AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ನೀನು ಜಗತ್ತಿನ ಬೆಸ್ಟ್​ ಅಮ್ಮ, ನನ್ನ ದೇವತೆ; ಸೂಸೈಡ್ ನೋಟ್ ಬರೆದಿಟ್ಟು 15ನೇ ಮಹಡಿಯಿಂದ ಹಾರಿದ ಬಾಲಕ

'ಇತರ ವಿದ್ಯಾರ್ಥಿಗಳು ತನ್ನನ್ನು ಸಲಿಂಗಕಾಮಿ ಎಂದು ಹೀಗಳೆಯುತ್ತಿದ್ದರು ಎಂದು ಸುಮಾರು ಒಂದು ವರ್ಷದ ಹಿಂದೆ ನನ್ನ ಮಗ ಹೇಳಿದ್ದ. ಅದೇ ಕಾರಣದಿಂದ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು' ಎಂದು ಮೃತ ಬಾಲಕನ ತಾಯಿ ಆರೋಪಿಸಿದ್ದಾರೆ.

Crime News: ನೀನು ಜಗತ್ತಿನ ಬೆಸ್ಟ್​ ಅಮ್ಮ, ನನ್ನ ದೇವತೆ; ಸೂಸೈಡ್ ನೋಟ್ ಬರೆದಿಟ್ಟು 15ನೇ ಮಹಡಿಯಿಂದ ಹಾರಿದ ಬಾಲಕ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Feb 25, 2022 | 7:03 PM

ಫರಿದಾಬಾದ್: ‘ನೀವು ನನಗಾಗಿ ನಿಮಗೇನು ಸಾಧ್ಯವೋ ಅದೆಲ್ಲವನ್ನೂ ಮಾಡಿದ್ದೀರಿ. ಆದರೆ ನಾನು ಧೈರ್ಯವಂತನಾಗಿರಲು ಸಾಧ್ಯವಾಗಲಿಲ್ಲ. ಅಮ್ಮಾ.. ನೀನು ಈ ಜಗತ್ತಿನಲ್ಲೇ ಬೆಸ್ಟ್​ ಅಮ್ಮ. ನಾನು ನಿಮ್ಮೆಲ್ಲರನ್ನೂ ಬಿಟ್ಟು ಹೋಗುತ್ತಿದ್ದೇನೆ. ನನ್ನ ಕ್ಷಮಿಸಿಬಿಡಿ’ ಎಂದು ಪತ್ರವೊಂದನ್ನು ಬರೆದಿಟ್ಟು ಫರಿದಾಬಾದ್‌ನ ಪ್ರಸಿದ್ಧ ಖಾಸಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹರಿಯಾಣದ ಗ್ರೇಟರ್ ಫರಿದಾಬಾದ್‌ನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನ 15ನೇ ಮಹಡಿಯಿಂದ ಹಾರಿ 15 ವರ್ಷದ ಬಾಲಕ ತನ್ನ ಜೀವನವನ್ನು ಕೊನೆಗೊಳಿಸಿದ್ದಾನೆ. ಆ ಬಾಲಕ ಡಿಸ್ಲೆಕ್ಸಿಯಾ (ಕಲಿಕೆಯ ಅಸ್ವಸ್ಥತೆ)ಯಿಂದ ಬಳಲುತ್ತಿದ್ದ. ತನಗೆ ಶಾಲೆಯ ಟೀಚರ್​ಗಳು, ಇತರೆ ಮಕ್ಕಳು ಹೆದರಿಸುತ್ತಿದ್ದರು, ಕಿರುಕುಳ ನೀಡುತ್ತಿದ್ದರು. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆ ಬಾಲಕ ಸೂಸೈಡ್ ನೋಟ್​​ನಲ್ಲಿ (Suicide Note) ಬರೆದಿದ್ದಾನೆ.

ಆ ಬಾಲಕ ಬರೆದಿರುವ ಸೂಸೈಡ್ ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದರಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಮತ್ತು ಇತರ ಮಕ್ಕಳು ತನಗೆ ಕಿರುಕುಳ ನೀಡಿ, ಬೆದರಿಸುತ್ತಿದ್ದರು ಎಂದು ಆತ ಆರೋಪಿಸಿದ್ದಾನೆ. ಗುರುವಾರ ರಾತ್ರಿ ಬಾಲಕ ತನ್ನ ಮನೆಯಲ್ಲಿ ಒಬ್ಬನೇ ಇದ್ದಾಗ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಅಕ್ಕಪಕ್ಕದವರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಚಿಕಿತ್ಸೆ ಪಡೆಯುತ್ತಿದ್ದಾಗಲೇ ಆತ ಸಾವನ್ನಪ್ಪಿದ್ದಾನೆ. ಈ ಘಟನೆಯು ಆತನ ಕುಟುಂಬವನ್ನು ದಿಗ್ಭ್ರಮೆಗೊಳಿಸಿದೆ ಮತ್ತು ಫರಿದಾಬಾದ್‌ನ ಪ್ರಸಿದ್ಧ ಖಾಸಗಿ ಶಾಲೆಯೊಂದರ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಸಂಬಂಧ ಪೊಲೀಸ್ ತನಿಖೆ ನಡೆಯುತ್ತಿದೆ.

ಸೂಸೈಡ್ ನೋಟ್​ನಲ್ಲೇನಿದೆ?: ‘ಪ್ರೀತಿಯ ಅಮ್ಮ, ನೀವೆಲ್ಲರೂ ನಿಮ್ಮ ಕೈಲಿ ಸಾಧ್ಯವಾಗಿದ್ದೆಲ್ಲವನ್ನೂ ನನಗೆ ಕೊಡಿಸಿದ್ದೀರಿ. ಅಮ್ಮಾ ನೀನು ಇಡೀ ಜಗತ್ತಿನ ಬೆಸ್ಟ್​ ಅಮ್ಮ. ನನ್ನ ಕ್ಷಮಿಸಮ್ಮಾ.. ನಾನು ಧೈರ್ಯವಂತನಲ್ಲ. ಈ ಶಾಲೆ ನನ್ನನ್ನು ಕೊಂದಿದೆ. ನಾನು ಈ ಜಗತ್ತಿನಲ್ಲಿ ಬದುಕಲು ಬಯಸುವುದಿಲ್ಲ. ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದೆ, ಆದರೆ ಇವರೆಲ್ಲರ ಕಿರುಕುಳದಿಂದ ನನಗೆ ಬದುಕಲು ಸಾಧ್ಯವಾಗುತ್ತಿಲ್ಲ. ಇದೆಲ್ಲವನ್ನೂ ನಿಮ್ಮ ಬಳಿ ಹೇಳಿಕೊಳ್ಳಲು ನನಗೆ ಧೈರ್ಯ ಸಾಕಾಗಲಿಲ್ಲ. ನಾನು ಇಲ್ಲ ಎಂದು ಬೇಸರಪಟ್ಟುಕೊಳ್ಳಬೇಡಿ. ದಯವಿಟ್ಟು ಬೇರೆ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಅಮ್ಮಾ ನೀನು ದೇವತೆ. ಈ ಜನ್ಮದಲ್ಲಿ ನಿನ್ನನ್ನು ಅಮ್ಮನಾಗಿ ಪಡೆದ ನಾನು ಧನ್ಯ. ನೀವು ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದರೂ ನಾನು ಧೈರ್ಯವಂತನಾಗಲೇ ಇಲ್ಲ. ನನ್ನ ದುರ್ಬಲತೆಯಿಂದ ನಾನು ಸಾಯುತ್ತಿದ್ದೇನೆ’ ಎಂದು ಆ ಬಾಲಕ ಪತ್ರದಲ್ಲಿ ಬರೆದಿದ್ದಾನೆ.

ಮೃತ ಬಾಲಕನ ತಾಯಿಯ ದೂರಿನ ಆಧಾರದ ಮೇಲೆ ಪೊಲೀಸರು ಖಾಸಗಿ ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದೇ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಬಾಲಕನ ತಾಯಿ ತನ್ನ ದೂರಿನಲ್ಲಿ, ‘ಇತರ ವಿದ್ಯಾರ್ಥಿಗಳು ತನ್ನನ್ನು ಸಲಿಂಗಕಾಮಿ ಎಂದು ಹೀಗಳೆಯುತ್ತಿದ್ದರು ಎಂದು ಸುಮಾರು ಒಂದು ವರ್ಷದ ಹಿಂದೆ ನನ್ನ ಮಗ ಹೇಳಿದ್ದ. ಅದೇ ಕಾರಣದಿಂದ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Crime News: ಪಬ್​ಜಿ ಆಡಲು ಹುಟ್ಟುಹಬ್ಬಕ್ಕೆ ಹೊಸ ಮೊಬೈಲ್ ಕೊಡಿಸಲಿಲ್ಲವೆಂದು ಯುವತಿ ಆತ್ಮಹತ್ಯೆ

Shocking News: ಪಾತ್ರೆ ತೊಳೆದಿಲ್ಲವೆಂದು ಬೈದಿದ್ದಕ್ಕೆ ಅಮ್ಮನನ್ನೇ ಬಾಣಲೆಯಿಂದ ಹೊಡೆದು ಕೊಂದ ಮಗಳು!

Published On - 7:03 pm, Fri, 25 February 22