ರಾಮನಗರ: ಕೊಟ್ಟ ಸಾಲ ವಾಪಸ್​ ಕೇಳಿದ್ದಕ್ಕೆ ಕೊಲೆ ಮಾಡಿ ಶವ ಹೂತಿಟ್ಟ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 05, 2024 | 9:21 PM

ರಾಮನಗರ ಜಿಲ್ಲೆಯ ಕನಕಪುರ (Kanakapura) ತಾಲೂಕಿನ ಶ್ರೀನಿವಾಸನಹಳ್ಳಿ ಗ್ರಾಮದಲ್ಲಿ ಕೊಟ್ಟ ಸಾಲ ವಾಪಸ್​ ಕೇಳಿದ್ದಕ್ಕೆ ಕೊಲೆ (Murder) ಮಾಡಿ ಶವವನ್ನು ಹೂತಿಟ್ಟ ಭಯಾನಕ ಘಟನೆ ನಡೆದಿದೆ. ಈ ಕುರಿತು ಕನಕಪುರ ಗ್ರಾಮಾಂತರ‌ ಠಾಣೆಯಲ್ಲಿ‌ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಪತ್ತೆಗಾಗಿ‌ ಬಲೆ ಬೀಸಿದ್ದಾರೆ.

ರಾಮನಗರ: ಕೊಟ್ಟ ಸಾಲ ವಾಪಸ್​ ಕೇಳಿದ್ದಕ್ಕೆ ಕೊಲೆ ಮಾಡಿ ಶವ ಹೂತಿಟ್ಟ
ಮೃತ ಮಹಿಳೆ
Follow us on

ರಾಮನಗರ, ಜೂ.05: ಕೊಟ್ಟ ಸಾಲ ವಾಪಸ್​ ಕೇಳಿದ್ದಕ್ಕೆ ಕೊಲೆ(Murder) ಮಾಡಿ ಶವವನ್ನು ಹೂತಿಟ್ಟ ಘಟನೆ ರಾಮನಗರ ಜಿಲ್ಲೆಯ ಕನಕಪುರ (Kanakapura) ತಾಲೂಕಿನ ಶ್ರೀನಿವಾಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸುನಂದಮ್ಮ(55)‌ಕೊಲೆಯಾದ ಮಹಿಳೆ. ಒಂದು ವರ್ಷದ ಹಿಂದೆ ಸುನಂದಮ್ಮ ಬಳಿ ಸಾಲ ಪಡೆದಿದ್ದ ಆರೋಪಿ ರವಿಕುಮಾರ್(43)‌​ 20‌ ಸಾವಿರ ಸಾಲ‌ ಪಡೆದುಕೊಂಡಿದ್ದ. ಒಂದು ವರ್ಷವಾದರೂ ಆತ ಹಣ ಹಿಂತಿರುಗಿಸಿ ಕೊಟ್ಟಿಲ್ಲ. ಹೀಗಾಗಿ ನಿನ್ನೆ(ಜೂ.04) ಸಾಲ ತೀರಿಸುವುದಾಗಿ ಸುನಂದಮ್ಮ ಅವರನ್ನು ಟಿ ಗೊಲ್ಲಹಳ್ಳಿಗೆ ರವಿ ಕರೆದಿದ್ದ.

ಕೊನೆಗೂ ನನ್ನ ಹಣ ಸಿಗುವುದು ಎಂಬ ಆಶೆಯಿಂದ ರವಿ ಕರೆದ ಕಾರಣಕ್ಕೆ ಸುನಂದಮ್ಮ ತೆರಳಿದ್ದರು. ಆದರೆ ರಾತ್ರಿ‌ಯಾದರೂ ಸುನಂದಮ್ಮ ಮನೆಗೆ ಹಿಂತುರಿಗರಲಿಲ್ಲ. ಈ ಕುರಿತು ಕನಕಪುರ ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ‌ ದಾಖಲಾಗಿತ್ತು. ಬಳಿಕ ವೆಂಕಟೇಶ್ ನಾಯಕ ಎಂಬುವವರ ತೋಟದಲ್ಲಿ ಮಣ್ಣು ತೋಡುವ ಚನಕೆ, ಸಲಾಕೆ ಕಾಣಿಸುತ್ತಿರಲಿಲ್ಲ. ಹೀಗಾಗಿ ಅವರು ಹುಡುಕಿದ್ದಾರೆ. ಈ ವೇಳೆ ತೋಟದ ಮೂಲೆಯೊಂದರಲ್ಲಿ ಈ ಚನಕೆ ಕಾಣಿಸಿದೆ. ಅದನ್ನು ತರಲು ಹೋದಾಗ ಪಕ್ಕದಲ್ಲೇ ಅರ್ಧಂಬರ್ಧ ತೋಡಿದ ಗುಂಡಿಯಲ್ಲಿ ಶವದ ಕೂದಲು ಪತ್ತೆಯಾಗಿದೆ.

ಇದನ್ನೂ ಓದಿ:ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ, ಕುಟುಂಬದಿಂದಲೇ ಕೊಲೆಗೆ ಯತ್ನ; ಪೊಲೀಸರ ಸಮಯ ಪ್ರಜ್ಞೆಯಿಂದ ಉಳಿತು ಜೀವ

ಈ ವೇಳೆ ಗಾಬರಿಗೊಂಡು ಇನ್ನಷ್ಟು ಗುಂಡಿ ತೋಡಿದಾಗ ಸುನಂದಮ್ಮ‌ ಶವ ಸಿಕ್ಕಿದೆ. ಇದೀಗ ಆರೋಪಿ ರವಿಕುಮಾರ್ ಮೇಲೆ ಸುನಂದಮ್ಮನನ್ನ ಕೊಲೆ ಮಾಡಿ ಪರಾರಿ ಆಗಿರುವ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಆರೋಪಿ ಪತ್ತೆಗಾಗಿ‌ ಕನಕಪುರ ಪೊಲೀಸರು ಬಲೆ ಬೀಸಿದ್ದಾರೆ. ಇತ್ತ ತಹಶೀಲ್ದಾರ್ ಹಾಗೂ ಡಿವೈಎಸ್ಪಿ ನೇತೃತ್ವದಲ್ಲಿ ಶವ ಪರೀಕ್ಷೆ ನಡೆಯುತ್ತಿದೆ. ಈ ಕುರಿತು ಕನಕಪುರ ಗ್ರಾಮಾಂತರ‌ ಠಾಣೆಯಲ್ಲಿ‌ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ