ಮಣ್ಣಿನ ಮೋಹಕ್ಕೆ ಹೊಲದಲ್ಲಿ ಕೊಲೆಯಾದ ಮಹಿಳೆ, ಡೇಟ್ ಫಿಕ್ಸ್ ಮಾಡಿ‌ ಹೊಡಿತೀನಿ ಎಂದಿದ್ದ ಹಂತಕ! ಯಾಕೆ?

| Updated By: ಸಾಧು ಶ್ರೀನಾಥ್​

Updated on: Jan 25, 2024 | 12:41 PM

ಮುಂಗೋಪಿಯಾಗಿದ್ದ ಗೌರಮ್ಮ, ಜಮೀನು ವಿಚಾರದಲ್ಲಿ ಕೊಂಚ ಕಠೋರವಾಗಿ ವರ್ತನೆ ಮಾಡ್ತಿದ್ಳು ಅಂತ ಕೆಲವರು ವಾದಿಸಿದರೇ ಈಗಿನ ಜಮಾನಾದಲ್ಲಿ ಅಮೂಲ್ಯ ಜಮೀನು ವಿಚಾರದಲ್ಲಿ ಸುಮ್ಮನೆ ಇರೋರು ಯಾರು ಎಂಬ ಸಬೂಬನ್ನು ಕೆಲ ಗ್ರಾಮಸ್ಥರು ಕೊಟ್ಟಿದ್ದಾರೆ. ಮಣ್ಣಿನ ಮೋಹಕ್ಕೆ ಹೊಲದಲ್ಲಿಯೇ ಬರ್ಬರವಾಗಿ ಕೊಲೆಯಾದ ಹೆಣ್ಣುಮಗಳ ಕತೆಯಿದು.

ಮಣ್ಣಿನ ಮೋಹಕ್ಕೆ ಹೊಲದಲ್ಲಿ ಕೊಲೆಯಾದ ಮಹಿಳೆ, ಡೇಟ್ ಫಿಕ್ಸ್ ಮಾಡಿ‌ ಹೊಡಿತೀನಿ ಎಂದಿದ್ದ ಹಂತಕ! ಯಾಕೆ?
ಮಣ್ಣಿನ ಮೋಹಕ್ಕೆ ಕೊಲೆಯಾದ ಮಹಿಳೆ, ಡೇಟ್ ಫಿಕ್ಸ್ ಮಾಡಿ‌ ಹತ್ಯೆ ಮಾಡಿಬಿಟ್ಟ
Follow us on

ಅಲ್ಲಿ ಜಮೀನು ವಿಚಾರಕ್ಕೆ ಪದೇ ಪದೇ ಕಿರಿಕ್ ನಡೀತಿತ್ತು. ಎಂಟು ಗುಂಟೆ ಜಮೀನು ತನ್ನ ವಶಕ್ಕೆ ಪಡೆಯಲು ಆ ಮಹಿಳೆ ಬುಲ್ಡೋಜರ್ ತಂದಿದ್ಳು ಅಷ್ಟೇ… ಅದೇ‌ ಕಾರಣಕ್ಕೆ ಸಿಟ್ಟಿಗೆದ್ದ ಆತ ಮನಸೋ ಇಚ್ಛೆ ಮಹಿಳೆಯನ್ನು ಕೊಚ್ಚಿ ಕೊಚ್ಚಿ ಕೊಲೆ ಮಾಡಿದ್ದಾನೆ.

ಒಂದು ಕಡೆ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಇಡೀ ಊರಿನಲ್ಲಿ ಸಂಭ್ರಮ ಮನೆ ಮಾಡಿತ್ತು.‌ ಹೀಗಿದ್ದಾಗ ಊರಿನ ಕೂಗಳತೆ ದೂರದಲ್ಲಿರುವ ಹೊಲದಲ್ಲಿ ಯಾರೋ ಕೂಗಾಡಿದ ಶಬ್ದ ಕೇಳಿ ಬಂದಿತು. ಏನಾಗಿದೆ ಅಂತ ಸ್ಥಳೀಯರು ಓಡಿ ಬಂದು ನೋಡುವಷ್ಟರಲ್ಲಿ ಅಲ್ಲಿ ಮಹಿಳೆಯೊಬ್ಬಳನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಮಹಿಳೆಯ ತಲೆ‌ ಹಾಗೂ ಕೈಗೆ ಮಾರಾಣಾಂತಿಕ ಗಾಯವಾಗಿತ್ತು. ತಲೆಯಿಂದ ರಕ್ತ ಕೋಡಿಯಾಗಿ ಸುರಿದ ಪರಿಣಾಮ ಆ ಮಹಿಳೆ ಸ್ಥಳದಲ್ಲೇ‌ ಕೊನೆಯುಸಿರೆದಿದ್ದಳು.

ಹೀಗೆ ಬರ್ಬರವಾಗಿ ಕೊಲೆಯಾದ ಮಹಿಳೆ ಬೇರಾರು ಅಲ್ಲ, ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೊಟ್ಟಗಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭದ್ರೇಗೌಡನದೊಡ್ಡಿಯ 55 ವರ್ಷದ ಗೌರಮ್ಮ. ಹೌದು.. ಊರಿಗೆಲ್ಲಾ ನ್ಯಾಯ ಹೇಳ್ತಾ, ತಾನು ಹೇಳಿದ್ದೇ ನಡೆಯಬೇಕು ಅನ್ನೋ ಛಲವಿಟ್ಟುಕೊಂಡಿದ್ದ ಗೌರಮ್ಮ, ತನ್ನದೇ ಹೊಲದಲ್ಲಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾಳೆ.

ಎಂಟು ಗುಂಟೆ ಜಾಗದ ವಿಚಾರಕ್ಕಾಗಿ ನಡೀತಿದ್ದ ಗಲಾಟೆ ಕೊನೆಗೂ ಕೊಲೆಯಲ್ಲಿಯೇ ಅಂತ್ಯವಾಗಿದೆ. ಗೌರಮ್ಮ ಕೊಲೆಯಿಂದಾಗಿ ಇಡೀ ಭದ್ರೇಗೌಡನದೊಡ್ಡಿಯಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ಯಾಕಂದ್ರೆ ಜಮೀನು ವಿಚಾರಕ್ಕೆ ಕೂತು ಬಗೆಹರಿಸಿಕೊಳ್ಳುವ ತಾಳ್ಮೆ ವಹಿಸಬೇಕಿದ್ದ ಊರಿನಲ್ಲಿ ಅದೇ ಜಾಗಕ್ಕಾಗಿ ಮಹಿಳೆ ಕೊಲೆ ನಡೆದಿರೋದು ಆತಂಕವನ್ನುಂಟು ಮಾಡಿದೆ.

ಇದನ್ನೂ ಓದಿ: ಜಿರಳೆಗಿಡುವ ವಿಷವನ್ನು ಕಂದನಿಗಿಟ್ಟ ತಾಯಿ! ಚಿಕಿತ್ಸೆ ಫಲಕಾರಿ ಆಗದೇ 3 ವರ್ಷದ ಮಗು ಸಾವು

ಸಭದ್ರೇಗೌಡನದೊಡ್ಡಿ ಗ್ರಾಮದ ಗೌರಮ್ಮಗೆ ಮೂರು ಜನ ಮಕ್ಕಳು, ಒಬ್ಬ ಗಂಡು ಇಬ್ಬರು ಹೆಣ್ಣು ಮಕ್ಕಳು. ಇಬ್ಬರೂ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದ ಗೌರಮ್ಮ, ಮಗನಿಗಾಗಿ ಮದುವೆ ಮಾಡಿಸಲು ಹೆಣ್ಣು ಹುಡುಕಾಟದಲ್ಲಿದ್ದಳು. ಐದು ವರ್ಷದ ಹಿಂದೆ ಗಂಡ ಕೃಷ್ಣಪ್ಪ ತೀರಿಕೊಂಡಿದ್ದ ಕಾರಣ ಮನೆ ಯಜಮಾನಿ ಸ್ಥಾನದಲ್ಲಿ ನಿಂತು ಎಲ್ಲವನ್ನು ತಾನೇ ಮುಂದುನಿಂತು ಮಾಡುತ್ತಿದ್ದಳು.

ಆದರೆ ಮಾತಿನಲ್ಲಿ ಮುಂಗೋಪಿಯಾಗಿದ್ದ ಗೌರಮ್ಮ, ಜಮೀನು ವಿಚಾರದಲ್ಲಿ ಕೊಂಚ ಕಠೋರವಾಗಿ ವರ್ತನೆ ಮಾಡ್ತಿದ್ಳು ಅಂತ ಕೆಲವರು ವಾದಿಸಿದರೇ ಈಗಿನ ಜಮಾನಾದಲ್ಲಿ ಅಮೂಲ್ಯ ಜಮೀನು ವಿಚಾರದಲ್ಲಿ ಸುಮ್ಮನೆ ಇರೋರು ಯಾರು ಎಂಬ ಸಬೂಬನ್ನು ಕೆಲ ಗ್ರಾಮಸ್ಥರು ಕೊಟ್ಟಿದ್ದಾರೆ. ‌ಅದೆನೇ‌ ಇರಲಿ 25 ಗುಂಟೆ ಜಮೀನಿನಲ್ಲಿ‌ಎಂಟು ಗುಂಟೆ ತನಗೆ ಸೇರಿದ್ದು, ಅದನ್ನು ಕೂಡಲೇ ನನ್ನ ಹೊಲಕ್ಕೆ‌ ಬಿಟ್ಟು ಕೊಡು ಎಂದು ಹೇಳಿದ್ದ ಗೌರಮ್ಮ ತಾನೇ ಒತ್ತುವರಿ ಮಾಡೋದಾಗಿ ಹೇಳಿ ಬುಲ್ಡೋಜರ್ ಕಾರ್ಯ ಶುರುಮಾಡಿಸಿದ್ದಾಳೆ.

ಇದನ್ನು ಕಂಡು ತನ್ನ ಹೊಲದಲ್ಲಿ ತನಗೇ ಒತ್ತುವರಿ ಮಾಡ್ತಿದ್ದಾರಲ್ಲಾ ಅಂತ‌ ಕೆಂಡವಾಗಿ ಆತ ಕೊಲೆ ಮಾಡಲು ನಿರ್ಧರಿಸಿದ್ದಾನೆ. ಇದೇ ತಿಂಗಳ‌ 19‌ನೇ‌ ತಾರಿಖು ಶುಕ್ರವಾರದಂದು ಬೆಳಿಗ್ಗೆ ಮನೆಯಿಂದ ಕುಡುಕೋಲು ತೆಗೆದುಕೊಂಡು ಹೊರಟ ಸ್ವಾಮಿ, ಇಂದು ಅವಳ ಕಥೆಯೇ ಮುಗಿಸಿಯೇ ಬಿಡುತ್ತೇನೆ ಅಂತ ಬುಸುಗುಟ್ಟಿ ಹೊರ‌ನಡೆದಿದ್ದಾನೆ.

ಅತ್ತ ಹೊಲದಲ್ಲಿ ಬೆಳೆಗೆ ನೀರು ಹಾಯಿಸುವ ಕೆಲಸದಲ್ಲಿ ನಿರತಳಾಗಿದ್ದ ಗೌರಮ್ಮಳಿಗೆ ಸ್ವಾಮಿ ಬರುವ ವಿಚಾರ ತಿಳಿದೇ‌ ಇರಲಿಲ್ಲ. ‌ಹಿಂದಿನಿಂದ ಬಂದ ಸ್ವಾಮಿ, ನೀರು ಬಿಡುವ ಸನಿಕೆಯಿಂದ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾನೆ. ಕೈ ಅಡ್ಡವಿಟ್ಟು ಅದನ್ನು ತಡೆಯಲು ಗೌರಮ್ಮ ಯತ್ನಿಸಿದ್ದಾಳೆ. ಕೈಯಲ್ಲಿದ್ದ ಕುಡುಗೋಲಿನಿಂದ ಕೈ ಮೇಲೆಯೂ ಹಲ್ಲೆ‌ ಮಾಡಿದ ಸ್ವಾಮಿ, ಗೌರಮ್ಮ ಹತ್ಯೆ ಮಾಡಿ ಅಲ್ಲಿಂದ‌‌ ಪರಾರಿಯಾಗಿದ್ದ. ಈಗ ಕನಕಪುರ ಗ್ರಾಮಾಂತರ ಪೊಲೀಸರು ಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಗೌರಮ್ಮಳ ಹತ್ಯೆಗೆ ಕೇವಲ ಸ್ವಾಮಿ ಮಾತ್ರ ಅಲ್ಲ; ಸ್ವಾಮಿಯ ಹಿಂದೆ ಇನ್ನೂ ಅನೇಕರು ಇದ್ದು ತನ್ನ ತಾಯಿಯನ್ನು ದ್ವೇಷಕ್ಕಾಗಿ ಕೊಲೆ ಮಾಡಲಾಗಿದೆ. ಸ್ವಾಮಿ ಬಿಟ್ಟು ಉಳಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ ಅಂತ ಮಗಳು ಆರೋಪ ಮಾಡಿದ್ದಾಳೆ.

ಗೌರಮ್ಮಳ ಹತ್ಯೆ ಮಾಡಿ ಪರಾರಿಯಾಗಿದ್ದ ಸ್ವಾಮಿಯನ್ನು ಕನಕಪುರ ಗ್ರಾಮಾಂತರ ಪೊಲೀಸರು ಟ್ರ್ಯಾಕ್ ಮಾಡಿ ಬಂಧಿಸಿದ್ದಾರೆ. ಕೊಲೆಯಾದ ಜಾಗ ಹಾಗೂ ಕೊಲೆಯ ಹಿಂದಿನ ಕಾರಣದ ಬಗ್ಗೆ ಪರಿಶೀಲನೆ ಮಾಡುತ್ತಿರುವ ಪೊಲೀಸರು ಗೌರಮ್ಮಳ ಕೊಲೆಯಲ್ಲಿ ಸ್ವಾಮಿ ಮಾತ್ರವೇ ಇದ್ದಾನಾ ಅಥವಾ ಇದರ‌ ಹಿಂದೆ ಬೇರೆಯದ್ದೇ ಕಾರಣ ಇದೆಯಾ ಅಂತ ಇನ್ನಷ್ಟು ತನಿಖೆಗೆ ಇಳಿದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:40 pm, Thu, 25 January 24