ ಪೊಲೀಸರು ಬಾವಿಗೆ ಬಿದ್ದ ಮಹಿಳೆಯ ಸಾವಿನ ರಹಸ್ಯವನ್ನು ಬಯಲುಗೊಳಿಸಿದ್ದಾರೆ.

ಇದನ್ನೂ ಓದಿ:ಮಂಗಳೂರು: ಹಳೇ ದ್ವೇಷ ಹಿನ್ನೆಲೆ ಮಾರಕಾಸ್ತ್ರದಿಂದ ರೌಡಿಶೀಟರ್​ ಓರ್ವನ ಬರ್ಬರ ಹತ್ಯೆ

ಜೀವಂತ ಹೆಂಡತಿಯನ್ನು ಬಾವಿಗೆ ಎಸೆದ!

ಸುಧಾಕರ ಪ್ರತಿನಿತ್ಯದ ಹಾಗೆ ಮುಂಜಾನೆ 4.30 ಕ್ಕೆ ರಬ್ಬರ್ ಟ್ಯಾಪಿಂಗ್​ಗೆ ಅಂದು ಕೂಡ ಮನೆಯಿಂದ ಹೊರಟಿದ್ದ. ನಿತ್ಯ ಮುಂಜಾನೆ 4.30 ಕ್ಕೆ ಹೋದವನು ಬೆಳಗ್ಗೆ 8.30 ಕ್ಕೆಲ್ಲಾ ಮನೆಗೆ ಬರುತ್ತಿದ್ದ. ಅಂದು ಬೆಳಗ್ಗೆ ಬೇಗ ಮನೆಗೆ ಬಂದಿದ್ದಾನೆ. ಮನೆ ಬಳಿ ಬಂದಾಗ ಅಲ್ಲಿ ತನ್ನ ಹೆಂಡತಿ ಶಶಿಕಲಾ ನೀರು ತರಲು ಬಾವಿ ಹತ್ತಿರ ಬಂದಿದ್ದಳು. ಬೇಗ ಬಂದ ಗಂಡನನ್ನು ನೋಡಿ, ಏನು ಇವತ್ತು ಬೇಗಾ ಬಂದಿದ್ದೀಯ. ಆ ಮಹಿಳೆ ಜೊತೆ ಸುತ್ತಾಡೋಕೆ ಹೋಗೋದಿದ್ಯಾ ಎಂದು ಕೇಳಿದ್ದಾಳೆ. ಇದೇ ವಿಚಾರದಲ್ಲಿ ಇಬ್ಬರಿಗೂ ಗಲಾಟೆಯಾಗಿದೆ. ವಿನಾಕಾರಣ ನನ್ನ ಮೇಲೆ ಅನೈತಿಕ ಸಂಬಂಧ ಆರೋಪ ಮಾಡಿ ನಿಂಧಿಸುತ್ತೀಯ ಎಂದು ಗಂಡ-ಹೆಂಡತಿಯ ಕತ್ತನ್ನು ಹಿಸುಕಿದ್ದಾನೆ. ಶಶಿಕಲಾ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಕೂಡಲೇ ಅವಳನ್ನು ಎತ್ತಿಕೊಂಡು ಹೋಗಿ ಅಲ್ಲಿ ಇದ್ದ ಬಾವಿಗೆ ಎಸೆದಿದ್ದಾನೆ. ನಂತರ ತನ್ನ ಹೆಂಡತಿ ಬಾವಿಗೆ ಬಿದ್ದಿದ್ದಾಳೆ ಎಂದು ನಾಟಕ ಆಡಿದ್ದಾನೆ.

ವರಸೆಯಲ್ಲಿ ಅಣ್ಣಾ-ತಂಗಿ ಆದ್ರು ಲವ್!

ಶಶಿಕಲಾ ಮತ್ತು ಸುಧಾಕರ ಸಂಬಂಧಿಕರು, ವರಸೆಯಲ್ಲಿ ಅಣ್ಣಾ-ತಂಗಿ ಆಗಬೇಕಂತೆ. ಆದರೂ, ಕೂಡ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಎರಡು ಮನೆಯವರಿಂದ ವಿರೋಧ ಇತ್ತು. ಇವರಿಬ್ಬರಿಗೆ ಮದುವೆ ಮಾಡಲು ಸಾಧ್ಯವಿಲ್ಲ ಎಂದು ಎರಡು ಮನೆಯವರು ನಿರ್ಧಾರ ಮಾಡಿದ್ದರು. ಆದ್ರೆ, ಇವರಿಬ್ಬರು ಅದಕ್ಕೆ ತಯಾರಿರಲಿಲ್ಲ. ಕಳೆದ 7 ವರ್ಷದ ಹಿಂದೆ ಮನೆ ಬಿಟ್ಟು ಬೆಂಗಳೂರಿಗೆ ಓಡಿ ಹೋಗಿದ್ದರು. ಬೆಂಗಳೂರಿನ ಸಬ್ ರಿಜಿಸ್ಟ್ರರ್ ಆಫೀಸ್​ನಲ್ಲಿ ಮದುವೆ ಕೂಡ ಆಗಿದ್ದರು. ಮದುವೆಯಾದ ಒಂದೇ ವರ್ಷಕ್ಕೆ ಒಂದು ಹೆಣ್ಣ ಮಗು ಕೂಡ ಹುಟ್ಟಿತ್ತು. ಬಳಿಕ ಊರಿಗೆ ಬಂದು ಬೇರೊಂದು ಮನೆ ಮಾಡಿ ವಾಸ ಮಾಡುತ್ತಾ ಸಂಸಾರ ಸಾಗಿಸುತ್ತಿದ್ದರು.

ಇದನ್ನೂ ಓದಿ:ಬಸ್ ಡ್ರೈವ್ ಮಾಡುವಾಗಲೇ ಹೃದಯಾಘಾತ: 40 ಪ್ರಯಾಣಿಕರ ಜೀವ ಉಳಿಸಿ ಪ್ರಾಣತೆತ್ತ ಚಾಲಕ

ಮಹಿಳೆ ಸಹವಾಸಕ್ಕೆ ಶಶಿಕಲಾ ಕೆಂಡ!

ಇತ್ತ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದ ಸುಧಾಕರನಿಗೆ ತನ್ನದೇ ಊರಿನ ಮತ್ತೊಂದು ಮಹಿಳೆ ಜೊತೆ ಸಂಪರ್ಕವಾಗಿತ್ತು. ಆಕೆಯ ಮೈಮಾಟಕ್ಕೆ ಸುಧಾಕರ ಮಾರುಹೋಗಿದ್ದ. ಕಳೆದ ಎರಡು ವರ್ಷದ ಹಿಂದೆಯೇ ಆ ಆಂಟಿ ಸಹವಾಸವಾಗಿತ್ತು. ಮುಂಜಾನೆ ರಬ್ಬರ್ ಟ್ಯಾಂಪಿಂಗ್ ಮಾಡಿ ಬರುವುದು. ನಂತರ ಆ ಆಂಟಿಯನ್ನು ಕರೆದುಕೊಂಡು ಸುತ್ತಾಡುವುದು ಇದೇ ಆತನ ಕೆಲಸವಾಗಿತ್ತು. ಬಹಳಷ್ಟು ಸಮಯ ಇದು ತನ್ನ ಪತ್ನಿಗೆ ಗೊತ್ತಿರಲಿಲ್ಲ. ಆದ್ರೆ, ಒಂದು ದಿನ ಮಹಿಳೆ ಜೊತೆಗಿನ ಆತನ ಸರಸ ಸಲ್ಲಾಪ ಬಯಲಾಗಿತ್ತು. ಮಹಿಳೆಯ ಗಂಡನಿಗೆ ತನ್ನ ಹೆಂಡತಿಯ ಸರಸದಾಟ ಗೊತ್ತಾಗಿತ್ತು. ತನ್ನ ಹೆಂಡತಿ ಸಹವಾಸ ಬಿಡು ಎಂದು ಸುಧಾಕರನ ಮನೆಗೆ ಬಂದು ಜಗಳ ಆಡಿದ್ದ. ಶಶಿಕಲಾಗೆ ಇಲ್ಲಿ ಏನೇನು ನಡೆಯುತ್ತಿದೆ ಎಂದು ಎಲ್ಲವನ್ನು ವಿವರಿಸಿದ್ದ. ಬಳಿಕ ಎಲ್ಲಾ ಸೇರಿ ರಾಜಿ-ಪಂಚಾಯ್ತಿ ನಡೆಸಿ, ಇನ್ನು ಆ ಮಹಿಳೆ ಸಹವಾಸಕ್ಕೆ ಹೋಗಬೇಡ ಎಂದು ಎಚ್ಚರಿಸಿದ್ರು. ಸುಧಾಕರ ಕೂಡ ಅವರ ಮಾತನ್ನು ಕೇಳಿ ಸುಮ್ಮನಿದ್ದ. ಇದಾಗಿ 2 ವರ್ಷಗಳ ಕಾಲ ಸುಧಾಕರ ಸರಿಯಾಗಿಯೇ ಇದ್ದ. ಆದ್ರೆ ಮೊನ್ನೆ ಶಶಿಕಲಾ ತನ್ನ ಚಿಕ್ಕಮ್ಮನ ಮನೆ ಬಳಿ ಹೋಗಿ ತನ್ನ ಗಂಡ ಮತ್ತೆ ಮೊದಲಿನಂತೇ ಆಗಿದ್ದಾನೆ. ಆ ಮಹಿಳೆ ಸಹವಾಸವನ್ನು ಮುಂದುವರೆಸಿದ್ದಾನೆ ಎಂದು ಹೇಳಿಕೊಂಡಿದ್ದಳಂತೆ. ಅದಕ್ಕಾಗಿ ನವೆಂಬರ್ 3 ರಂದು ಮತ್ತೆ ರಾಜಿ-ಪಂಚಾಯ್ತಿಗೆ ಬರುತ್ತೇವೆ ಎಂದು ಹೇಳಿ ಕಳುಹಿಸಿದ್ದರಂತೆ. ಆದ್ರೆ, ಅಷ್ಟರಲ್ಲೇ ನಡೆಯಬಾರದ ಘಟನೆ ನಡೆದುಹೋಗಿದೆ.

ತಾಯಿ ಮಸಣಕ್ಕೆ, ತಂದೆ ಜೈಲಿಗೆ! ಅನಾಥವಾಯ್ತು ಹೆಣ್ಣುಮಗು

ಈ ಘಟನೆ ನಡೆಯುವಾಗ ಸುಧಾಕರ ಮತ್ತು ಶಶಿಕಲಾಳ 6 ವರ್ಷದ ಹೆಣ್ಣಮಗಳು ಮನೆಯಲ್ಲಿರಲಿಲ್ಲ, ಬೆಳಾಲಿನ ಅಜ್ಜಿ ಮನೆಯಲ್ಲಿದ್ದಿದ್ದಳು. ಧರ್ಮಸ್ಥಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತನಿಖೆ ಮುಂದುವರೆಸುತ್ತಿದ್ದಾರೆ. ಪ್ರೀತಿಸಿ ಮನೆಬಿಟ್ಟು ಹೋಗಿ ಮದುವೆಯಾದ ಸಂಸಾರಕ್ಕೆ ಅನೈತಿಕ ಸಂಬಂಧ ಅನ್ನೊದು ಕೊಳ್ಳಿ ಇಟ್ಟಿದೆ. ಇತ್ತ ತಾಯಿ ಸಾವನ್ನಪ್ಪಿದ್ರೆ, ತಂದೆ ಜೈಲುಪಾಲಾಗಿರೋದ್ರಿಂದ ಇವರ ಪ್ರೀತಿಯ ಸಂಕೇತವಾಗಿರುವ ಆ 6 ವರ್ಷದ ಹೆಣ್ಣು ಮಗು ಮಾತ್ರ ಅನಾಥವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ