Crime News: ಏರಿಯಾದಲ್ಲಿ ಹೆಸರು​ ಮಾಡಲು ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ

ಕರ್ನಾಟಕದ ರಾಜಧಾನಿ ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆದ ಹಲ್ಲೆ, ಕಳ್ಳತನ ಪ್ರಕರಣದ ಮಾಹಿತಿ ಇಲ್ಲಿದೆ.

Crime News: ಏರಿಯಾದಲ್ಲಿ ಹೆಸರು​ ಮಾಡಲು ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ
ಸಾಂಧರ್ಬಿಕ ಚಿತ್ರ
Edited By: Rakesh Nayak Manchi

Updated on: Oct 02, 2022 | 9:12 AM

ಬೆಂಗಳೂರು: ನಗರದಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚುತ್ತಿದ್ದು, ಇನ್ನೂ ಕೆಲವರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡು ಹವಾ ಸೃಷ್ಟಿಸಲು ಮುಂದಾಗುತ್ತಿದ್ದಾರೆ. ಇದೀಗ ಏರಿಯಾದಲ್ಲಿ ಹೆಸರು ಮಾಡಬೇಕು ಎನ್ನುವ ದುರುದ್ದೇಶದಿಂದ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಮೇಲೆ ಮಾರನಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಆರ್​​.ಟಿ.ನಗರದ ಗಂಗಾನಗರದಲ್ಲಿ ನಡೆದಿದೆ. ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಆರ್​.ಟಿ.ನಗರದ ವೆಂಕಟೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಏರಿಯಾದಲ್ಲಿ ಹೆಸರು​ ಮಾಡಲು ದುಷ್ಕೃತ್ಯಕ್ಕಿಳಿದ ಹರೀಶ್ ಮತ್ತು ನವೀನ್ ಗ್ಯಾಂಗ್ ಆರ್​.ಟಿ.ನಗರದ ವೆಂಕಟೇಶ್ ಎಂಬವರ ಮೇಲೆ ದಾಳಿ ನಡೆಸಿದ್ದಾರೆ. ಗಂಗಾನಗರದ ಕೃಷ್ಣಪ್ಪ ಮನೆ ಬಳಿ ಬರುತ್ತಿದ್ದ ವೆಂಕಟೇಶ್​ನನ್ನು ಸುತ್ತವರಿದ ಹರೀಶ್ ಮತ್ತು ನವೀನ್ ಗ್ಯಾಂಗ್, ಮಾರಕಾಸ್ತ್ರಗಳಿಂದ ಮನಬಂದಂತೆ ತಲೆಗೆ, ಕೈಗೆ ಹಲ್ಲೆ ನಡೆಸಿದ್ದಾರೆ.

ಏರಿಯಾದಲ್ಲಿ ಅಟ್ಟಹಾಸ ಮೆರೆದ ದುಷ್ಕರ್ಮಿಗಳು ವೆಂಕಟೇಶ್ ಮುಖ,  ತಲೆಯನ್ನು ಚರ್ಚಿಹಾಕಿ ನೋಡಲಾಗದಂತೆ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕೂಡ ಒಮ್ಮೆ ಬೆಚ್ಚಿಬಿದ್ದಿದ್ದಾರೆ. ಸದ್ಯ ವೆಂಕಟೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಆರ್​.ಟಿ.ನಗರ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ.

ಶಿಕ್ಷಕನ ಮೇಲೆ ಮುಖ್ಯ ಶಿಕ್ಷಕನಿಂದ ಹಲ್ಲೆ

ಚಿತ್ರದುರ್ಗ: ವಿದ್ಯಾರ್ಥಿ ಶುಲ್ಕ ದುರ್ಬಳಕೆ ಆರೋಪ ಹೊರಿಸಿದ್ದಕ್ಕೆ ಮುಖ್ಯ ಶಿಕ್ಷಕನೊಬ್ಬ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಿಟ್ಟದಾಳ್ ಗ್ರಾಮದಲ್ಲಿ ನಡೆದಿದೆ. ಹಲ್ಲೆಯಿಂದಾಗಿ ಶಿಕ್ಷಕ ಸುರೇಶ್ ಕಿವಿ ಪರದೆಗೆ ಹಾನಿಯಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಹಲ್ಲೆ ನಡೆಸಿದ ಮುಖ್ಯ ಶಿಕ್ಷಕ ಸ್ಥಳೀಯರು, ಅಧಿಕಾರಿಗಳ ಸಭೆಯಲ್ಲಿ ತಪ್ಪೊಪ್ಪಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ತನ್ನ ವಿರುದ್ಧ ವಿದ್ಯಾರ್ಥಿ ಶುಲ್ಕ ದುರ್ಬಳಕೆ ಆರೋಪ ಹೊರಿಸಿದ್ದಕ್ಕೆ ಕಿಟ್ಟದಾಳ್ ಗ್ರಾಮದ ಕಲ್ಪತರು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಾನಂದ ಅವರು ಅದೇ ಶಾಲೆಯ ಶಿಕ್ಷಕ ಸುರೇಶ್​ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ಶಿಕ್ಷಕ ಸುರೇಶ್ ಕಿವಿಗೆ ಗಾಯಗಳಾಗಿವೆ. ಸದ್ಯ ಹೊಸದುರ್ಗದ ಖಾಸಗಿ ಆಸ್ಪತ್ರೆಗೆ ಸುರೇಶ್ ದಾಖಲಾಗಿದ್ದಾರೆ.

ಘಟನೆ ಸಂಬಂಧ ಸ್ಥಳೀಯರು ಮತ್ತು ಅಧಿಕಾರಿಗಳ ಸಭೆ ನಡೆದಿದ್ದು, ಇಲ್ಲಿ ಮುಖ್ಯ ಶಿಕ್ಷಕ ಶಿವಾನಂದ ತಪ್ಪೊಪ್ಪಿಗೆ ಕೇಳುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಸ್ಥಳೀಯರು, ಬಿಇಓ ಜಯಪ್ಪ ಎದುರು ಮುಖ್ಯ ಶಿಕ್ಷಕ ಶಿವಾನಂದ ತಪ್ಪೊಪ್ಪಿಕೊಂಡಿದ್ದಾರೆ. ವಿದ್ಯಾರ್ಥಿ ಶುಲ್ಕ ದುರ್ಬಳಕೆ ಆರೋಪ ಹೊರಿಸಿದ್ದಕ್ಕೆ ಹೊಡೆದದ್ದು ನಿಜ. ಕಾಲಿಗೆ ಬಿದ್ದು ತಪ್ಪಾಯ್ತು ಎಂದು ಕೇಳಲು ಸಿದ್ಧ ಎಂದು ಹೇಳಿದ್ದಾರೆ.

ದೇವಸ್ಥಾನದ ಹುಂಡಿ ಕಳವಿಗೆ ಯತ್ನ

ಬೀದರ್​: ಜಿಲ್ಲೆಯಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ನಗದು, ಆಭರಣಗಳನ್ನು ದೊಚಿ ದೇವಸ್ಥಾನದ ಹುಂಡಿ ಕಳವಿಗೆ ಯತ್ನ ನಡೆಸಿದ ಘಟನೆ ನಡೆದಿದೆ. ಹುಲಸೂರು ತಾಲೂಕು ಪಟ್ಟಣದಲ್ಲಿನ ದೇವನಾಳ ಬಡಾವಣೆಯ ಯುವರಾಜ್ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, 10 ಸಾವಿರ ನಗುದು ಸಹಿತ ಎರಡು ತೊಲ ಬಂಗಾರದ ಆಭರಣದೊಂದಿಗೆ ಖದೀಮರು ಪರಾರಿಯಾಗಿದ್ದಾರೆ.

ನಂತರ ಅದೆ ಬಡಾವಣೆ ಸಾಯಿ ಬಾಬಾ ಮಂದಿರದ ಹುಂಡಿ ಕಳುವಿಗೆ ಯತ್ನ ನಡೆಸಲಾಗಿದೆ. ದೇವಸ್ಥಾನದಲ್ಲಿದ್ದ ಸಿಸಿ ಟಿವಿಗಳನ್ನ ಗಮನಿಸಿದ ಕಳ್ಳರು ಹುಂಡಿ ಕಳ್ಳತನ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕಳ್ಳತನ ಮಾಹಿತಿ ತಿಳಿಯುತ್ತಿದಂತೆ ಸ್ವಾನದಳ ಹಸ್ತಾಕ್ಷರ ತಜ್ಞರಿಂದ ಪರಿಶೀಲನೆ ನಡೆಸಲಾಗಿದೆ. ಘಟನೆ ಸಂಬಂಧ ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us