Crime News: ಹಣ, ಚಿನ್ನ ದೋಚಿ ಪತ್ನಿ ಪರಾರಿ, ಸಿಎಂ ವಿಶೇಷ ಅಧಿಕಾರಿ ಎಂದು ವಂಚಿಸುತ್ತಿದ್ದ ಆರೋಪಿ ಬಂಧನ

Bengaluru Crime: ಮದುವೆ ಬಳಿಕ ವಾರದ ಹಿಂದೆಯಷ್ಟೇ ರಾಜಸ್ಥಾನದಿಂದ ಬೆಂಗಳೂರಿಗೆ ಬಂದು ದಂಪತಿಗಳು ವಾಸವಿದ್ದರು. ಇದೀಗ ಪತ್ನಿ ಇದ್ದಕ್ಕಿದ್ದಂತೆ ಹಣ, ಚಿನ್ನದೊಂದಿಗೆ ಪರಾರಿ ಆಗಿದ್ದಾರೆ. ಪರಾರಿಯಾದ ಪತ್ನಿ ಸೋನಿಯ ವಿರುದ್ಧ ಪತಿ ದೂರು ನೀಡಿದ್ದಾರೆ.

Crime News: ಹಣ, ಚಿನ್ನ ದೋಚಿ ಪತ್ನಿ ಪರಾರಿ, ಸಿಎಂ ವಿಶೇಷ ಅಧಿಕಾರಿ ಎಂದು ವಂಚಿಸುತ್ತಿದ್ದ ಆರೋಪಿ ಬಂಧನ
ಪ್ರಾತಿನಿಧಿಕ ಚಿತ್ರ
Edited By:

Updated on: Dec 15, 2021 | 8:59 PM

ನೆಲಮಂಗಲ: ಮದುವೆಯಾದ 15 ದಿನದಲ್ಲೇ ಹಣ, ಚಿನ್ನ ದೋಚಿ ಪತ್ನಿ ಪರಾರಿಯಾದ ಘಟನೆ ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ನಡೆದಿದೆ. ಹಣ, ಚಿನ್ನ ದೋಚಿ ರಾಜಸ್ಥಾನದ ಸೋನಿಯಾ ಪರಾರಿ ಆಗಿದ್ದಾರೆ. ಮ್ಯಾರೇಜ್ ದೋಖಾದಿಂದ ಬಾವರ್ ಲಾಲ್ ಕಂಗಾಲಾಗಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಗೆ ಪತಿ ಬಾವರ್ ಲಾಲ್ ದೂರು ನೀಡಿದ್ದಾರೆ.

ಚಿನ್ನದ ಒಡವೆ ಸೇರಿದಂತೆ ಒಂದುವರೆ ಲಕ್ಷಕ್ಕೂ ಹೆಚ್ಚು ನಗದಿನೊಂದಿಗೆ ಪತ್ನಿ ಪರಾರಿ ಆಗಿದ್ದಾರೆ. ಧಾರ್ಮಿಕ ವಿಧಿ- ವಿಧಾನಗಳ ಮೂಲಕವೇ 15 ದಿನದ ಹಿಂದೆ ಇಬ್ಬರೂ ಮದುವೆಯಾಗಿದ್ದರು. ಬೆಂಗಳೂರಿನ ದಾಸರಹಳ್ಳಿಯಲ್ಲಿ ಸೂಪರ್ ಮಾರ್ಕೆಟ್ ನಡೆಸುತ್ತಿದ್ದ ಪತಿ ಬಾವರ್ ಲಾಲ್ ವಿವಾಹ ನಡೆದಿತ್ತು. ಮದುವೆ ಬಳಿಕ ವಾರದ ಹಿಂದೆಯಷ್ಟೇ ರಾಜಸ್ಥಾನದಿಂದ ಬೆಂಗಳೂರಿಗೆ ಬಂದು ದಂಪತಿಗಳು ವಾಸವಿದ್ದರು. ಇದೀಗ ಪತ್ನಿ ಇದ್ದಕ್ಕಿದ್ದಂತೆ ಹಣ, ಚಿನ್ನದೊಂದಿಗೆ ಪರಾರಿ ಆಗಿದ್ದಾರೆ. ಪರಾರಿಯಾದ ಪತ್ನಿ ಸೋನಿಯ ವಿರುದ್ಧ ಪತಿ ದೂರು ನೀಡಿದ್ದಾರೆ.

ಸಿಎಂ ಸ್ಪೆಷಲ್ ಆಫೀಸರ್ ಎಂದು ವಂಚಿಸುತ್ತಿದ್ದ ಆರೋಪಿ ಬಂಧನ
ಸಿಎಂ ಸಚಿವಾಲಯದ ಅಧಿಕಾರಿ ಎಂದು ವಸೂಲಿಗಿಳಿದಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಸಿಸಿಬಿ ಪೊಲೀಸರಿಂದ ಉದಯಪ್ರಭು ಬಂಧನ ಮಾಡಲಾಗಿದೆ. ಸಿಎಂ ಸ್ಪೆಷಲ್ ಆಫೀಸರ್ ಎಂದು ವಂಚಿಸುತ್ತಿದ್ದ ಆರೋಪಿಯನ್ನು ಬಂಧನ ಮಾಡಲಾಗಿದೆ. ಮೂಲತಃ ಚಿಕ್ಕಬಳ್ಳಾಪುರದವನಾಗಿರುವ ವಂಚಕ ಉದಯಪ್ರಭು, ಬೆಂಗಳೂರಿನ ಮೈಲಸಂದ್ರ ಬಳಿ ವಾಸವಿದ್ದ ಎಂದು ತಿಳಿದುಬಂದಿದೆ. ಬಿನ್ನಿಮಿಲ್ ಬಳಿ ಬಾಳೆಕಾಯಿ ಮಂಡಿ ನಡೆಸ್ತಿದ್ದ ಉದಯಪ್ರಭು ವರ್ಗಾವಣೆ ಮಾಡಿಸಿಕೊಡೋದಾಗಿ ಹೇಳಿ ಕೋಟಿ-ಕೋಟಿ ವಂಚಿಸ್ತಿದ್ದ ಎಂದು ತಿಳಿದುಬಂದಿದೆ. IAS, IPS, Dysp ಹೀಗೆ ಎಲ್ಲಾ ಇಲಾಖೆಯಲ್ಲೂ ವರ್ಗಾವಣೆ ಮಾಡಿ ಕೊಡುತ್ತೇನೆ. ಮಾಜಿ ಸಿಎಂ ಒಬ್ಬರ ತಂಗಿ ಮಗನ ಸ್ನೇಹಿತ ಎಂದಿರುವ ಆರೋಪಿಯನ್ನು ಬಂಧಿಸಲಾಗಿದೆ.

ಕಾರಿಗೆ ಕರ್ನಾಟಕ ಸರ್ಕಾರ ಎಂದು ಬೋರ್ಡ್ ಹಾಕಿಕೊಂಡು ಓಡಾಡ್ತಿದ್ದ ಉದಯಪ್ರಭುವನ್ನು ಅನುಮಾನಗೊಂಡು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿಯ ಕಳ್ಳಾಟ ಬಯಲಾಗಿದೆ. ಸದ್ಯ ಸಿಸಿಬಿ ಪೊಲೀಸರ ವಶದಲ್ಲಿರುವ ಆರೋಪಿಯ ಬಳಿಯಿಂದ ಆರೋಪಿ ಬಳಸುತ್ತಿದ್ದ ನಕಲಿ ಐಡಿ ಕಾರ್ಡ್, 1 ಇನೋವಾ ಹಾಗೂ 1 ಜಾಗ್ವಾರ್ ಕಾರ್ ವಶಕ್ಕೆ ಪಡೆಯಲಾಗಿದೆ. ಬಂಧಿತನ ಕಾರಿನಲ್ಲಿದ್ದ 1.20 ಲಕ್ಷ ನಗದು, 3 ಐಫೋನ್, 1 ಮ್ಯಾಕ್‌ಬುಕ್‌ ವಶಪಡಿಸಲಾಗಿದೆ.

ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟನೆ
ಬೆಂಗಳೂರು ಸಿಸಿಬಿ ಪೊಲೀಸರು ಸಿಎಂ ಕಚೇರಿಯ ವಿಶೇಷ ಅಧಿಕಾರಿ ಎಂದು ಹೇಳಿಕೊಳ್ಳುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ‌ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟನೆ ನೀಡಿದ್ದಾರೆ. ತನ್ನ ಕಾರುಗಳ ಮೇಲೆ ಸರ್ಕಾರದ ಲಾಂಛನ ಹಾಕಿದ್ದ ಆರೋಪಿ, ಬಂಧಿತ ಆರೋಪಿಯ ಬಳಿ ನಕಲಿ‌ ಐಡಿ ಕಾರ್ಡ್ ಸಹ ಸಿಕ್ಕಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು ದೂರು ನೀಡಬಹುದು. ಯಾರಾದರೂ ವಂಚನೆಗೊಳಗಾಗಿದ್ದರೆ ದೂರು ನೀಡಬಹುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ.

ಹಾವೇರಿ: ಏಳು ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆ ಕಿಡ್ನ್ಯಾಪ್‌
ಏಳು ಎಕರೆ ಆಸ್ತಿಗಾಗಿ 98 ವರ್ಷದ ವೃದ್ಧೆಯನ್ನು ಅಪಹರಣ ಮಾಡಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡದಲ್ಲಿ ನಡೆದಿದೆ. ಬಾಳಂಬೀಡದಲ್ಲಿ ದೇವಕ್ಕ ದುಂಡಣ್ಣನವರ ಅಪಹರಣ ಮಾಡಲಾಗಿದೆ. ವೃದ್ಧೆ ಸಂಬಂಧಿಕರಾದ ಸಂತೋಷ್‌, ಈರಪ್ಪ, ಆದಪ್ಪ, ಪ್ರಕಾಶ್‌, ಮಂಜಪ್ಪ ಎಂಬುವವರ ವಿರುದ್ಧ ಆರೋಪ ಕೇಳಿಬಂದಿದೆ.

ವೃದ್ಧೆ ದೇವಕ್ಕ ದುಂಡಣ್ಣನವರಿಗೆ ಸಂತಾನ ಇರಲಿಲ್ಲ. ಹೀಗಾಗಿ ಜಮೀನನ್ನು ಮಾಣಿಕಪ್ಪ‌ ಎಂಬವರಿಗೆ ವೃದ್ಧೆ ಬರೆದು ಕೊಟ್ಟಿದ್ದರು. ಮಾಣಿಕಪ್ಪ, ವೃದ್ಧೆಯನ್ನ ಆರೈಕೆ ಮಾಡಿಕೊಂಡು ಬಂದಿದ್ದರು. ಬಳಿಕ, ಮಾಣಿಕಪ್ಪ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇದೀಗ ಮನೆಯವರು ಜಮೀನಿಗೆ ಹೋಗಿದ್ದಾಗ ಕೃತ್ಯ ನಡೆದಿದೆ. ನಿನ್ನೆ ಆರೋಪಿಗಳು ವೃದ್ಧೆಯನ್ನು ಕಿಡ್ನಾಪ್ ಮಾಡಿದ್ದಾರೆ. ಮಾಣಿಕಪ್ಪನ ಪುತ್ರ ಭರತೇಶ್ ಎಂಬುವರಿಂದ ದೂರು ದಾಖಲು ಮಾಡಲಾಗಿದೆ. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Crime News: ಅಪ್ರಾಪ್ತೆ ಅತ್ಯಾಚಾರ; ಮೂವರ ಬಂಧನ, ಆತ್ಮಹತ್ಯೆಗೆ ಯತ್ನಿಸಿದ್ದ ಪತ್ನಿ ಸಾವಿನ ಸುದ್ದಿ ತಿಳಿದು ಪತಿ ನೇಣಿಗೆ ಶರಣು

ಇದನ್ನೂ ಓದಿ: ಚಿತ್ರದುರ್ಗ: ಚಿಂದಿ ಆಯುತ್ತಿದ್ದ ಮಹಿಳೆಯರಿಬ್ಬರು ರೈಲು ಹರಿದು ಸಾವು

Web contact

TV9 Kannada

Read More
Follow Us