ಕೇರಳ: ತಪಾಸಣೆಗೆಂದು ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಬಂದ ಆರೋಪಿಯಿಂದ ಇರಿತ; ವೈದ್ಯೆ ಸಾವು

Vandana Das Murder:ಸಂದೀಪ್ ಗಾಯಕ್ಕೆ ಚಿಕಿತ್ಸೆ ನೀಡುತ್ತಿರುವಾಗ ಆತ ಆಸ್ಪತ್ರೆಯ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಶಸ್ತ್ರಚಿಕಿತ್ಸೆಯ ಕತ್ತರಿಯನ್ನು ಕೈಗೆತ್ತಿಕೊಂಡಿದ್ದಾನೆ. ಈ ಕತ್ತರಿಯಿಂದ ಆತ ವೈದ್ಯೆ ವಂದನಾಳ ಎದೆಗೆ ಮತ್ತು ಕುತ್ತಿಗೆಗೆ ಪದೇ ಪದೇ ಇರಿದಿದ್ದಲ್ಲದೆ ಆಸ್ಪತ್ರೆಗೆ ಕರೆದೊಯ್ದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾನೆ.

ಕೇರಳ: ತಪಾಸಣೆಗೆಂದು ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಬಂದ ಆರೋಪಿಯಿಂದ ಇರಿತ; ವೈದ್ಯೆ ಸಾವು
ಡಾ. ವಂದನಾ ದಾಸ್
ರಶ್ಮಿ ಕಲ್ಲಕಟ್ಟ

Updated on: May 10, 2023 | 1:53 PM

ಕೊಲ್ಲಂ: ಕೇರಳದ (Kerala) ಕೊಲ್ಲಂನ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯೆಯೊಬ್ಬರನ್ನು(Doctor) ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆತಂದ ಶಾಲಾ ಶಿಕ್ಷಕನೊಬ್ಬ ಬುಧವಾರ ಕತ್ತರಿಯಿಂದ ಇರಿದು ಕೊಂದಿರುವ ಘಟನೆ ವರದಿ ಆಗಿದೆ. ಕೊಟ್ಟಾರಕ್ಕರ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಂದನಾ ದಾಸ್ (23) (Vandana Das)ಎಂಬ ವೈದ್ಯೆಯ ಎದೆ ಮತ್ತು ಕತ್ತಿನ ಮೇಲೆ ಆರೋಪಿ ಅನೇಕ ಬಾರಿ ಇರಿದಿದ್ದಾನೆ. ಗಂಭೀರ ಗಾಯಗೊಂಡ ವಂದನಾ ಅವರನ್ನು ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರು ಸಾವಿಗೀಡಾಗಿದ್ದಾರೆ.

42ರ ಹರೆಯದ ಆರೋಪಿ ಎಸ್ ಸಂದೀಪ್  ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ. ಈತ ಪೊಲೀಸರು ಸೇರಿದಂತೆ ಆಸ್ಪತ್ರೆಯಲ್ಲಿ ಇತರ ನಾಲ್ವರ ಮೇಲೆ ಹಲ್ಲೆ ನಡೆಸಿದ್ದಾನೆ. ವೈದ್ಯಕೀಯ ಪರೀಕ್ಷೆಗಾಗಿ ಪೊಲೀಸರು ಈತನನ್ನು ಆಸ್ಪತ್ರೆಗೆ ಕರೆತಂದಿದ್ದರು.

ಪೊಲೀಸರ ಪ್ರಕಾರ, ಮಂಗಳವಾರ ರಾತ್ರಿ ಸಂದೀಪ್ ಸಿಟ್ಟುಗೊಂಡು ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ ನಂತರ ಆತನನ್ನು ಆತನ ಮನೆಯಿಂದ ಬಂಧಿಸಲಾಯಿತು. ಸಂದೀಪ್ ಅವರ ಹಿಂಸಾತ್ಮಕ ವರ್ತನೆಯ ಬಗ್ಗೆ ಅವರ ಕುಟುಂಬ ಸದಸ್ಯರು ದೂರು ನೀಡಿದ್ದರು.

ಇದನ್ನೂ ಓದಿ: Kerala boat tragedy: ಬೋಟ್​​ನ ಗಾಜು ಕೈಯಿಂದಲೇ ಒಡೆದು 7 ಜನರನ್ನು ರಕ್ಷಿಸಿದ ರಶೀದ್, ತಾನೂರಿನ ಸ್ಥಳೀಯರೇ ರಿಯಲ್ ಹೀರೋಗಳು

ಸಂದೀಪ್ ಕಾಲಿಗೆ ಸಣ್ಣ ಗಾಯವಾಗಿದ್ದರಿಂದ, ಪೊಲೀಸ್ ತಂಡವು ಅವರನ್ನು ಕಡ್ಡಾಯ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ದಿತ್ತು. ಅಲ್ಲಿ ಆತ ಯಾವುದೇ ಪ್ರಚೋದನೆಯಿಲ್ಲದೆ ಹಲ್ಲೆ ನಡೆಸಿದ್ದಾನೆ. ಸಂದೀಪ್ ಗಾಯಕ್ಕೆ ಚಿಕಿತ್ಸೆ ನೀಡುತ್ತಿರುವಾಗ ಆತ ಆಸ್ಪತ್ರೆಯ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಶಸ್ತ್ರಚಿಕಿತ್ಸೆಯ ಕತ್ತರಿಯನ್ನು ಕೈಗೆತ್ತಿಕೊಂಡಿದ್ದಾನೆ. ಈ ಕತ್ತರಿಯಿಂದ ಆತ ವೈದ್ಯೆ ವಂದನಾಳ ಎದೆಗೆ ಮತ್ತು ಕುತ್ತಿಗೆಗೆ ಪದೇ ಪದೇ ಇರಿದಿದ್ದಲ್ಲದೆ ಆಸ್ಪತ್ರೆಗೆ ಕರೆದೊಯ್ದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾನೆ.

ಕೇರಳ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘ (ಕೆಜಿಎಂಒಎ), ರಾಜ್ಯದ ಸರ್ಕಾರಿ ವೈದ್ಯರ ಸಂಘಟನೆಯು ಹತ್ಯೆಯ ವಿರುದ್ಧ ಪ್ರತಿಭಟನೆ ನಡೆಸಿದೆ. KGMOA ಕೊಲ್ಲಂ ಜಿಲ್ಲೆಯಲ್ಲಿ ಮುಷ್ಕರ ಘೋಷಿಸಿದೆ.

ಆರೋಪಿ ಮಾದಕವಸ್ತು ವ್ಯಸನಿ

ಕೊಟ್ಟಾರಕ್ಕರದಲ್ಲಿ ಕರ್ತವ್ಯದ ವೇಳೆವೈದ್ಯೆಯೊಬ್ಬರನ್ನು ಇರಿದು ಕೊಂದ ಪ್ರಕರಣದ ಆರೋಪಿ ಶಿಕ್ಷಕ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ನೆಡುಂಪಣ ಯು.ಪಿ ಶಾಲಾ ಶಿಕ್ಷಕ ಎಂದು ಪೊಲೀಸರು ತಿಳಿಸಿದ್ದಾರೆ. ಮಾದಕ ವ್ಯಸನದಿಂದಾಗಿ ಆತನನ್ನು ಅಮಾನತುಗೊಳಿಸಲಾಗಿತ್ತು. ಈತ ಇತ್ತೀಚೆಗಷ್ಟೇ ಡಿ-ಅಡಿಕ್ಷನ್ ಸೆಂಟರ್ ನಿಂದ ಹೊರಬಂದಿದ್ದ . ಈ ನಡುವೆ ಮನೆಯಲ್ಲಿ  ಜಗಳ ನಡೆದಿದ್ದು, ಆತನ ಕಾಲಿಗೆ ಗಾಯವಾಗಿತ್ತು.

ಬುಧವಾರ  ಮುಂಜಾನೆ 4:30ರ ಸುಮಾರಿಗೆ ಈ ಘಟನೆ ನಡೆದಿದೆ. ಆಸ್ಪತ್ರೆಯಲ್ಲೂ ಕುಪಿತನಾದ ಆರೋಪಿ ಡ್ರೆಸ್ಸಿಂಗ್ ರೂಂನಲ್ಲಿದ್ದ ಕತ್ತರಿ ತೆಗೆದುಕೊಂಡು ತನ್ನೊಂದಿಗೆ ಬಂದಿದ್ದ ಸಂಬಂಧಿ ಬಿನು ಎಂಬಾತನಿಗೆ ಚಾಕುವಿನಿಂದ ಇರಿದಿದ್ದಾನೆ. ನಂತರ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಆ ಹೊತ್ತಲ್ಲಿ ಎಲ್ಲರೂ ಓಡಿ ಹೋದರು. ಡ್ರೆಸ್ಸಿಂಗ್ ರೂಂನಲ್ಲಿ ವೈದ್ಯೆ ಮಾತ್ರ ಬಾಕಿಯಾಗಿ ಬಿಟ್ಟರು. ಆಗ ಸಂದೀಪ್, ವೈದ್ಯೆಯ  ಕುತ್ತಿಗೆ, ಹೊಟ್ಟೆಗೆ ಹಲವು ಹಾರಿ ಇರಿದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:36 pm, Wed, 10 May 23

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us